ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕದ ಎಲ್ಲಾ ಸಹೋದರ, ಸಹೋದರಿಯರಿಗೆ ನನ್ನ ನಮಸ್ಕಾರ. ಸಿರಿಗನ್ನಡಂ ಗೆಲ್ಗೆ ಸಿಗನ್ನಡಂ ಬಾಳ್ಗೆ ಎಂದು ಕನ್ನಡದಲ್ಲೇ ತಮ್ಮ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ರಾಷ್ಟ್ರಕವಿ ಕುವೆಂಪು Kuvempu ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಿದ್ದು ವಿಶೇಷವಾಗಿತ್ತು.
ಶಿವಮೊಗ್ಗದ ನೂತನ ವಿಮಾನ ನಿಲ್ದಾಣ ಲೋಕಾರ್ಪಣೆ ಜೊತೆಗೆ ಸ್ಮಾರ್ಟ್ ಸಿಟಿ ಕಾಮಗಾರಿಗಳ ಉದ್ಘಾಟನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಶಿವಮೊಗ್ಗದ ಜನರ ಬಹುದಿನದ ಬೇಡಿಕೆ ಈಗ ಈಡೇರಿದೆ. ಶಿವಮೊಗ್ಗಕ್ಕೆ ವಿಮಾನ ನಿಲ್ದಾಣದ ದೊರೆತಿದೆ. ಇಂದು ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದೇನೆ ಹಾಗೂ ಇಲ್ಲಿಂದಲೇ ನಾನು ಬೆಳಗಾವಿಗೆ ಹೋಗಬೇಕಿದೆ ಎಂದು ಹೇಳಿದರು.
ಇಂದು ನಮ್ಮೆಲ್ಲರ ಪ್ರೀತಿಯ ಜನನಾಯಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜನ್ಮದಿನ ಅವರಿಗೆ ವಿಶೇಷವಾಗಿ ಹುಟ್ಟುಹಬ್ಬ ತಿಳಿಸುವುದು ತಮ್ಮೆಲ್ಲರ ಕರ್ತವ್ಯವಾಗಿದ್ದು, ಇಲ್ಲಿ ಉಪಸ್ಥಿತರಿರುವ ಜನರು ತಮ್ಮ ಮೊಬೈಲ್ ಟಾರ್ಚ್ ಆನ್ ಮಾಡಿ ಬಿ.ಎಸ್. ಯಡಿಯೂರಪ್ಪನವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಲು ಹೇಳಿದರು.
ಇದೇ ಸಂದರ್ಭದಲ್ಲಿ ಬಿಎಸ್ವೈ ಅವರ ವ್ಯಕ್ತಿತ್ವ ಮತ್ತು ಕಾರ್ಯವೈಖರಿಯನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ ವಿಧಾನಸಭೆಯಲ್ಲಿ ಬಿಎಸ್ವೈ ಮಾಡಿದ ಭಾಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದು ಎಲ್ಲರಿಗೂ ಪ್ರೇರಣೆ ನೀಡುವಂಥದ್ದಾಗಿದ್ದು, 50 ವರ್ಷಗಳಿಂದ ಯಡಿಯೂರಪ್ಪನವರು ಜನಸೇವೆಯಲ್ಲಿದ್ದಾರೆ. ಕರ್ನಾಟಕದ ಅಭಿವೃದ್ಧಿ ರಥದಲ್ಲಿ ಅಭಿವೃದ್ಧಿ ಪಥವಿದೆ. ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯ ರಥ ಸಾಗುತ್ತಿದೆ. ವಿಮಾನಯಾನ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದರು.
2014ರಕ್ಕಿಂತ ಮೊದಲು ಕೇವಲ ದೊಡ್ಡ ನಗರಗಳಿಗೆ ಮಾತ್ರ ವಿಮಾನ ನಿಲ್ದಾಣ ಸೀಮಿತವಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಣ್ಣಪುಟ್ಟ ನಗರಗಳಲ್ಲಿಯೂ ಏರ್ಪೋರ್ಟ್ ನಿರ್ಮಾಣ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರದಿಂದ 74 ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಬಿಜೆಪಿ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಬಡವನು ಕೂಡ ವಿಮಾನಯಾನ ಮಾಡುವಂತಾಗಬೇಕು. ಹೀಗಾಗಿ ಕಡಿಮೆ ವೆಚ್ಚದಲ್ಲಿ ಟಿಕೆಟ್ ಪಡೆಯಲು ಅನುಕೂಲ ಮಾಡಲಾಗುತ್ತಿದೆ ಎಂದು ಹೇಳಿದರು.
