ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿ ದೆಸೆಯಲ್ಲಿಯೇ ಸಾಮಾಜಿಕ ಸೇವಾ ಮನೋಭಾವನೆಯನ್ನು ಯುವ ಸಮೂಹ ಬೆಳೆಸಿಕೊಳ್ಳಬೇಕು ಎಂದು ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ. ಬಾಲಕೃಷ್ಣ ಹೆಗಡೆ ಕರೆ ನೀಡಿದರು.
ಅವರು ನಗರದ ಹೊರವಲಯದಲ್ಲಿರುವ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಲ್ಲಿಯ ರಾಷ್ಟ್ರೀಯ ಸೇವಾ ಯೋಜನೆಯು ಪರೋಪಕಾರಂನ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಜಾಗೃತಿ, ಹಸಿರೀಕರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಇಂದಿನ ವಿದ್ಯಾರ್ಥಿಗಳು ಸೆಮಿಸ್ಟರ್ ಪದ್ಧತಿಯಲ್ಲಿ ಅಂಕ ಗಳಿಕೆಗೆ ಮಾತ್ರ ಹೆಚ್ಚು ಒತ್ತು ಕೊಡುತ್ತಿರುವುದಲ್ಲದೆ ಮೊಬೈಲ್ ಅಬ್ಬರದಲ್ಲಿ ಕೊಚ್ಚಿ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಹೊರಗೆಡುಹಿದರು.
ನಾಲ್ಕು ಗೋಡೆಗಳ ಮಧ್ಯದ ಕಲಿಕೆಯ ಜತೆಗೆ ಹೊರ ಜಗತ್ತಿನ ಪರಿ ಜ್ಞಾನವೂ ವಿದ್ಯಾರ್ಥಿಗಳಿಗೆ ಇರಬೇಕು. ಅದಕ್ಕೆ ಎನ್ಎಸ್ಎಸ್ನಂತಹ ಸಂಸ್ಥೆಗಳು ಸಹಾಯಕಾರಿ ಎಂದು ತಿಳಿಸಿದ ಅವರು ಸಮಾಜದಲ್ಲಿನ ಆಗು ಹೋಗು, ಗ್ರಾಮೀಣ ಪರಿಸರದ ಜ್ಞಾನ, ವಿವಿಧ ಭಾಷೆ, ವ್ಯಕ್ತಿತ್ವ ವಿಕಸನ ಇತ್ಯಾದಿಗಳನ್ನು ತಿಳಿದುಕೊಳ್ಳಲು ರಾ.ಸೇ.ಯೋ.ಯಲ್ಲಿ ತೊಡಗಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
Also read: Vice President asks media to be extra careful while reporting about judiciary
ಪರೋಪಕಾರಂನ ತ್ಯಾಗರಾಜ ಮಿತ್ಯಾಂತ ಮಾತನಾಡಿ ತಮ್ಮ ಸಂಸ್ಥೆಯಲ್ಲಿ ಯಾರೂ ನಾಯಕರಾಗಲೀ, ಪದಾಧಿಕಾರಿಗಳಾಗಲೀ ಇಲ್ಲ. ಕಳೆದ ಐದು ವರ್ಷಗಳಿಂದ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಾಂತರಗಳಲ್ಲಿ ಸ್ವಚ್ಛತೆ, ಪರಿಸರ ಜಾಗೃತಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದು ಇಂದು ಪರೋಪಕಾರಂ ಮನೆ ಮಾತಾಗಿದೆ. ಸಾರ್ವಜನಿಕರು ತಮ್ಮ ಸಂಸ್ಥೆಯ ಸಾಮಾಜಿಕ ಕಾಳಜಿಯನ್ನು ಗುರುತಿಸುವಂತಾಗಿದೆ ಎಂದು ಮಾಹಿತಿ ನೀಡಿದರು.
ಪಶುವೈದ್ಯ ಕಾಲೇಜಿನ ಎನ್ಎಸ್ಎಸ್ ಅಧಿಕಾರಿಗಳಾದ ಪ್ರೊ. ಧೂಳಪ್ಪನವರ್, ಪ್ರೊ. ಗಿರಿಧರ್, ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಎನ್ಎಸ್ಎಸ್ ಸ್ವಯಂ ಸೇವಕರು ಕಾರ್ಯಕ್ರಮ ನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post