ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯುವಕನೊಬ್ಬನ ಪ್ರೀತಿಯ #Love ನಿರಂತರ ಕಾಟಕ್ಕೆ ಬೇಸತ್ತ ಅಪ್ರಾಪ್ತೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ಜಿಲ್ಲೆಯ ಗೊಂಧೀಚಟ್ನಳ್ಳಿಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಬಾಲಕಿಯನ್ನು ವರ್ಷಿಣಿ(14) ಎಂದು ಗುರುತಿಸಲಾಗಿದ್ದು, ಯುವಕನನ್ನು ತ್ಯಾಗರಾಜ್(23) ಎಂದು ಹೇಳಲಾಗಿದೆ.
ವರ್ಷಿಣಿಗೆ ತ್ಯಾಗರಾಜ್ ಪ್ರೀತಿಸುವಂತೆ ಹಲವು ದಿನಗಳಿಂದ ನಿರಂತರವಾಗಿ ಪೀಡಿಸುತ್ತಿದ್ದನು. ಆದರೆ, ಆಕೆ ಆತನ ಪ್ರೀತಿಯನ್ನು ನಿರಾಕರಿಸಿ, ತಿರಸ್ಕರಿಸಿದ್ದಳು ಎನ್ನಲಾಗಿದೆ.
ಈ ವಿಚಾರ ಬಾಲಕಿಯ ಮನೆಯವರಿಗೆ ತಿಳಿದು, ತ್ಯಾಗರಾಜನನ್ನು ಕರೆದು ಎಚ್ಚರಿಕೆ ಸಹ ಕೊಟ್ಟಿದ್ದರು.
ಶಿವಮೊಗ್ಗದ ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಬಾಲಕಿ, ಶೈಕ್ಷಣಿಕವಾಗಿ ಮುಂದಿದ್ದಳು. ನಮ್ಮ ಹುಡುಗಿಯ ಹಿಂದೆ ಬೀಳಬೇಡ, ಆಕೆ ಶಿಕ್ಷಣ ಹಾಗೂ ಜೀವನಕ್ಕೆ ತೊಂದರೆ ಕೊಡಬೇಡ ಎಂದು ಪೋಷಕರು ವಿನಂತಿ ಸಹ ಮಾಡಿದ್ದರು.
ಇನ್ನು ಮುಂದೆ ಆಕೆಯ ಹಿಂದೆ ಬೀಳುವುದಿಲ್ಲ ಎಂದು ಹೇಳಿದ್ದರೂ ಸಹ ನಂತರ ಮತ್ತೆ, ಆಕೆಯ ಹಿಂದೆ ಬಿದ್ದಿದ್ದ ಯುವಕ ನಿರಂತರವಾಗಿ ಪೀಡಿಸುತ್ತಿದ್ದನು. ತನ್ನನ್ನು ಪ್ರೀತಿಸದೇ ಇದ್ದರೆ ತಾನೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದನು ಎಂದು ಹೇಳಲಾಗಿದೆ.
ಯುವಕನಿಂದ ಮಾನಸಿಕ ಹಿಂಸೆಗೆ ಒಳಗಾಗಿ ಶನಿವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















