ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸೂಚನೆ ನೀಡಿದರು.
ಅವರು ಗುರುವಾರ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಶಿಮ್ಸ್ನಲ್ಲಿರುವ 13ಪ್ರಯೋಗಾಲಯಗಳನ್ನು 1.21ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದ್ದು, ಐದು ಪ್ರಯೋಗಾಲಯಗಳ ನವೀಕರಣ ಪೂರ್ಣಗೊಂಡಿದೆ. 1.90ಕೋಟಿ ರೂ. ವೆಚ್ಚದಲ್ಲಿ ಶರಾವತಿ ಬ್ಲಾಕ್ ಕಟ್ಟಡ ನವೀಕರಣ, 1.65 ಕೋಟಿ ರೂ. ವೆಚ್ಚದಲ್ಲಿ 3ಬೋಧನಾ ಕೊಠಡಿ, 4.5ಕೋಟಿ ರೂ. ವೆಚ್ಚದಲ್ಲಿ ಕ್ಯಾಥ್ಲ್ಯಾಬ್ಗೆ ಉಪಕರಣಗಳನ್ನು ಖರೀದಿಸಲು ಟೆಂಡರ್ ಮಾಡಲಾಗಿದೆ. 5.32ಕೋಟಿ ರೂ. ವೆಚ್ಚದಲ್ಲಿ ಗೃಹ ವೈದ್ಯರ ವಸತಿ ನಿಲಯ ಕಟ್ಟಡ ಕಾಮಗಾರಿ ಚಾಲನೆಯಲ್ಲಿದೆ. ಇದೇ ರೀತಿ 2.16ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಮರಣೋತ್ತರ ಪರೀಕ್ಷಾ ಕೇಂದ್ರ, ಉಪಕರಣ ಮತ್ತು ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ನಿರ್ಮಾಣ, 21.50ಕೋಟಿ ರೂ. ವೆಚ್ಚದಲ್ಲಿ ಎಂಸಿಎಚ್ ಬ್ಲಾಕ್ ನಿರ್ಮಾಣ12.49 ಕೋಟಿ ರೂ. ವೆಚ್ಚದಲ್ಲಿ ಎಂಸಿಎಚ್ ಬ್ಲಾಕ್ಗೆ ಉಪಕರಣ ಖರೀದಿಗೆ ಪ್ರಕ್ರಿಯೆ ನಡೆಸಲಾಗಿದೆ ಎಂದು ಶಿಮ್ಸ್ ಆಡಳಿತಾಧಿಕಾರಿ ಶಿವಕುಮಾರ್ ಅವರು ಮಾಹಿತಿ ನೀಡಿದರು.
ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಸಮಯದ ಒಳಗಾಗಿ ಗುಣಮಟ್ಟ ಕಾಪಾಡಿಕೊಂಡು ಪೂರ್ಣಗೊಳಿಸುವಂತೆ ಸಚಿವರು ತಿಳಿಸಿದರು.
ಚೀಟಿ ಬರೆಯಬಾರದು
ಯಾವುದೇ ಕಾರಣಕ್ಕೂ ರೋಗಿಗಳಿಗೆ ಹೊರಗಿನಿಂದ ಔಷಧಿಯನ್ನು ತರಿಸಲು ಚೀಟಿ ಬರೆಯಬಾರದು. ಒಂದು ವೇಳೆ ಅನಿವಾರ್ಯವಾಗಿ ಚೀಟಿ ಬರೆದರೂ ಬಿಪಿಎಲ್ ಕಾರ್ಡುದಾರರಿಗೆ ಆ ಮೊತ್ತವನ್ನು ಪುನರ್ ಪಾವತಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಇರುವ ರೀತಿಯಲ್ಲಿ ಲಭ್ಯವಿರುವ ವೈದ್ಯರ ಹೆಸರು ಸಮಯ ಇತ್ಯಾದಿಗಳ ವಿವರಗಳು ಎಲ್ಇಡಿ ಪರದೆಯಲ್ಲಿ ಪ್ರಚುರಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಶಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ, ಆಡಳಿತ ಮಂಡಳಿ ಸದಸ್ಯರಾದ ಡಾ.ಗೌತಮ್, ವಾಣಿ ಕೋರಿ, ದಿವಕರ ಶೆಟ್ಟಿ, ಜಿಲ್ಲಾ ಸರ್ಜನ್ ಡಾ.ರಘುನಂದನ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post