ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ವಿಧಾನಸಭಾ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತಿ ದೊಡ್ಡ ಹಬ್ಬವಾದ ಮತದಾನ ಪ್ರಕ್ರಿಯೆ ಆರಂಭಕ್ಕೆ ಈಗಾಗಲೇ ಸಕಲ ಸಿದ್ಧತೆ ನಡೆದಿದ್ದು, ಮತದಾರರನ್ನು ಓಲೈಸಲು ಕೊನೆಯ ಹಂತದ ಕಸರತ್ತು ನಡೆದಿದೆ.
ಮೇ 10ರ ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಸುಗಮವಾಗಿ ಮತದಾನ ನಡೆಯಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ. ನಿಯೋಜನೆಗೊಂಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಯೋಜಿತ ಮತಗಟ್ಟೆಗಳಿಗೆ ತೆರಳಿದರು.
ವಿಧಾನಸಭಾ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಶುರುವಾಗಿದ್ದು, ಮತಗಟ್ಟೆಗೆ ಬೂತ್ ಗಳಿಗೆ ತೆರಳಲು ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಸಿದ್ದವಾಗಿದೆ. ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮತಗಟ್ಟೆಗೆ ತೆರಳಲು ಚುನಾವಣಾ ಸಿಬ್ಬಂದಿಗಳು ಸಜ್ಜಾಗಿದ್ದಾರೆ. ಮತದಾನ ಮೇ.10ರ ಬುಧವಾರ ನಡೆಯಲಿದ್ದು, ನಿಯೋಜನೆಗೊಂಡ ಸಿಬ್ಬಂದಿ ಮಂಗಳವಾರ ಮಸ್ಟರಿಂಗ್ ಕಾರ್ಯ ಪೂರ್ಣ ಗೊಳಿಸಿ ಮತಗಟ್ಟೆಗಳಿಗೆ ತೆರಳಿದರು. ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿ ಆವರಣದಲ್ಲಿ ಇಂದು ಮತಗಟ್ಟೆಗಳ ಮಸ್ಟರಿಂಗ್ ಪ್ರಕ್ರಿಯೆ ನಡೆಯಿತು.
ಬೆಳಿಗ್ಗೆಯಿಂದಲೇ ಚುನಾವಣಾ ಸಿಬ್ಬಂದಿಗಳು ರಾಷ್ಟ್ರೀಯ ಶಿಕ್ಷಣ ಸಮಿತಿ ಆವರಣದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರ, ವಿವಿ ಪ್ಯಾಟ್, ಇವಿಎಂ ಸೀಲ್ ಮಾಡುವ ಟ್ಯಾಗ್, ಕ್ಯಾಂಡಲ್ ಸೇರಿದಂತೆ ಚುನಾವಣೆಗೆ ಸಂಬಂಧಿಸಿದಂತೆ ಅಗತ್ಯ ಸಾಮಗ್ರಿಗಳನ್ನು ಪಡೆದುಕೊಂಡು, ತಾವು ನಿಯೋಜಿತರಾಗಿರುವ ಮತಗಟ್ಟೆ ಕೇಂದ್ರಗಳತ್ತ ಪ್ರಯಾಣ ಬೆಳೆಸಿದರು.
ತಮಗೆ ಯಾವ ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡು ನಂತರ ಇವಿಎಂ ಯಂತ್ರ, ವಿವಿ ಪ್ಯಾಟ್ಗಳ ತಾಂತ್ರಿಕ ವಿವರಣೆ ಹಾಗೂ ಪರಿಶೀಲನೆ ನಡೆಸಿದರು. ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಮಾಹಿತಿ ನೀಡಲು ವಿಶೇಷ ಡೆಸ್ಕ್ಗಳನ್ನು ಸ್ಥಾಪಿಸಲಾಗಿತ್ತು. ಅಲ್ಲಿ ನಿಯೋಜನೆಗೊಂಡಿರುವ ಸ್ಥಳ, ಅದೇ ಸ್ಥಳಕ್ಕೆ ನಿಯೋಜಿತಗೊಂಡಿರುವ ಇನ್ನಿತರ ಸಿಬ್ಬಂದಿಗಳ ವಿವರ ನೀಡಲಾಯಿತು.
ಬಸ್ ವ್ಯವಸ್ಥೆ : ತಾಲ್ಲೂಕು ಕೇಂದ್ರಗಳಿಗೆ ತೆರಳಲು ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಯವರೆಗೂ ಬಸ್ ಸೌಕರ್ಯ ಕಲ್ಪಿಸಲಾಗಿತ್ತು. ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗಲು ಕೆಎಸ್ಆರ್ಟಿಸಿ ಬಸ್ಗಳು ಸಾಲು ಸಾಲಾಗಿ ನಿಂತಿದ್ದವು. ಯಾವ ಕ್ಷೇತ್ರಕ್ಕೆ ಯಾವ ಬಸ್ ಹೋಗುತ್ತದೆ ಎಂಬ ಮಾಹಿತಿ ಕಲೆ ಹಾಕಿ, ಸಿಬ್ಬಂದಿ ಬಸ್ ಹತ್ತಿ ಕರ್ತವ್ಯಕ್ಕೆ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಒಟ್ಟು 8156 ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ಕರೆದೊಯ್ಯಲು ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ಗ್ರಾಮಾಂತರಕ್ಕೆ 16 ಬಸ್, ಭದ್ರಾವತಿಗೆ 40, ಶಿವಮೊಗ್ಗ ನಗರಕ್ಕೆ 15, ತೀರ್ಥಹಳ್ಳಿಗೆ 45, ಶಿಕಾರಿಪುರಕ್ಕೆ 43, ಸೊರಬಕ್ಕೆ 36, ಸಾಗರಕ್ಕೆ 31 ಮತ್ತು ಹೊಸನಗರಕ್ಕೆ 14 ಸೇರಿದಂತೆ ಒಟ್ಟು 240 ಬಸ್ಗಳನ್ನು ನಿಯೋಜಿಸಲಾಗಿದೆ.
