ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಪ್ರತಿಷ್ಠಿತ ಮಾನಸ ಟ್ರಸ್ಟ್’ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಆವರಣದಲ್ಲಿ ಡಿ.6-7ರಂದು ವಿಶೇಷ ಶೈಕ್ಷಣಿಕ ವಸ್ತು ಪ್ರದರ್ಶನ ಹಾಗೂ ಅನ್ವೇಷಣಾ ಎಂಬ ಪ್ರತಿಭಾನ್ವೇಷಣೆ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮಲ್ಲಿಗೇನಹಳ್ಳಿಯಲ್ಲಿರುವ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ಡಿ.6ರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮಗಳನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ಉದ್ಘಾಟಿಸಲಿದ್ದಾರೆ. ಮಾನಸ ಸಂಸ್ಥೆಯ ನಿರ್ದೇಶಕರಾದ ಡಾ.ರಜನಿ ಪೈ ಅವರು ಉಪಸ್ಥಿತರಿರಲಿದ್ದಾರೆ.
ವಿವಿಧ ಮಾದರಿಗಳ ಮೂಲಕ ಕಾಲೇಜಿನ ವಿದ್ಯಾರ್ಥಿಗಳು ವಿಜ್ಞಾನ, ಮಾನವಿಕ ವಿಜ್ಞಾನ, ಕಂಪ್ಯೂಟರ್ ಸೈನ್ಸ್, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರದ ವಿವಿಧ ಪರಿಕಲ್ಪನೆಗಳನ್ನು ಸಾದರ ಪಡಿಸಲಿದ್ದಾರೆ.ವಿಶೇಷವಾಗಿ ಮನಃಶಾಸ್ತ್ರದ ಹಲವು ಕುತೂಹಲಕಾರಿ ವಿಷಯಗಳನ್ನು ಪ್ರಸ್ತುತ ಪಡಿಸಲಾಗುವುದು. ಸಮಾಜಕಾರ್ಯ ವಿಭಾಗದಿಂದ ಮಕ್ಕಳ ಹಕ್ಕುಗಳು ಮತ್ತು ನಾವು ಎಂಬ ವಿಷಯದ ಕುರಿತು ವಿವರಗಳನ್ನು ನೀಡಲಿದ್ದಾರೆ.
ಇದೊಂದು ವಿಶೇಷ ಶೈಕ್ಷಣಿಕ ವಸ್ತುಪ್ರದರ್ಶನವಾಗಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಡಿಸೆಂಬರ್ 6 ಮತ್ತು 7 ರಂದು ವೀಕ್ಷಿಸಲು ಪ್ರಾಂಶುಪಾಲರಾದ ಡಾ.ಸಂಧ್ಯಾಕಾವೇರಿ ಕೋರಿದ್ದಾರೆ.
ಡಿ.7ರಂದು ಕಾಲೇಜಿನ ಆವರಣದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ, ಸಮೂಹ ನೃತ್ಯ, ಸಮೂಹ ಗಾಯನ, ಮಂಡಲ ರಂಗೋಲಿ ಹಾಗೂ ಭಿತ್ತಿ ಪತ್ರರಚನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಅದೇ ದಿನ ವಿವಿಧ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗಾಗಿ ನುರಿತ ಮನಃಶಾಸ್ತ್ರಜ್ಞರಿಂದ ಹದಿಹರೆಯದ ಮನಃಶಾಸ್ತ್ರ ಹಾಗೂ ತರಗತಿ ನಿರ್ವಹಣೆ ಎಂಬ ವಿಷಯದ ಕುರಿತು ಕಾರ್ಯಗಾರವನ್ನು ಏರ್ಪಡಿಸಲಾಗಿದೆ. ಪದವಿಪೂರ್ವ ಕಾಲೇಜಿನಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.
ಅದೇ ದಿನ ಮಧ್ಯಾಹ್ನ 2.30ಕ್ಕೆ ಈ ಎಲ್ಲಾ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಖ್ಯಾತ ನೃತ್ಯಗುರು ಸಹನಾ ಚೇತನ್ ಸಮಾರೋಪ ನುಡಿಗಳನ್ನು ಆಡಲಿದ್ದಾರೆ. ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಎಸ್. ಯೋಗಿಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಾಂಶುಪಾಲರು ತಿಳಿಸಿರುತ್ತಾರೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅನ್ವೇಷಣಾ ಸಂಯೋಜಕರಾದ ಮಂಜುನಾಥ ಸ್ವಾಮಿ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post