ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಂದಿನ ಬಾರಿ ನಮ್ಮದೇ ಸರ್ಕಾರ ಬರಲಿದೆ. ರಾಜ್ಯದ ಜನತೆಗೆ ನೀಡಿರುವ ಅಷ್ಟು ಭರವಸೆಗಳನ್ನು ಈಡೇರಿಸಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ BSYadiyurappa ಹೇಳಿದರು.
ಇಲ್ಲಿನ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಪ್ರ ಬಾಂಧವರ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಬಿಜೆಪಿ ಪರವಾದ ಅಲೆ ಇದೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ 130 ಸೀಟು ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ 80-85 ವಿಧಾನಸಭಾ ಕ್ಷೇತ್ರಗಳಿಗೆ ಪ್ರವಾಸ ಮಾಡಿ ಬಂದಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರದ ಸಚಿವರನ್ನು ರಾಜ್ಯಕ್ಕೆ ಪ್ರಚಾರ ಮಾಡಲು ಕಳುಹಿಸಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಮೋದಿ ಅವರೇ ಬಂದಿದ್ದರು. ಆ ದಿನ 3ರಿಂದ 4 ಲಕ್ಷ ಜನ ಸೇರಿದ್ದರು. ಅಷ್ಟೊಂದು ಬೆಂಬಲ ಮೋದಿ, ಅಮಿತ್ ಶಾ ಅವರಿಗಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಬರಬೇಕು ಎಂಬ ಅಪೇಕ್ಷೆ ಇದೆ. ಮೋದಿ ಅವರೇ ಎಲ್ಲಾ ಕಡೆ ಓಡಾಡುತ್ತಿದ್ದಾರೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಕ್ಷೇತ್ರ ಬಿಟ್ಟು ಉಳಿದೆಲ್ಲಾ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಶಿವಮೊಗ್ಗ ಕ್ಷೇತ್ರದ ಚನ್ನಬಸಪ್ಪ ಗೆಲುವು ನೂರಕ್ಕೆ ನೂರರಷ್ಟು ನಿಶ್ಚಿತ. ಏಕೆಂದರೆ ಇಲ್ಲಿ ಪ್ರಾಮಾಣಿಕ, ಸಜ್ಜನ ವ್ಯಕ್ತಿಯನ್ನು ನಿಲ್ಲಿಸಿದ್ದೇವೆ. ಮತದಾರರು ಬಿಜೆಪಿ ಪರವಾಗಿದ್ದಾರೆ ಎಂದರು.
ತಾವು ಮುಖ್ಯಮಂತ್ರಿ ಆಗಿದ್ದಾಗ ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೆ. 50 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ವಿಪ್ರ ಸಮಾಜಕ್ಕೆ ಬಹಳ ವರ್ಷದ ಕನಸು ನನಸಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಟ್ಟಿದ್ದಾರೆ. ಈ ಕೆಲಸ ಮಾಡುವ ಧೈರ್ಯ ಯಾರು ಮಾಡಿರಲಿಲ್ಲ. ಯಾರು ಮೀಸಲಾತಿಯನ್ನು ಸರ್ಕಾರ ವಾಪಸ್ ಪಡೆದಿಲ್ಲ. ದೇವಸ್ಥಾನ ಸ್ವಾಯತ್ತತೆ ಸಮಿತಿ ರಚನೆ ಮಾಡಿದ್ದೇವೆ. ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ನಾವು ಕೊಟ್ಟಿರುವ ಭರವಸೆ ಈಡೇರಿಸುತ್ತೇವೆ ಎಂದರು.
ಪಿಎಫ್ಐ ದೇಶ ವಿರೋಧಿ ಚಟುವಟಿಕೆಯಲ್ಲಿ ಭಯೋತ್ಪಾದನೆಯಲ್ಲಿ ತೊಡಗಿದ್ದ ಸಂಘಟನೆ. ಈ ಸಂಘಟನೆಯಿಂದ ಸಿದ್ದ ರಾಮಯ್ಯ ಸರ್ಕಾರದ ಅವಧಿಯಲ್ಲಿ 22 ಜನ ಹಿಂದು ಯುವಕರ ಕಗ್ಗೋಲೆ ಆಯ್ತು. ಈಗ ಕಾಂಗ್ರೆಸ್ನವರು ಪಿಎಫ್ಐ ಜೊತೆ ಭಜರಂಗದಳ ಹೋಲಿಸಿ ಮಾತನಾಡಿದ್ದು ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಿಪ್ಪು ಜಯಂತಿ ಮಾಡುವ ಮೂಲಕ ಸಿದ್ದರಾಮಯ್ಯ ಓಲೈಕೆ ರಾಜ ಕಾರಣ ಮಾಡಿದರು. ಟಿಪ್ಪು ಜಯಂತಿ ಯನ್ನು ಯಡಿಯೂರಪ್ಪ ರದ್ದು ಮಾಡಿದರು. ಕಾಂಗ್ರೆಸ್ ನವರು ಹಿಂದು ವಿರೋಧಿ ಹೇಳಿಕೆ ಕೊಡ್ತಿದ್ದಾರೆ. ಜನ ಇದೆಲ್ಲಾ ನೆನಪಿಟ್ಟುಕೊಂಡು ಮತ ಚಲಾಯಿಸಬೇಕು ಎಂದು ಕರೆ ನೀಡಿದರು.
