ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಕ್ಕಳ ಕಲಿಕಾ ಸಾಮರ್ಥ್ಯ ಕೇಂದ್ರಿತ ಬೋಧನೆ ಪರಿಣಾಮಕಾರಿಯಾಗಿದ್ದು, ಶಿಕ್ಷಕ ವರ್ಗ ಮಕ್ಕಳ ಕಲಿಕಾ ಸಾಮರ್ಥ್ಯಗಳನ್ನು ಕಂಡುಕೊಳ್ಳುವ ಅಗತ್ಯ ವಿಧಾನಗಳನ್ನು ಅನುಸರಿಸಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಅಭಿಪ್ರಾಯಪಟ್ಟರು.
ಶುಕ್ರವಾರ ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ದಾವಣಗೆರೆಯ ಸಂವೇದ ತರಬೇತಿ ಮತ್ತು ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಎರಡು ದಿನಗಳ ಮಕ್ಕಳ ಕಲಿಕಾ ಸಾಮರ್ಥ್ಯ ಸುಧಾರಣಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಐಐಟಿ ಸಂಸ್ಥೆಗಳಿಂದ ಸಾಮಾನ್ಯ ಶಾಲೆಗಳವರೆಗೆ ವಿವಿಧ ಬಗೆಯ ಕಲಿಕಾ ಸಾಮರ್ಥ್ಯವನ್ನು ಹೊಂದಿರುವ ಮಕ್ಕಳು ತರಗತಿಗಳಲ್ಲಿ ಕಾಣಸಿಗುತ್ತಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ತಹಬಂದಿಗೆ ತರುವುದು ಸವಾಲಿನ ಕೆಲಸವೇ ಸರಿ. ಅಂತಹ ಸಹಾನುಭೂತಿಯೊಂದಿಗೆ ನಾವೀನ್ಯಯುತ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಿ.
Also read: ಗಮನಿಸಿ! ಈ ಎರಡು ದಿನ ಶಿವಮೊಗ್ಗ ನಗರದಲ್ಲಿ ನೀರು ಸರಬರಾಜು ಇರುವುದಿಲ್ಲ
ನಿಧಾನಗತಿಯ ಕಲಿಕೆಯಲ್ಲಿರುವ ವಿದ್ಯಾರ್ಥಿಯಲ್ಲಿ ಐಕ್ಯೂ ಸಾಮರ್ಥ್ಯ ಹೆಚ್ಚಿರಬಹುದು. ಹಾಗಾಗಿಯೇ ಮಕ್ಕಳಲ್ಲಿರುವ ಶಕ್ತಿ ಮತ್ತು ಅಸ್ವಸ್ಥತೆಯನ್ನು ಸರಿಯಾಗಿ ವಿಭಾಗಿಸಿಕೊಳ್ಳಿ. ಮಕ್ಕಳ ಶೈಕ್ಷಣಿಕ ಮತ್ತು ಕೌಶಲ್ಯತೆಯ ಅಭಿವೃದ್ದಿಯಲ್ಲಿ ಸಮಾನ ಪರಿಶ್ರಮ ನಿಮ್ಮದಾಗಲಿ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಸಂವೇದ ತರಬೇತಿ ಮತ್ತು ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಸುರೇಂದ್ರನಾಥ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಅನೇಕ ಮಕ್ಕಳಿಗೆ ಗುಣಮಟ್ಟದ ಸೇವೆಯನ್ನು ನೀಡಲು ಹಾಗೂ ಕಲಿಕಾ ಸಂವೇದನೆಯನ್ನು ಅಭಿವೃದ್ಧಿಪಡಿಸುವಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದು, ಅತ್ಯುತ್ತಮ ಪ್ರತ್ರಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಕೆಲವು ಬೋಧನಾ ಮತ್ತು ಕಲಿಕೆಯ ವಿಧಾನಗಳಿಗೆ ನಾವೀನ್ಯತೆಯ ಮಾರ್ಪಾಡುಗಳನ್ನು ಮಾಡುವ ಮೂಲಕ ಮಕ್ಕಳ ಕಲಿಕೆಯಲ್ಲಿನ ಇಂತಹ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ನವೀನ ಪಾಯಸ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ನೀತಾ.ಎನ್, ಶಶಿಕಲಾ, ನಾಗರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post