ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ವಿದೇಶಿಯರಿಗೆ ಹೋಲಿಕೆ ಮಾಡಿದರೆ ಭಾರತೀಯರಿಗೆ ರೋಗ ನಿರೋಧಕ ಶಕ್ತಿ ಅಧಿಕವಾಗಿದ್ದು, ಇದರೊಂದಿಗೆ ಆತ್ಮಸ್ಥೈರ್ಯವೂ ಸಹ ಗಟ್ಟಿಯಾಗಿದ್ದರೆ ಎಂತಹ ವೈರಸನ್ನೂ ಸಹ ಎದುರಿಸಬಹುದು ಎಂದು ಖ್ಯಾತ ಆರ್ಯುವೇದಿಕ್ ತಜ್ಞ ಡಾ.ಗಿರಿಧರ್ ಕಜೆ ಹೇಳಿದ್ದಾರೆ.
ಕೋವಿಡ್ ಸುರಕ್ಷಾ ಪಡೆಯ ವತಿಯಿಂದ ನಗರದ ನಾಗರಿಕರಿಗೆ ರೋಗ ನಿರೋಧಕ ಶಕ್ತಿವರ್ಧಕ ಆರ್ಯುವೇದಿಕ್ ಕಿಟ್ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಹಳಷ್ಟು ವಿದೇಶಗಳಲ್ಲಿ ಮಕ್ಕಳು ಹುಲ್ಲು ಹಾಗೂ ಸ್ವಚ್ಛ ನೆಲದ ಮೇಲೆ ಆಟವಾಡುತ್ತಾರೆ. ಹೀಗಾಗಿ ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ. ಆದರೆ, ನಮ್ಮ ದೇಶದಲ್ಲಿ ಮಕ್ಕಳು ಹೆಚ್ಚಾಗಿ ಮಣ್ಣಿನೊಂದಿಗೇ ಆಟವಾಡುತ್ತಾರೆ. ಈ ಕಾರಣದಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಎಂದು ಅಭಿಪ್ರಾಯಪಟ್ಟರು.
ಎಲ್ಲ ವೈರಸ್’ಗಳಂತೆ ಕೊರೋನಾ ಸಹ ಒಂದು ವೈರಸ್ ಅಷ್ಟೇ. ಭಾರತಕ್ಕೆ ಬರುವ ಚೀನಾ ಪಾಡಕ್ಟ್’ಗಳು ಹೇಗೆ ಡಮ್ಮಿಯೋ, ಹಾಗೆಯೇ ಕೊರೋನಾ ಸಹ ಡಮ್ಮಿ. ಎಲ್ಲ ವೈರಸ್’ಗಳಿಗೆ ಮುಂಜಾಗ್ರತೆ ವಹಿಸವಂತೆ ಇದಕ್ಕೂ ಸಹ ಮುಂಜಾಗ್ರತೆ ವಹಿಸುವುದು ಹಾಗೂ ಆತ್ಮಸ್ಥೈರ್ಯವನ್ನು ವೃದ್ಧಿಸಿಕೊಂಡರೆ ಕೊರೋನಾದಿಂದ ಯಾವುದೇ ಅಪಾಯವಾಗದು ಎಂದರು.
ಅಮೃತಬಳ್ಳಿ ವಿಶೇಷತೆ
ಪ್ರತಿಯೊಬ್ಬರೂ ಪ್ರತಿನಿತ್ಯವೂ ತಪ್ಪದೇ ಅಮೃತಬಳ್ಳಿಯನ್ನು ಬಳಸಬೇಕು. ಶುಗರ್ ಇದ್ದವರಲ್ಲಿ ಶುಗರ್ ನಿಯಂತ್ರಣ, ಬಿಪಿ ಇದ್ದವರಲ್ಲಿ ಬಿಪಿ ನಿಯಂತ್ರಣ, ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ ಸೇರಿದಂತೆ ಯಾರಲ್ಲಿ ಯಾವ ರೀತಿ ಆರೋಗ್ಯ ಸಮಸ್ಯೆ ಇರುತ್ತದೋ ಅದನ್ನು ಅಮೃತಬಳ್ಳಿ ಸರಿಪಡಿಸುತ್ತದೆ. ಅಂತಹ ವಿಶೇಷ ಗುಣವನ್ನು ಇದು ಹೊಂದಿದೆ ಎಂದರು.
ಈಗ ವಿತರಿಸಲಾಗುತ್ತಿರುವ ಕಿಟ್’ನಲ್ಲಿ ಸಂಶಮನಿವಟಿ ಎಂಬ ರೋಗ ನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆಯಿದ್ದು, ಇದನ್ನು ಅಮೃತಬಳ್ಳಿಯಿಂದ ತಯಾರಿಸಲಾಗಿದೆ. ಆಯುಷ್ ಕಷಾಯ ಪುಡಿಯನ್ನು ತುಳಸಿ ದಾಲ್ಚಿನ್ನಿ, ಶುಂಠಿ, ಕಾಳುಮೆಣಸುಬಳಸಿ ತಯಾರಿಸಲಾಗಿದ್ದು, ಇದು ವೈರಸನ್ನು ಕೊಲ್ಲುತ್ತದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಆರ್ಯುವೇದದಲ್ಲಿ ಯಾರು ಪ್ರಮುಖರು ಎಂದರೆ ಡಾ.ಗಿರಿಧರ್ ಕಜೆ ಎಂಬುದು ಜನಜನಿತವಾಗಿದೆ. ಇಂತಹ ವೈದ್ಯರು ನಮ್ಮೂರಿಗೆ ಬಂದು ಕಾರ್ಯಕ್ರಮ ಉದ್ಘಾಟನೆ ಮಾಡಿರುವುದು ಸಂತೋಷವಾಗಿದೆ. ನಗರದ ಜನರ ಆರೋಗ್ಯವನ್ನು ವೃದ್ದಿಸುವ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಾಗೂ ನಮ್ಮೂರಿನ ಜನರಲ್ಲಿ ವೈರಸ್ ವಿರುದ್ಧ ಹೋರಾಡಲು ಆತ್ಮಸ್ಥೈರ್ಯ ತುಂಬುವ ಸಲುವಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದೇವೆ. ಶಿವಮೊಗ್ಗ ನಗರದ ಎಲ್ಲ ನಾಗರಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೋರಿದರು.
ಜಿಪಂ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ. ಕಾಂತೇಶ್ ಅವರು ಡಾ.ಗಿರಿಧರ್ ಕಜೆ ಅವರ ಪರಿಚಯ ಮಾಡಿಕೊಟ್ಟು, ಮಾತನಾಡಿದರು. ಕಾರ್ಯಕ್ರಮದಲ್ಲಿ ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಆರ್’ಎಸ್’ಎಸ್ ಪ್ರಮುಖ ಪಟ್ಟಾಭಿರಾಮ್, ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಹಾಗೂ ಆಯನೂರು ಮಂಜುನಾಥ್ ಸೇರಿದಂತೆ ಹಲವು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post