Also read: ಶಿವಮೊಗ್ಗ | ಮೇ 13, 14ರಂದು ನಿಷೇದಾಜ್ಞೆ | ಮತದಾನ ಹಿನ್ನೆಲೆ ಸಂತೆ-ಜಾತ್ರೆ ನಿಷೇಧ: ಡಿಸಿ
ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಮಾತನಾಡಿ, ವಿಶ್ವ ದರ್ಜೆಯ ವಂದೇ ಭಾರತ್ ಇಲ್ಲಿಯೇ ಉತ್ಪಾದಿಸಿ, ಬಳಕೆ ಮಾಡುತ್ತಿದ್ದೇವೆ. ಇಂತಹ ಅತಿ ವೇಗದ ಹಾಗೂ ಅತ್ಯಾಧುನಿಕ ಸೌಕರ್ಯಗಳುಳ್ಳ ರೈಲುಗಳನ್ನು ಹೊಂದಿರುವ ಪ್ರಪಂಚದ ಏಳು ದೇಶಗಳ ಪೈಕಿ ಭಾರತವೂ ಒಂದಾಗಿದೆ. ಇದಕ್ಕೆ ಕಾರಣವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವ ಹಾಗೂ ದೂರದೃಷ್ಟಿಯಿಂದ ಎಂದು ಹೇಳಿದರು.
ದೇಶದಲ್ಲಿ ಅತಿ ವೇಗದ ರೈಲು ಸಂಚಾರ ಆರಂಭಿಸಬೇಕೆಂಬುದು ಪ್ರಧಾನಿ ಕನಸಾಗಿತ್ತು. ಅದಕ್ಕಾಗಿ ಅವರು ಮುಂದುವರಿದ ದೇಶಗಳಿಂದ ತಂತ್ರಜ್ಞಾನವನ್ನು ಇಲ್ಲವೇ ರೈಲ್ವೆ ಇಂಜಿನ್ ಆಮದು ಮಾಡಿಕೊಳ್ಳಲಿಲ್ಲ. ಇಲ್ಲಿಯೇ ಅದರ ಉತ್ಪಾದನೆ ಆಗಬೇಕೆಂದು ಬಯಸಿದ್ದರು. ಅವರ ಬದ್ಧತೆಯ ಪರಿಣಾಮವಾಗಿ ಅದು ಸಾಕಾರಾಗೊಂಡಿದೆ ಎಂದರು.
ಕೇವಲ ವಂದೇ ಭಾರತ್ ಮಾತ್ರವಲ್ಲ ರೈಲ್ವೆ ವಲಯಕ್ಕೆ ಕೇಂದ್ರ ಸರ್ಕಾರ ವಿಶೇಷ ಒತ್ತು ನೀಡಿದೆ. ಕರ್ನಾಟಕದ 55 ನಿಲ್ದಾಣಗಳು ಇಂದು ವಿಶ್ವ ಮಟ್ಟದ ಸೌಕರ್ಯ ಹೊಂದಿದೆ. ಕರ್ನಾಟಕಕ್ಕೆ 2014ಕ್ಕೂ ಪೂರ್ವದಲ್ಲಿ ರೈಲ್ವೆ ಬಜೆಟ್ನಲ್ಲಿ 800 ಕೋಟಿ ರೂ. ನೀಡಲಾಗುತ್ತಿತ್ತು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದು ದ್ವಿಗುಣಗೊಂಡಿತು. ವರ್ಷದಿಂದ ವರ್ಷಕ್ಕೆ ಅನುದಾನದಲ್ಲಿ ಹೆಚ್ಚಳವಾಗಿ ಈಗ 7,500 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಇದು ಮೋದಿ ಸರ್ಕಾರದ ಶಕ್ತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ವಕ್ತಾರೆ ಮಾಳವಿಕಾ ಅವಿನಾಶ್, ಮಾಜಿ ಎಂಎಲ್ಸಿ ಎಂ.ಬಿ. ಭಾನುಪ್ರಕಾಶ್, ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಸಿ. ನಟರಾಜ್ ಭಾಗವತ್, ಎಂ. ಶಂಕರ್, ಎಸ್. ದತ್ತಾತ್ರಿ, ದೀನದಯಾಳು, ಎ.ಜೆ.ರಾಮಚಂದ್ರ ಇತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post