ಶಿವಮೊಗ್ಗ ಪಶ್ಚಿಮ ಘಟ್ಟದಲ್ಲಿ ಬರುವ ಮಲೆನಾಡಿನ ಹೆಬ್ಬಾಗಿಲು. ಇಲ್ಲಿ ನದಿ, ವನ್ಯ ಸಂಪತ್ತು ಅದ್ಭುತವಾಗಿದೆ. ಇಲ್ಲಿ ಜೋಗ ಜಲಪಾತ, ಆನೆಗಳ ಬಿಡಾರವೂ ಇದೆ. ಆಗುಂಬೆಯ ಸೂರ್ಯಾಸ್ತ ಯಾರೂ ಮರೆಯೋದಕ್ಕೆ ಸಾಧ್ಯವಿಲ್ಲ. ಗಂಗಾ ಸ್ನಾನ, ತುಂಗಾ ಪಾನ ಎಂದು ಉಕ್ತಿಯೇ ಇದೆ. ಆಧ್ಯಾತ್ಮಿಕ ಹಿನ್ನೆಲೆಯ ಸಿಗಂದೂರು ಚೌಡೇಶ್ವರಿ, ಶೃಂಗೇರಿ ಶಾರದಾಪೀಠ, ಕೋಟೆ ಆಂಜನೇಯ ದೇವಸ್ಥಾನವಿದೆ. ಇಲ್ಲಿಗೆ ವಿಮಾನ ಪ್ರಯಾಣದ ಸಂಪರ್ಕ ಅವಶ್ಯಕವಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಆಗಲಿದೆ. ಶಿವಮೊಗ್ಗ ಜಿಲ್ಲೆಗೆ ಮಾತ್ರವಲ್ಲದೆ ಮೂರು ಜಿಲ್ಲೆಗಳಿಗೆ ಅನುಕೂಲವಾಗಲಿದೆ. ದಾವಣಗೆರೆ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಗಳಿಗೂ ವಿಮಾನ ನಿಲ್ದಾಣದಿಂದ ಹೆಚ್ಚಿನ ಉಪಯೋಗವಾಗಲಿದೆ ಎಂದರು.
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ ನಿರ್ಮಾಣವಾದರೆ ಸಾಕಷ್ಟು ಲಾಭವಾಗಲಿದೆ. ಹಾವೇರಿವರೆಗೂ ಜನರಿಗೆ ಸಂಪರ್ಕ ಸಾಧ್ಯವಾಗುತ್ತದೆ. ಬಿಜೆಪಿ ಸರ್ಕಾರ ಬಡವರ ಪರದ ಸರ್ಕಾರವಾಗಿದೆ. ಬಿಜೆಪಿ ಸರ್ಕಾರ ಬಡವರ ಕಲ್ಯಾಣ ಮಾಡುವ ಸರ್ಕಾರ. ಮಹಿಳೆ, ಮಕ್ಕಳ ಕಲ್ಯಾಣ ಮಾಡುವುದೇ ಬಿಜೆಪಿ ಸರ್ಕಾರದ ಮುಖ್ಯ ಉದ್ದೇಶ ಎಂದರು.
ಅಡುಗೆ ಮನೆಯಲ್ಲಿ ಗ್ಯಾಸ್ ಮತ್ತು ಸರಿಯಾದ ನೀರಿನ ವ್ಯವಸ್ಥೆ ಇಲ್ಲದೆ ನಮ್ಮ ಅಕ್ಕ-ತಂಗಿಯರಿಗೆ ಬಹಳ ತೊಂದರೆಯಾಗುತ್ತಿತ್ತು. ನಾವೀಗ ಈ ಸಮಸ್ಯೆಯನ್ನು ದೂರ ಮಾಡುತ್ತಿದ್ದೇವೆ. ಬಿಜೆಪಿ ಸರ್ಕಾರ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯ ನೀಡಿದೆ. ಸ್ವತಂತ್ರ್ಯ ನಂತರದ ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಗಳಿಗೆ ಬಂದಿದೆ. ಇಡೀ ಜಗತ್ತಿನಲ್ಲಿ ಭಾರತ ಸದ್ದು ಮಾಡುತ್ತಿದೆ. ಎಲ್ಲರೂ ಭಾರತಕ್ಕೆ ಬರಲು ಉತ್ಸಾಹಕರಾಗಿದ್ದಾರೆ. ಇದರಿಂದ ಯುವಕರಿಗೆ ಅನೇಕ ಅವಕಾಶಗಳು ಸಿಗಲಿವೆ. ಕರ್ನಾಟಕದ ಈ ವಿಕಾಸ ಇನ್ನಷ್ಟು ವೇಗ ಪಡೆಯಲಿದೆ. ನಾವೆಲ್ಲಾ ಒಟ್ಟಿಗೆ ಮುನ್ನುಗ್ಗಬೇಕಿದೆ. ನಾವೆಲ್ಲ ಒಟ್ಟಿಗೆ ಸಾಗಬೇಕಿದೆ. ಕರ್ನಾಟಕ ಜನರ, ಶಿವಮೊಗ್ಗ ಜನರ ಕನಸು ನನಸು ಮಾಡಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿ, ಶಿಮುಲ್ ಹಾಲು ಪ್ಯಾಕಿಂಗ್ ಘಟಕ, ಮಾಮ್ಕೋಸ್ ಆಡಳಿತ ಭವನ, ಶಿಮೊಗ್ಗ-ಶಿಕಾರಿಪುರ, ರಾಣೆಬೆನ್ನೂರು ಹೊಸ ರೈಲು ಮಾರ್ಗಕ್ಕೆ ಚಾಲನೆ ಹಾಗೂ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋಗೆ ಶಿಲಾನ್ಯಾಸ ಮಾಡಿದರು. ಜಲಜೀವನ್ ಮಿಷನ್ ಕಾಮಗಾರಿ ಉದ್ಘಾಟಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post