ಹೊಸತನದ ಸಂಶೋಧನೆ ಮತ್ತು ನಾವೀನ್ಯ ಬದಲಾವಣೆಗಳ ಮೂಲಕ ಎಲ್ಲಾ ಎಂಜಿನಿಯರಿಂಗ್ ವಿಭಾಗಗಳು ವಿಶ್ವವ್ಯಾಪ್ತಿ ಉದ್ಯೋಗ ಸೃಷ್ಟಿಸುವಲ್ಲಿ ಸಫಲವಾಗಿದೆ ಎಂದು ಜೆಎನ್ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ. ಮಂಜುನಾಥ ಹೇಳಿದರು.
ನಗರದ ಜೆಎನ್ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಸಿಇಟಿ/ಕಾಮೆಡ್-ಕೆ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಎಂಜಿನಿಯರಿಂಗ್ ಸೇರುವಾಗ ಯಾವ ಕೋರ್ಸ್ ಹೆಚ್ಚು ಪ್ಲೆಸ್ಮೆಂಟ್ ನೀಡುತ್ತದೆ ಎಂಬ ಪ್ರಶ್ನೆ ಸಹಜ. ಎಲ್ಲಾ ಕೋರ್ಸ್ಗಳು ತನ್ನದೇ ಪ್ರಾಮುಖ್ಯತೆ ಪಡೆದಿದ್ದು, ಕೋರ್ಸ್ ಅಧ್ಯಯನದಲ್ಲಿ ನಾವೆಷ್ಟು ತೊಡಗಿಸಿಕೊಂಡಿದ್ದೇವೆ ಎಂಬುದು ಮುಖ್ಯ. ಐಟಿ ಕ್ಷೇತ್ರ ಎಲ್ಲಾ ಕೋರ್ಸ್ಗಳ ವಿದ್ಯಾರ್ಥಿಗಳಿಗೂ ಮುಕ್ತವಾಗಿ ಅವಕಾಶ ನೀಡುತ್ತದೆ.
ಯಾವುದೇ ಕಾಲೇಜುಗಳಿಗೆ ಪ್ರವೇಶಾತಿ ಪಡೆಯುವಾಗ ರಾಷ್ಟ್ರೀಯ ಮಾನ್ಯತಾ ಮಂಡಳಿ ಮತ್ತು ನ್ಯಾಕ್ ಮಾನ್ಯತೆ ಪಡೆದಿದೆಯೇ ಎಂದು ಪರಿಶೀಲಿಸಿಕೊಳ್ಳಿ. ವೆಬ್ಸೈಟ್ ಮೂಲಕ ಬೋಧಕ ಸಿಬ್ಬಂದಿಗಳು, ಉದ್ಯೋಗವಕಾಶ ಚಟುವಟಿಕೆಗಳ ಕುರಿತು ಮಾಹಿತಿ ಪಡೆಯಿರಿ. ಇದರಿಂದ ವಿದ್ಯಾಸಂಸ್ಥೆಗಳ ಅಧ್ಯಾಪನದ ಗುಣಮಟ್ಟ ತಿಳಿಯಲು ಸಾಧ್ಯ.
ಸರ್ಕಾರ ಮತ್ತು ಕೆಲವು ಖಾಸಗಿ ಕಂಪನಿಗಳು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾರ್ಥಿ ವೇತನ ನೀಡುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ವಿದ್ಯಾರ್ಥಿ ವೇತನಗಳು ಸರ್ಕಾರದಿಂದ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಹಣ ಸಂದಾಯವಾಗುವ ವ್ಯವಸ್ಥೆ ಮಾಡಲಾಗಿದೆ.
ಆಪ್ಷನ್ ಎಂಟ್ರಿ ವೇಳೆ ಎಚ್ಚರವಿರಲಿ: ಸಿಇಟಿ ಮೂಲಕ ಕಾಲೇಜು ಮತ್ತು ಕೋರ್ಸ್ಗಳ ಆಯ್ಕೆ ಪ್ರಕ್ರಿಯೆಯಲ್ಲಿ ಆಪ್ಷನ್ ಎಂಟ್ರಿ ಮುಖ್ಯ ಘಟ್ಟವಾಗಿದ್ದು, ಆಯ್ಕೆ ಪ್ರಕ್ರಿಯೆಯ ವೇಳೆ ಎಚ್ಚರಿಕೆಯಿಂದಿರಿ ಎಂದು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕರಾದ ನರೇಂದ್ರ ಮಾಹಿತಿ ನೀಡಿದರು.
