ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಏನ್, ಆ ಜಾಗನ ಅವರಪ್ಪನಿಗೆ ಬರೆದುಕೊಟ್ಟಿದ್ದಾರಾ? ಹೀಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ K S Eshwarappa ಹಿಗ್ಗಾಮುಗ್ಗಾ ಕಿಡಿ ಕಾರಿದರು.
ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಸ್ಲಿಮರ ಮತಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಮುಸ್ಲಿಮರಿಗೆ ಸೇರಿದ ಜಾಗದಲ್ಲಿ ಸಾವರ್ಕರ್ ಫೋಟೋ ಯಾಕೆ ಹಾಕಬೇಕಾಗಿತ್ತು ಎಂದು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಏನ್ ಆ ಜಾಗವನ್ನು ಅವರಪ್ಪನಿಗೆ ಬರೆದುಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.
ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಮಹನೀಯರ ಫೋಟೋಗಳನ್ನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಎಲ್ಲಿ ಬೇಕಾದರೂ ಹಾಕಬಹುದು. ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿ 21 ವರ್ಷ ಅಂಡಮಾನ್ ಜೈಲಿನಲ್ಲಿ ಕಠಿಣ ಶಿಕ್ಷೆ ಅನುಭವಿಸಿದ ಸಾವರ್ಕರ್ ಕಂಡರೆ ಕೆಲವು ಮುಸ್ಲಿಮರಿಗೆ ಕೋಪ. ಇಂತಹವರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಾ, ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ.
Also read: ಬಳ್ಳಾರಿ ಗೃಹರಕ್ಷಕ ದಳಕ್ಕೆ ಉತ್ತಮ ಘಟಕ ಪ್ರಶಸ್ತಿ
ಕೇಂದ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ, ಮತೀಯ ಶಕ್ತಿಗಳಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡಿ, ಗಲಭೆ ಸೃಷ್ಠಿಸಿ ಅದನ್ನು ಬಿಜೆಪಿ ತಲೆಗೆ ಕಟ್ಟುವ ಉದ್ದೇಶದಿಂದಲೇ ಪ್ರಚೋದನೆ ನೀಡುತ್ತಿದೆ ಎಂದು ಕಿಡಿ ಕಾರಿದರು.
ಇನ್ನು, ಗಣಪತಿ ಹಬ್ಬ ಆಚರಣೆಗೆ ಯಾರಾದರೂ ಅಡ್ಡಿಪಡಿಸಿದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾವು ಯಾರ ಹಬ್ಬಕ್ಕೂ ತೊಂದರೆ ಕೊಡುವುದಿಲ್ಲ. ಅವರ ಪಾಡಿಗೆ ಅವರು ಹಬ್ಬ ಮಾಡಿಕೊಳ್ಳುತ್ತಾರೆ. ಹಾಗೆಯೇ ನಮ್ಮ ಪಾಡಿಗೆ ನಾವು ಹಬ್ಬ ಮಾಡಿಕೊಳ್ಳುತ್ತೇವೆ. ಯಾರಾದರೂ ಅಡ್ಡಿಪಡಿಸಿದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















