ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚುನಾವಣಾ ದಿನದಂದು ವೈಯಕ್ತಿಕ ಕೆಲಸಗಳಿಗೆ ಕಡಿವಾಣ ಹಾಕಿ, ಪ್ರವಾಸ ಇತ್ಯಾದಿಗಳಿಗೆ ಹೋಗದೆ ನಮ್ಮ ಹಕ್ಕನ್ನು ಚಲಾಯಿಸೋಣ ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಮನವಿ ಮಾಡಿದರು.
ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಜಿಲ್ಲಾಡಳತ, ಜಿಲ್ಲಾ ಪಂಚಾಯತ್, ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಮತ್ತು ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ, ಶಿವಮೊಗ್ಗ ಇವರ ಸಹಯೋಗದಲ್ಲಿ ನಡೆದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ನಾವೆಲ್ಲಾ ಕಡ್ಡಾಯವಾಗಿ ಮತದಾನ ಮಾಡೋಣ ಮತ್ತು ಎಲ್ಲರೂ ಮತದಾನ ಮಾಡುವ ಹಾಗೆ ಪ್ರೇರೇಪಿಸೋಣ ಎಂದು ಕರೆ ನೀಡಿದರು.
ಕುವೆಂಪು ವಿವಿ ಕುಲಪತಿಗಳಾದ ಪ್ರೊ.ಬಿ.ಪಿ. ವೀರಭದ್ರಪ್ಪ ಮಾತನಾಡಿ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನೂರಕ್ಕೆ ನೂರು ಮತದಾನವಾಗುತ್ತದೆ. ನಮ್ಮಲ್ಲಿಯೂ ಸಹ ಆದೇರೀತಿ ಮತದಾನ ಆಗುವ ಹಾಗೆ ಮಾಡುವಲ್ಲಿ ನಮ್ಮೆಲ್ಲರ ಪ್ರಯತ್ನ ದೊಡ್ಡದು ಎಂದು ತಿಳಿಸಿದರು.
Also read: ಬಿಎಸ್’ವೈ ಪುತ್ರ ವಿಜಯೇಂದ್ರರ ಆಸ್ತಿ ಎಷ್ಟು? ಅವರ ಬಳಿ ಸ್ವಂತ ಕಾರು ಇದೆಯಾ? ಇಲ್ಲಿದೆ ಮಾಹಿತಿ
ಜಿಲ್ಲಾ ಪಂಚಾಯತ್ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಮತದಾನದ ಮಹತ್ವ ಕುರಿತು ಎಲ್ಲರಿಗೂ ತಿಳಿಸಲು ಸಲಹೆ ನೀಡಿದರು. ಕುವೆಂಪು ವಿವಿ ಎನ್’ಎಸ್’ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ ಪರಿಸರ ಅವರು ಮಾತನಾಡಿ, ನಗರ ಪ್ರದೇಶಗಳಲ್ಲಿ ಮತದಾನ ಕಡಿಮೆಯಾಗುತ್ತಿದ್ದು, ಅದನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವೆಲ್ಲಾ ಪ್ರಾಮಾಣಿಕ ಪ್ರಯತ್ನ ಮಾಡೋಣ. ಮತದಾನದ ಮಹತ್ವವನ್ನು ಎಲ್ಲರಿಗೂ ತಿಳಿಸಿ ಯಾವುದೇ ಆಮಿಷಕ್ಕೆ ಒಳಗಾಗದೆ ಹೆಚ್ಚು ಮತದಾನ ಮಾಡುವ ಹಾಗೆ ಜಾಗೃತಿ ಮೂಡಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಧು ಜಿ. ಹಾಗೂ ಡಾ. ಎನ್.ಕೆ. ಚಿದಾನಂದ ಹಾಗೂ ಕೆ.ಸಿ. ಬಸವರಾಜ್, ನವೀದ್, ವಿಜಯ್ ಕುಮಾರ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಡಾ. ಪ್ರಕಾಶ್ ಸ್ವಾಗತಿಸಿ, ಶರಣ ನಾಯಕ್ ವಂದಿಸಿದರು. 250ಕ್ಕೂ ಹೆಚ್ಚು ಎನ್’ಎನ್’ಎಸ್ ಸ್ವಯಂ ಸೇವಕರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post