ಶಿಕ್ಷಣ ತಜ್ಞರ ಟಿಪ್ಸ್ :
ಆಪ್ಷನ್ ಎಂಟ್ರಿ ಮಾಡುವ ಮುನ್ನ ಕೆಇಎ ನೀಡುವ ಸೀಕ್ರೆಟ್ ಕೀ ಭದ್ರವಾಗಿ ಕಾಪಾಡಿಕೊಳ್ಳಿ.
ಜು.15 ನಂತರ ಪ್ರತಿದಿನ ಕೆಇಎ ವೆಬ್ಸೈಟ್ ಭೇಟಿ ನೀಡಿ ಹೊಸ ಪ್ರಕಟಣೆಗಳ ಬಗ್ಗೆ ತಿಳಿದುಕೊಳ್ಳಿ.
ಕಾಲೇಜುಗಳ ಮಾನ್ಯತೆ, ಬೋಧನಾ ಕ್ರಮ, ಉದ್ಯೋಗವಕಾಶ, ಹಾಸ್ಟಲ್ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಿ.
ಕೋರ್ಸ್ ಮುಖ್ಯವೊ ಕಾಲೇಜು ಮುಖ್ಯವೊ ಎಂದು ಈಗಲೇ ನಿರ್ಧರಿಸಿಕೊಳ್ಳಿ.
ಕೆಇಎ ವೆಬ್ಸೈಟ್ ಮೂಲಕ ಹಿಂದಿನ ವರ್ಷಗಳ ಕಾಲೇಜು ಮತ್ತು ಕೋರ್ಸ್ಗಳ ಕಟ್ಆಫ್ ತಿಳಿಯಿರಿ.
ಸೀಟ್ ಮ್ಯಾಟ್ರಿಕ್ಸ್ ಗಳ ಬಗ್ಗೆ ತಿಳಿದುಕೊಳ್ಳಿ.
ಶುಲ್ಕ ಪಾವತಿಸುವ ಚಲನ್ ಗಳನ್ನು ನಿಮ್ಮ ಖಾತೆಯಿರುವ ಬ್ಯಾಂಕ್ ಗಳಿಂದ ಪಾವತಿಸಿ.
ಕೆಇಎ ನೀಡುವ ಕಾಲೇಜು ಪ್ರವೇಶಾತಿ ಆದೇಶ ಮರೆಯದೆ ಡೌನ್ಲೋಡ್ ಮಾಡಿಕೊಳ್ಳಿ.
ಕಾರ್ಯಕ್ರಮದಲ್ಲಿ ಜೆ.ಎನ್.ಎನ್.ಸಿ.ಇ ಪ್ರವೇಶಾತಿ ಸಮಿತಿ ಮುಖ್ಯಸ್ಥರಾದ ಡಾ.ಸುರೇಂದ್ರ, ರಸಾಯನವಿಜ್ಞಾನ ವಿಭಾಗದ ಮುಖ್ಯಸ್ಥರಾದ ಮೋಯಿನುದ್ದಿನ್ ಖಾನ್, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಸಂಜೀವ್ ಕುಂಟೆ, ಡಾ.ಎಸ್.ವಿ.ಸತ್ಯನಾರಾಯಣ, ಡಾ.ತೇಜಸ್ವಿ, ಡಾ.ಈ.ಬಸವರಾಜ್, ಡಾ.ನಿರ್ಮಲಾ, ಡಾ.ಆನಂದರಾಮ್, ಪ್ರವೇಶಾತಿ ಸಮಿತಿಯ ಹರೀಶ್.ಎಸ್.ಬಿ, ಶಿವಾನಂದಪ್ಪ, ಮಂಜುನಾಥ ಆಚಾರ್, ಸಾಗರ್, ಅಭಿಜಿತ್, ಹೇಮಲತಾ, ಲೋಕೇಶ್, ಎನ್ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರವೇಶಾತಿ, ಆಪ್ಷನ್ ಎಂಟ್ರಿ ಕುರಿತ ಗೊಂದಲಗಳ ಕುರಿತು ಚರ್ಚಿಸಿದರು.
Discussion about this post