ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗುತ್ತದೆಂದು ನಿರೀಕ್ಷೆ ಕೂಡ ಮಾಡಿರಲಿಲ್ಲ. ಆದರೆ ಕಾಂಗ್ರೆಸ್ನ ಸುಳ್ಳು ಆಶ್ವಾಸನೆಗಳನ್ನು ಜನರು ನಂಬಿ ಮೋಸ ಹೋಗಿದ್ದಾರೆ. ಮುಂದೆ ವಾಸ್ತವ ಸ್ಥಿತಿ ಅರಿವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ BSYadiyurappa ಹೇಳಿದರು.
ಕೇಂದ್ರ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಪೆಸಿಟ್ ಕಾಲೇಜಿನಲ್ಲಿ ಜಿಲ್ಲಾ ಬಿಜೆಪಿಯಿಂದ ಆಯೋಜಿಸಿದ್ದ ಜನಸಭೆ-ಸಾರ್ವಜನಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಗ್ಯಾರಂಟಿಗಳನ್ನು ಈಡೇರಿಸುವ ಶಕ್ತಿ, ಸಾಮರ್ಥ್ಯ ಕಾಂಗ್ರೆಸ್ ಸರ್ಕಾರಕ್ಕಿಲ್ಲ. ಕಾಂಗ್ರೆಸ್ ನೀಡಿದ ಗ್ಯಾರಂಟಿಗಳನ್ನು ಜಾರಿಗೆ ತರುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಇನ್ನುಂದೆ ಆಗಬೇಕಿದೆ. ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ. ಗ್ಯಾರಂಟಿಗಳ ವೈಫಲ್ಯವನ್ನೇ ಅಸ್ತವಾಗಿಟ್ಟುಕೊಂಡು ಹೋರಾಟ ನಡೆಸಬೇಕಿದೆ. ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಿ ಹೇಳಬೇಕಿದೆ ಎಂದರು.
ಕೆಲವು ಕಾರಣಗಳಿಂದ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಪಕ್ಷಕ್ಕೆ ಹಿನ್ನಡೆ ಆಗಿರಬಹುದು. ಸೋತ ಮಾತ್ರಕ್ಕೆ ಧೃತಿಗೆಡುವ ಅಗತ್ಯವಿಲ್ಲ. ಸತತ ಪರಿಶ್ರಮದಿಂದ ಮೇಲೇಳಬೇಕಿದೆ. ಮತ್ತೊಮ್ಮೆ ಪಕ್ಷವನ್ನು ಸಂಘಟಿಸಬೇಕಿದೆ. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮ ವಹಿಸಬೇಕಿದೆ ಎಂದರು.
ವಿಧಾನಸಭೆ ಮತ್ತು ವಿಧಾನ ಪರಿಷತ್ನಲ್ಲಿ ಶಕ್ತಿಮೀರಿ ಕೆಲಸ ಮಾಡಬೇಕು. ಮುಂದೆ ಲೋಕಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳು ಎದುರಾಗಲಿದ್ದು ಮುಖಂಡರು, ಕಾರ್ಯಕರ್ತರು ಮತದಾರರ ಮನೆಗೆ ಹೋಗಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸಬೇಕು. ಜಾತಿಯ ವಿಷಬೀಜ ಬಿತ್ತಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.
Also read: ಬ್ರಾಹ್ಮಣರ ವಿರುದ್ದ ಸಚಿವ ರಾಜಣ್ಣ ನೀಡಿದ ವಿವಾದಾತ್ಮಕ ಹೇಳಿಕೆಯೇನು?
ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ಬರುತ್ತೇನೆ. ಸಮಯವನ್ನು ನೀವೇ ಹೇಳಿ, ದಿನ ನಾನು ಸೇರಿದಂತೆ ಪಕ್ಷದ ಮುಖಂಡರು ಒಟ್ಟಾಗಿ ಬಂದು ಚರ್ಚೆ ಮಾಡಿ ಪಕ್ಷ ಸಂಘಟನೆಗೆ ಬಲ ತುಂಬುವ ಕೆಲಸ ಮಾಡುತ್ತೇವೆ. ಅಭಿವೃದ್ಧಿ ಕಾರ್ಯಗಳ ಕಡೆ ಗಮನ ಕೊಡಬೇಕಿದೆ. ಆತ್ಮವಿಶ್ವಾಸದಿಂದ ಗಟ್ಟಿಯಾಗಿ ನಿಂತು ಆಡಳಿತ ಪಕ್ಷದ ಹುಳುಕನ್ನು ಪತ್ತೆ ಮಾಡಿ ಹೋರಾಟಕ್ಕೆ ಅಣಿಯಾಗಬೇಕಿದೆ. ಎಸ್ಸಿ-ಎಸ್ಟಿಗಳನ್ನು ಒಟ್ಟಾಗಿ ಕರೆದುಕೊಂಡು ಹೋಗಬೇಕಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ರಚನಾತ್ಮಕ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಬೇಕಿದೆ. ಒಂಬತ್ತು ವರ್ಷದ ಸಾಧನೆಯನ್ನು ವಿಭಿನ್ನವಾಗಿ ಮಾಡಲು ತೀರ್ಮಾನಿಸಿದ್ದು ಜೂ.30ರಿಂದ ಜು.30ರವರೆಗೆ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಹಿರಿಯರ ಸಮಾವೇಶ, ಉದ್ಯಮಿಗಳ ಸಮಾವೇಶ ಸೇರಿ ನಾನಾ ಸಮಾವೇಶ ನಡೆಸಲಾಗುವುದು, ಬಿಜೆಪಿ ಸೋಲು ತಾತ್ಕಾಲಿಕ. ಈಡೇರಿಸಲು ಸಾಧ್ಯವಾಗದ ಜನಪರ ಯೋಜನೆಗಳ ಭರವಸೆಯ ಗ್ಯಾರಂಟಿಗಳನ್ನು ನೀಡಿ ಗೆಲ್ಲಲಾಗಿದೆ. ಈ ಗೆಲುವು ನಿರಂತರವಾಗಿರುವುದಿಲ್ಲ. ಅವನ್ನು ಈಡೇರಿಸದಿದ್ದರೆ ಹೋರಾಟ ಮಾಡಲಾಗುತ್ತದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಶಾಸಕರಾದ ಅರಗ ಜ್ಞಾನೇಂದ್ರ, ಬಿ.ವೈ. ವಿಜಯೇಂದ್ರ, ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಮಾಜಿ ಶಾಸಕರಾದ ಹರತಾಳು ಹಾಲಪ್ಪ, ಕೆ.ಬಿ. ಅಶೋಕ್ ನಾಯ್ಕ, ಪ್ರಮುಖರಾದ ಗಿರೀಶ್ ಪಟೇಲ್, ಎ.ಎನ್. ನಟರಾಜ್, ಎಸ್.ಟಿ. ಬಳಿಗಾರ್, ಡಾ. ರಾಜನಂದಿನಿ ಕಾಗೋಡು ಇತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post