14.72 ಲಕ್ಷ ಮತದಾರರು : ಚುನಾವಣೆಯಲ್ಲಿ ಮತ ಚಲಾಯಿಸಲು ಜಿಲ್ಲೆಯಲ್ಲಿ 14.72 ಲಕ್ಷ ಮಂದಿ ಹೆಸರು ನೋಂದಣಿ ಮಾಡಿಕೊಂಡಿದ್ದರೆ, ಕಳೆದ ಚುನಾವಣೆಯಂತೆ ಈ ಬಾರಿಯೂ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ. ಐದು ಕ್ಷೇತ್ರಗಳಲ್ಲಿ ಪುರುಷರಿಗಿಂತಲೂ ಮಹಿಳಾ ಮತದಾರರೇ ಹೆಚ್ಚಿರುವುದು ವಿಶೇಷ.
ಇದೇ ಮೊದಲ ಭಾರಿ 33,055 ಯುವ ಮತದಾರರು ಮತ ಚಲಾಯಿಸಲಿದ್ದಾರೆ. 32 ತೃತೀಯ ಲಿಂಗಿಗಳು, 7,28,886 ಪುರುಷ ಮತದಾರರು, 7,43,713 ಮಹಿಳಾ ಮತದಾರರು ಸೇರಿದಂತೆ ಒಟ್ಟು 14,72,631 ಮಂದಿ ಮತದಾರರು ಪಟ್ಟಿಯಲ್ಲಿದ್ದಾರೆ.
ಮತದಾನದ ದಿನದಂದು ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ. ಗುಂಪು ಸೇರಿದಂತೆ ಆದೇಶ ಹೊರಡಿಸಲಾಗಿದೆ. ಪ್ರತಿ ಮತಗಟ್ಟೆಗೂ ಭದ್ರತಾ ಸಿಬ್ಬಂದಿಯನ್ನು ಯೋಜಿಸಲಾಗಿದೆ.
ಜಿಲ್ಲೆಯಲ್ಲಿ 1,774 ಮತಗಟ್ಟೆಗಳನ್ನು ಹಿಂದಿನ ಚುನಾವಣೆಯಲ್ಲಿ ಗುರುತಿಸಲಾಗಿತ್ತು. 1,400 ಮತದಾರರು ಇರುವ ಕಡೆಗಳಲ್ಲಿ ಹೆಚ್ಚುವರಿಯಾಗಿ ಒಂದು ಮತಗಟ್ಟೆ ತೆರೆಯುವಂತೆ ಚುನಾವಣಾ ಆಯೋಗ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 8 ಮತಗಟ್ಟೆ ತೆರೆಯಲಾಗಿದೆ. ಇದರೊಂದಿಗೆ ಮತಗಟ್ಟೆ ಸಂಖ್ಯೆ 1,7824 ಏರಿಕೆಯಾಗಿದೆ.
ಮತ ಚಲಾಯಿಸಲು ಬೇಕಾದ ಅಗತ್ಯ ದಾಖಲೆ :
ಮತದಾರರ ಭಾವಚಿತ್ರ ಚೀಟಿ ಮತದಾನ ಮಾಡಲು ಅಗತ್ಯ ದಾಖಲೆಯಾಗಿದೆ. ಇದು ಇಲ್ಲದೆ ಇದ್ದರೆ, ಆಧಾರ್ ಕಾರ್ಡ್, ನರೇಗಾ ಉದ್ಯೋಗ ಗುರುತಿನ ಚೀಟಿ, ಅಂಚೆ ಕಚೇರಿ ಮತ್ತು ಬ್ಯಾಂಕ್ಗಳಲ್ಲಿ ನೀಡಿರುವ ಭಾವಚಿತ್ರ ಉಳ್ಳ ಪಾಸ್ ಪುಸ್ತಕ, ಕಾರ್ಮಿಕ ಇಲಾಖೆಯಿಂದ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಆರ್ ಜಿ ಐ ಮತ್ತು ಎನ್ಪಿಆರ್ ಮೂಲ ನೀಡಿರುವ ಸ್ಮಾರ್ಟ್ ಕಾರ್ಡ್, ಭಾರತದ ಪಾಸ್ಪೋರ್ಟ್, ಭಾವಚಿತ್ರ ಇರುವ ಪಿಂಚಣಿ ಕಾರ್ಡ್, ವಿಶಿಷ್ಠ ಅಂಗವೈಕಲ್ಯ ಪಾಸ್ ಇದ್ದರೂ ಸಾಕಾಗುತ್ತದೆ.
ಮದ್ಯ ಮಾರಾಟ ನಿಷೇಧ:
ಮೇ 8ರ ಸಂಜೆ 6ರಿಂದ ಮೇ 10 ರ ಮಧ್ಯರಾತ್ರಿ 12 ಗಂಟೆವರೆಗೆ ಎಲ್ಲ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ಮಳಿಗೆಗಳಲ್ಲಿ ಮದ್ಯ ಮಾರಾಟ ಮತ್ತು ಪೂರೈಕೆ ನಿಷೇಧಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಅದೇ ರೀತಿ, ಮತ ಎಣಿಕೆ ದಿನವೂ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಮೇ 13ರಂದು ಬೆಳಗ್ಗೆ 6ರಿಂದ ಮಧ್ಯರಾತ್ರಿ 12 ಗಂಟೆವರೆಗೆ ಮದ್ಯದಂಗಡಿಗಳು ಬಂದ್ ಆಗಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post