ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತೀಯ ಸಂಸ್ಕೃತಿ ವೈವಿಧ್ಯತೆಯಿಂದ ಕೂಡಿದ್ದು, ಅದನ್ನು ವಿಭಜಿಸಿ ನೋಡುತ್ತಿದ್ದೇವೆ. ನಮ್ಮನ್ನು ಆಳಿದ ಎಲ್ಲರೂ ಕೂಡ ಇದನ್ನೇ ಮಾಡುತ್ತಿದ್ದು, ಜಾತಿ, ಧರ್ಮದ ಹೆಸರಿನಲ್ಲಿ ಒಡೆದು ಆಳುತ್ತಿರುವುದರಿಂದ ದೇಶಕ್ಕೆ ಅಪಾಯ ಕಾದಿದೆ ಎಂದು ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀ ನೃಸಿಂಹ ಪೀಠದ ಪೀಠಾಧೀಶರು, ಶ್ರೀಕ್ಷೇತ್ರ ಹರಿಹರಪುರದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ಹೇಳಿದ್ದಾರೆ.
ಅವರು ಇಂದು ರವೀಂದ್ರ ನಗರದ ಶ್ರೀ ಪ್ರಸನ್ನಗಣಪತಿ ದೇವಸ್ಥಾನದಲ್ಲಿ ಭಜನಾ ಪರಿಷತ್, ನಗರದ ಭಜನಾ ಮಂಡಳಿಗಳ ಒಕ್ಕೂಟ, ಸಂಸ್ಕಾರ ಪ್ರತಿಷ್ಠಾನಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಭಜನಾ ಪರಿಷತ್ ದಶಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಶತಕೋಟಿ ಓಂ ನಮಃ ಶಿವಾಯ ಜಪ ಮಂಗಳೋತ್ಸವ ಹಾಗೂ ಮೂರನೇ ವರ್ಷದ ಸಾಮೂಹಿಕ ರುದ್ರಹೋಮ ಕಾರ್ಯಕ್ರಮದಲ್ಲಿ ಪೂರ್ಣಾಹುತಿ ನೆರವೇರಿಸಿ ಆಶೀರ್ವಚನ ನೀಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಸತ್ಯವನ್ನು ಅರಸಲು ಮುಕ್ತ ಅವಕಾಶಗಳಿವೆ. ಸರಿಯಾದ ಮಾರ್ಗದಲ್ಲಿ ಮುಂದೆ ಹೋಗಬೇಕು. ಇಲ್ಲಿನ ಧಾರ್ಮಿಕ ವೈವಿಧ್ಯತೆ ಅನೇಕ ಚಿಂತನೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ಅತ್ಯಂತ ಸಹಜವಾಗಿ ನಾವು ಒಪ್ಪಿಕೊಂಡಿದ್ದೇವೆ. ಆದರೆ ಕೆಲವು ಶಕ್ತಿಗಳು ಇಲ್ಲಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ವಿಭಜಿಸುವುದರ ಮೂಲಕ ದೇಶದ ಅಶಾಂತಿಗೆ ಮತ್ತು ಬಲಹೀನತೆಗೆ ಕಾರಣವಾಗಿದ್ದಾರೆ. ವೈವಿಧ್ಯತೆಯನ್ನು ಜೋಡಿಸಿಕೊಂಡು ಹೋದಾಗ ಮಾತ್ರ ದೇಶ ಮತ್ತುನಮ್ಮ ಸಂಸ್ಕೃತಿ ಬಲಗೊಳ್ಳುತ್ತದೆ. ಆದರೆ ದೇಶ ಒಡೆಯುವ ಕೆಟ್ಟ ಪ್ರವೃತ್ತಿಯನ್ನು ಬೆಳೆಸಿಕೊಂಡು ಬರುತ್ತಿದ್ದೇವೆ. ಪರೋಕ್ಷವಾಗಿ ಇಂದಿಗೂ ಗುಲಮಗಿರಿಯನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಇನ್ನು 25 ವರ್ಷಗಳಲ್ಲಿ ನಾವೆಲ್ಲ ಹೀಗೆ ಒಟ್ಟಾಗಿ ಕುಳಿತು ದೇವರ ಕಾರ್ಯಕ್ರಮಗಳನ್ನು ಮಾಡುವ ಪರಿಸ್ಥಿತಿ ಬಾರದೆ ಇರುವಂತಹ ಸನ್ನಿವೇಶವನ್ನು ತಂದುಕೊಳ್ಳುತ್ತಿದ್ದೇವೆ ಎಂದರು.
ನಮ್ಮ ಪುರಾತನ ಸಂಸ್ಕೃತಿ, ಧರ್ಮ ಬಲಹೀನಗೊಳ್ಳುತ್ತಿದೆ. ಇದು ನಮಗೆ ಕೊನೆಯ ಅವಕಾಶ. ವೈವಿಧ್ಯತೆಯನ್ನು ಜೋಡಿಸಿಕೊಂಡು ನಮ್ಮ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು. ಗಾಢ ನಿದ್ರೆಯಿಂದ ಎಚ್ಚೆತ್ತು ಅರ್ಥವಿಲ್ಲದ ಆಚರಣೆ ಕೈಬಿಟ್ಟು ದೇಶದ ಸಂಸ್ಕೃತಿಯನ್ನು ಉಳಿಸುವಲ್ಲಿ ಕೈಜೋಡಿಸಬೇಕಾಗಿದೆ. ಇಂದುಇಲ್ಲಿ ಹಮ್ಮಿಕೊಂಡ ಶಿವಪಂಚಾಕ್ಷರಿ ಮಹಾಮಂತ್ರ ವಿಶ್ವದ ಅನೇಕ ಋಷಿಮುನಿಗಳು ಮತು ಮಹಾತ್ಮರಿಗೆ ದಿವ್ಯತೆಯನ್ನು ಕರುಣಿಸಿದೆ. ಈ ಅವಕಾಶ ಸಿಕ್ಕಿದ್ದು ಎಲ್ಲರ ಸೌಭಾಗ್ಯ ಎಂದರು.
ಕಾರ್ಯಕ್ರಮದಲ್ಲಿ ವೇದಬ್ರಹ್ಮ ಶಂಕರನಾರಾಯಣ ಭಟ್, ಶಬರೀಶ್ ಕಣ್ಣನ್, ಶ್ರೀಪತಿ ಭಟ್, ಎನ್. ಶ್ರೀಧರ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post