Read - 3 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಲ್ಲಾ ವರ್ಗದ ಕಲ್ಯಾಣಕ್ಕಾಗಿ ಕಾಂಗ್ರೆಸ್ ಪಣತೊಟ್ಟಿದ್ದು, ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದು, ಇದರ ಜೊತೆಗೆ ಪ್ರತಿ ಮನೆಗೂ ‘ಗ್ಯಾರಂಟಿ ಕಾರ್ಡ್’ ನೀಡಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಬೆಲೆ ಏರಿಕೆಯ ಬಿಸಿಯಲ್ಲಿ ನರಳಿದ್ದಾರೆ. ಬಿಜೆಪಿಯ ವೈಫಲ್ಯದ ಆಡಳಿತಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಸರ್ಕಾರದಲ್ಲಿ ಬಡವರು ಬದುಕುವುದೇ ಕಷ್ಟವಾಗಿದೆ. ಈ ಎಲ್ಲಾ ವಿಷಯಗಳನ್ನು ಮತದಾರರಿಗೆ ಮುಟ್ಟಿಸುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ನಮ್ಮ ನಾಯಕರು ಪಣ ತೊಟ್ಟಿದ್ದಾರೆ ಎಂದರು.

ಭ್ರಷ್ಟಾಚಾರವನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಬಿಜೆಪಿ ಶೇ. 40 ರಷ್ಟು ಕಮಿಷನ್ ಗೆ ಹೆಸರಾಗಿದೆ. ಶಿವಮೊಗ್ಗದಲ್ಲಿಯೇ ಸ್ಮಾರ್ಟ್ ಸಿಟಿಗೆ ಸಂಬಂಧಿಸಿದಂತೆ ಸಾಕಷ್ಟು ಅವ್ಯವಹಾರ ನಡೆದಿದೆ. ಹಾಗೆಯೇ, ಭದ್ರಾವತಿಯ ಎರಡು ಕಾರ್ಖಾನೆಗಳ ನೌಕರರ ಬದುಕು ಬೀದಿ ಪಾಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಎರಡೂ ಕಾರ್ಖಾನೆಗಳನ್ನು ಪುನಃ ಆರಂಭಿಸಲಾಗುವುದು ಎಂದರು.
ಎಲ್ಲಾ ಬಡ ಮತ್ತು ಮಧ್ಯಮವರ್ಗದ ಮನೆಗಳಿಗೆ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಈಗಾಗಲೇ ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಘೋಷಣೆಯಂತೆ ಮನೆಯ ಜವಾಬ್ದಾರಿ ನಿರ್ವಹಿಸುವ ಪ್ರತಿ ಕುಟುಂಬ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ನೀಡಲಾಗುವುದು. ಈ ಎರಡು ಘೋಷಣೆಗಳು ಸೇರಿದಂತೆ ಕಾಂಗ್ರೆಸ್ ಜನರ ಮನೆ ಮನೆಗೆ ತಲುಪಿ ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸಹಿ ಇರುವ ಗ್ಯಾರಂಟಿ ಕಾರ್ಡ್ ನೀಡಲಾಗುವುದು ಎಂದರು.

ಅನ್ನಭಾಗ್ಯ ಯೋಜನೆಯನ್ನು ರಾಜ್ಯ ಸರ್ಕಾರ ಕಸಿದುಕೊಳ್ಳಲು ಹವಣಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈಗ ಇರುವ 5 ಕೆಜಿ ಅಕ್ಕಿಯ ಜೊತೆಗೆ ಇನ್ನೂ 5 ಕೆಜಿ ನೀಡಲಾಗುವುದು. ಸ್ತ್ರೀ ಶಕ್ತಿ ಸಂಘಗಳಿಗೆ ಸಬ್ಸಿಡಿ ನೀಡಿ ಸಾಲದ ಮೊತ್ತ ಹೆಚ್ಚಿಸಲಾಗುವುದು. ರೈತರಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ಹೀಗೆ ಬಡ ಮತ್ತು ಮಧ್ಯಮ ವರ್ಗದ ಜನರ ಹಿತಕಾಯಲು ಕಾಂಗ್ರೆಸ್ ಬದ್ಧವಾಗಿದೆ ಎಂದರು.
ಬಿಜೆಪಿ ಸರ್ಕಾರ ಬಂದಮೇಲೆ ರಾಜ್ಯದ ಮತ್ತು ದೇಶದ ಸಾಲ ಅತಿ ಹೆಚ್ಚಾಗಿದೆ. ಸುಮಾರು 144 ಲಕ್ಷ ಕೋಟಿ ಸಾಲ ಹೆಚ್ಚಳವಾಗಿದೆ. ಬಡವರ ತೆರಿಗೆಯಲ್ಲ ಸಾಲದ ಬಡ್ಡಿಗಾಗಿಯೇ ಹೋಗುತ್ತದೆ. ಆಹಾರ ಪದಾರ್ಥಗಳ ಮೇಲೂ ಜಿ.ಎಸ್.ಟಿ. ಹಾಕಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಇದನ್ನು ತೆಗೆದು ಹಾಕಲಿದೆ ಎಂದರು.

ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಯಾಗುತ್ತಿರುವುದು ಸ್ವಾಗತದ ವಿಷಯ. ಆದರೆ, ಇದು ಇನ್ನು ಕೆಲವೇ ದಿನಗಳಲ್ಲಿ ಖಾಸಗಿಯವರ ಪಾಲಾಗುವುದು ನಿಶ್ಚಿತ. ಈಗಾಗಲೇ ಏರ್ ಇಂಡಿಯಾವನ್ನು ಮಾರಲಾಗಿದೆ. ಮಂಗಳೂರು ಏರ್ ಪೋರ್ಟ್ ಅನ್ನು ಖಾಸಗಿಯವರಿಗೆ ನೀಡಲಾಗಿದೆ. ಶಿವಮೊಗ್ಗ ಏರ್ ಪೋರ್ಟ್ ಕೂಡ ಅಂಬಾನಿಗೋ, ಅದಾನಿಗೋ ಮಾರಾಟ ಮಾಡುತ್ತಾರೆ. ಇದೇ ಉದ್ದೇಶದಿಂದ ಈ ಏರ್ ಪೋರ್ಟ್ ತಂದಿದ್ದಾರೆ ಎಂದ ಅವರು ಎಲ್ಲಾ ಸರ್ಕಾರಿ ಸಂಸ್ಥೆಗಳು ಖಾಸಗಿಯವರ ಪಾಲಾಗಿವೆ. ಇದು ಕೂಡ ಆ ಪಟ್ಟಿಗೆ ಸೇರುತ್ತದೆ ಎಂದರು.
ಭಾರತ್ ಜೋಡೋ ಯಾತ್ರೆ ಇಂದು ಮುಕ್ತಾಯವಾಗಿದ್ದು, ಭಾರತ್ ಜೋಡೋ ಎಂದರೆ ಮನಸ್ಸುಗಳನ್ನು ಒಂದಾಗಿಸುವುದು ಎಂದರ್ಥ. ಕೋಮು ದಳ್ಳುರಿಗೆ ಇಡೀ ದೇಶವೇ ನಲುಗಿ ಹೋಗಿದೆ. ಶಾಂತಿ ನಿರ್ಮಿಸಲು ಮನಸ್ಸುಗಳ ಜೊತೆಗೂಡಿಸಲು ರಾಹುಲ್ ಗಾಂಧಿ ಅವರು 12 ರಾಜ್ಯಗಳಲ್ಲಿ ಪಾದಯಾತ್ರೆ ಮಾಡಿದ್ದಾರೆ ಎಂದ ಅವರು, ಶಿವಮೊಗ್ಗ ನಗರದ ಕಾಂಗ್ರೆಸ್ ಟಿಕೆಟ್ ಗೆ ಸಂಬಂಧಿಸಿದಂತೆ ತಮ್ಮ ಹೆಸರು ಕೂಡ ಮುಂಚೂಣಿಗೆ ಬಂದಿದೆ. ಇನ್ನು 15 ದಿನಗಳಲ್ಲಿ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಭೂಪಾಲ್, ಬಲದೇವಕೃಷ್ಣ, ಎಲ್. ಸತ್ಯನಾರಾಯಣ, ಇಕ್ಕೇರಿ ರಮೇಶ್, ನೇತಾಜಿ, ಚಂದ್ರಶೇಖರ್, ಚಂದನ್, ಎನ್.ಡಿ. ಪ್ರವೀಣ್ ಮೊದಲಾದವರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Discussion about this post