ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡಿನಲ್ಲಿ ಉದ್ಯಮಶೀಲತೆಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ನಗರದ ಪೆಸೆಟ್ ಕಾಲೇಜಿನಲ್ಲಿ (ಪ್ರೇರಣಾ ಶಿಕ್ಷಣ ಸಂಸ್ಥೆ) ಅನ್ವೇಷಣಾ ಇನೋವೇಶನ್ ಮತ್ತು ಎಂಟ್ರೆಪ್ರೆನ್ಯೂರಿಯಲ್ ಫೋರಂ ಇಂದು ಉದ್ಘಾಟನೆಗೊಂಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊಸ ಉದ್ಯೋಗ ಅವಕಾಶ ಸೃಷ್ಟಿಸುವುದು. ಸಮಸ್ಯೆಗಳಿಗೆ ನವೀನ ಪರಿಹಾರ ಒದಗಿಸುವುದು ಮತ್ತು ತಂತ್ರಜ್ಞಾನದ ಲಾಭವನ್ನು ಎಲ್ಲರೂ ಪಡೆಯುವಂತೆ ಮಾಡುವ ಗುರಿಯನ್ನು ಫೋರಂ ಹೊಂದಿದೆ. ಮಲೆನಾಡು ಪ್ರದೇಶದಲ್ಲಿ ವಾಣಿಜ್ಯೋದ್ಯಮವನ್ನು ಪೋಷಿಸಲು ನೆರವಾಗಲಿದೆ. ಹೊಸದಾಗಿ ಉದ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವವರಿಗೆ ಹೊಸ ಶಕ್ತಿ ಮತ್ತು ಭರವಸೆ ತುಂಬಲಿದೆ ಎಂದರು.
ವಿಟಿಯು ಕುಲಪತಿ ಡಾ. ಎಸ್. ವಿದ್ಯಾಶಂಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿ ಉದ್ಯಮಿಗೂ ಒಂದು ಗುರಿ ಇರಬೇಕು. ಕೇವಲ ಕನಸು ಕಂಡರೆ ಸಾಲದು. ಅದನ್ನು ಸಾಕಾರಗೊಳಿಸುವಲ್ಲಿ ಕಾರ್ಯತತ್ಪರರಾಗಬೇಕು. ಸಾಧನೆ ಮಾಡಬೇಕು. ಕನಸು ಕಾಣು ಕರ್ತವ್ಯ ನಿಷ್ಠನಾಗು, ಕಾದುನೋಡು ಎಂಬಂತೆ ಯಾವುದೇ ಉದ್ಯಮಿ ಸಾಧನೆ ಮಾಡಿದಾಗ ಮಾತ್ರ ಅಭಿವೃದ್ದಿ ಹೊಂದಲು ಸಾಧ್ಯ ಎಂದರು.
Also read: ಸಮಾಜದ ಪ್ರತಿಯೊಬ್ಬರಿಗೂ ದಿನಬಳಕೆ ವಸ್ತುಗಳ ಗುಣಮಟ್ಟದ ಅರಿವು ಅತ್ಯವಶ್ಯ
ವಿಷನ್ ಸ್ಟಾರ್ಟ್ ಅಪ್ ಅಧ್ಯಕ್ಷ ಪ್ರಶಾಂತ್ಪ್ರಕಾಶ್, ಕಾರ್ಯಕ್ರಮದ ರೂವಾರಿ ಸಿ.ಎಂ.ಪಾಟೀಲ್, ವಿಧಾನ ಪರಿಷತ್ ಸದಸ್ಯರುಗಳಾದ ರುದ್ರೇಗೌಡ, ಡಿ.ಎಸ್. ಅರುಣ್, ಹಾಗೂ 30ಕ್ಕೂ ಹೆಚ್ಚು ಏಂಜೆಲ್ ಹೂಡಿಕೆದಾರರು, ಮಾರ್ಗದರ್ಶಕರು, ಉದ್ಯಮ ತಜ್ಞರು, 50ಕ್ಕೂ ಹೆಚ್ಚು ಸ್ಥಳೀಯ ಪರಿಸರ ವ್ಯವಸ್ಥೆ ಬೆಂಬಲಿಸುವ ಸಣ್ಣ ವ್ಯಾಪಾರ ಮಾಲೀಕರು, 150ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು, 250ಕ್ಕೂ ಹೆಚ್ಚು ಆರಂಭಿಕ ಆಕಾಂಕ್ಷಿಗಳು, ಉದಯೋನ್ಮುಖ ಉದ್ಯಮಿಗಳು ಭಾಗಿಯಾಗಿದ್ದರು.
ಇದೇ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಸ್ಟಾರ್ಟ್ ಅಪ್ಗಳಿಂದ ನಾವಿನ್ಯತೆ ಪ್ರದರ್ಶನ. ವಿವಿಧ ವಿಷಯಾಧಾರಿತ ಸೆಷನ್, ಸ್ಟಾರ್ಟ್ ಅಪ್ಗಳಿಂದ ಉತ್ಪನ್ನ ಪ್ರದರ್ಶನ ಆಯೋಜನೆಗೊಂಡಿತ್ತು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















