ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಹಾರ ಭದ್ರತೆಯೊಂದಿಗೆ ಪೋಷಣೆಯ ಭದ್ರತೆಯನ್ನೂ ನೀಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದ್ದು, ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಸಾರವರ್ಧಿತ ಅಕ್ಕಿ ವಿತರಣೆ ಮಾಡಲು ಕ್ರಮ ಕೈಗೊಂಡಿದೆ ಎಂದು ಭಾರತ ಆಹಾರ ನಿಗಮದ ಶಿವಮೊಗ್ಗ ಡಿವಿಷನಲ್ ಮ್ಯಾನೇಜರ್ ಭಗವಾನ್ ಸಿಂಗ್ ತಿಳಿಸಿದರು.
ಇಂದು ಗಾಡಿಕೊಪ್ಪದ ಭಾರತ ಆಹಾರ ನಿಗಮ(ಎಫ್ಸಿಐ)ದ ವಿಭಾಗೀಯ ಕಚೇರಿಯಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಸಾರವರ್ಧಿತ ಅಕ್ಕಿ ವಿತರಣೆ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತಾಡಿದರು.

Also read: ಜು.25, 26ರಂದು ಸಿಎಂ ದೆಹಲಿ ಪ್ರವಾಸ: ವರಿಷ್ಠರು ಪ್ರಸ್ತಾಪಿಸಿದರೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ
ರಾಜ್ಯದಲ್ಲಿ ಮೊದಲನೇ ಹಂತದಲ್ಲಿ ಶಿವಮೊಗ್ಗ, ದಾವಣಗೆರೆ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಪೈಲಟ್ ಕಾರ್ಯಕ್ರಮದಡಿ ಆಯ್ಕೆ ಮಾಡಿಕೊಂಡು ಮೇ ಮಾಹೆಯಿಂದ ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಸಾರವರ್ಧಿತ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ. ರೈತರಿಗೆ ಕನಿಷ್ಟ ಬೆಂಬಲ ಬೆಲೆ ಖಚಿತಪಡಿಸುವುದು, ಮುಕ್ತ ಮಾರುಕಟ್ಟೆಯಲ್ಲಿ ದರಗಳನ್ನು ಸ್ಥಿರಗೊಳಿಸುವುದು, ಸಮಾಜದ ದುರ್ಬಲ ವರ್ಗದವರಿಗೆ ಆಹಾರ ಧಾನ್ಯ ಒದಗಿಸುವುದು ಮತ್ತು ದೇಶದಲ್ಲಿ ಎಂತಹದೇ ತುರ್ತು ಪರಿಸ್ಥಿತಿ ಬಂದರೂ ಆಹಾರ ಭದ್ರತೆ ಸಾಧಿಸುವುದು ಕೇಂದ್ರ ಸರ್ಕಾರದ ಮುಖ್ಯ ಉದ್ದೇಶವಾಗಿದ್ದು ಕಳೆದ ಸಾಲಿನಲ್ಲೇ ಸರ್ಕಾರ ಆಹಾರ ಭದ್ರತೆಯೊಂದಿಗೆ ಪೊಷಣೆಯ ಭದ್ರತೆಯನ್ನೂ ನೀಡುವ ನಿರ್ಧಾರ ಕೈಗೊಂಡಿದೆ. ಈ ನಿಟ್ಟಿನಲ್ಲಿ ಈಗ ಪೈಲಟ್ ಕಾರ್ಯಕ್ರಮದಡಿ ಸಾರವರ್ಧಿತ ಅಕ್ಕಿ ವಿತರಣೆ ಆಗುತ್ತಿದೆ ಎಂದು ತಿಳಿಸಿದರು.

ಈ ಅಕ್ಕಿಯನ್ನು ಸುಲಭವಾಗಿ ಗುರುತಿಸಲು ಅಕ್ಕಿಚೀಲದ ಮೇಲೆ +ಎಫ್ ಎಂಬ ನೀಲಿ ಬಣ್ಣದ ಚಿಹ್ನೆ ಇರುತ್ತದೆ. ಈ ಅಕ್ಕಿಯು ಎನ್ಎಬಿಎಲ್ ಮಾನ್ಯತೆ, ಎಫ್ಎಸ್ಎಸ್ಎಐ ಪರವಾನಿಗಿ ಸೇರಿದಂತೆ ಎಲ್ಲ ರೀತಿಯ ನಿಯಮಾವಳಿಗಳನ್ನು ಅನುಸರಿಸಿ ತಯಾರಿಸಲಾಗಿದ್ದು ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇರುವುದಿಲ್ಲ. ಅನೇಕರು ಇದು ಪ್ಲಾಸ್ಟಿಕ್ ಅಕ್ಕಿ ಎಂದು ಗೊಂದಲಕ್ಕೀಡಾಗಿದ್ದು ಇದೆ. ಆದರೆ ಇದು ಸಾರವರ್ಧಿತ ಅಕ್ಕಿಯಾಗಿದ್ದು ಎಲ್ಲರೂ ಇದರ ಪ್ರಯೋಜನ ಪಡೆಯಬೇಕೆಂದರು.

ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಡಿಪೋಗಳಲ್ಲಿನ ಎಲ್ಲ ಕಾರ್ಯಾಚರಣೆಗಳನ್ನು ಡಿಓಎಸ್ ಮೂಲಕ ನಡೆಸಲಾಗುತ್ತಿದ್ದು, ಹೆಚ್ಚುವರಿ ಆಹಾರಧಾನ್ಯ ಹೊಂದಿರವ ರಾಜ್ಯಗಳಿಂದ ಆಹಾರಧಾನ್ಯಗಳನ್ನು ರೇಕ್ ಮೂಲಕ ಸ್ವೀಕರಿಸಿ ಗೋಡಾನ್ನಲ್ಲಿ ಸಂಗ್ರಹಿಸಲಾಗುತ್ತಿದೆ. ಆಹಾರ ಧಾನ್ಯಗಳ ಸಂರಕ್ಷಣೆ ಸಮಯ ಮತ್ತು ವಿತರಣೆಗೂ ಮುನ್ನ ಅಗತ್ಯ ಗುಣಮಟ್ಟದ ತಪಾಸಣೆ ಮತ್ತು ಗುಣಮಟ್ಟ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ಮಧ್ಯಾಹ್ನದ ಬಿಸಿಯೂಟಕ್ಕೆ ಕಳೆದ ಆಗಸ್ಟ್ನಿಂದ ಶಿವಮೊಗ್ಗದಲ್ಲಿ 3,577 ಮೆ.ಟನ್, ದಾವಣಗೆರೆಯಲ್ಲಿ 3,532 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 1494 ಮೆ.ಟನ್ ಸಾರವರ್ಧಿತ ಅಕ್ಕಿ ನೀಡಲಾಗಿದೆ. ಶಿವಮೊಗ್ಗ ವ್ಯಾಪ್ತಿಗೊಳಪಡುವ 8 ಕಂದಾಯ ಜಿಲ್ಲೆಗಳಿಗೆ ಇದುವರೆಗೆ 23,183 ಮೆಟ್ರಿಕ್ ಟನ್ ಸಾರವರ್ಧಿತ ಅಕ್ಕಿ ವಿತರಿಸಲಾಗಿದೆ.
-ಶಿವಕುಮಾರ್, ಮ್ಯಾನೇಜರ್, ಗುಣಮಟ್ಟ ನಿಯಂತ್ರಣ
ಪತ್ರಿಕಾಗೋಷ್ಟಿಯಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಇನ್ಫಾರ್ಮೇಷನ್ನ ಫೀಲ್ಡ್ ಪಬ್ಲಿಸಿಟಿ ಆಫೀಸರ್ ಅಕ್ಷತಾ ಇದ್ದರು.










Discussion about this post