ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಸ್ತುತ ಸಾಮಾಜಿಕ ಜಾಲತಾಣ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವತ್ ನಾರಾಯಣ್ ಹೇಳಿದರು.
ಅವರು ಇಂದು ನಗರದ ಶುಭಮಂಗಳ ಸಮುದಾಯ ಭವನದಲ್ಲಿ ನಡೆದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನದಲ್ಲಿ ಮಾತನಾಡಿ, 24×7 ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಕಾರ್ಯಕರ್ತರು ದುಡಿಯುತ್ತಿದ್ದಾರೆ. ಅದರಲ್ಲೂ ಚುನಾವಣೆ ಸಮಯದಲ್ಲಿ ಬಹಳ ಪರಿಣಾಮಕಾರಿಯಾಗಿ ಬಿಂಬಿಸಬೇಕಾಗುತ್ತದೆ. ಹೊಸ ಹೊಸ ವಿಚಾರಗಳ ಮೂಲಕ ಜನರ ಗಮನ ಸೆಳೆಯಬೇಕಿದೆ ಎಂದರು.

ಸಾಮಾಜಿಕ ಜಾತಾಣದ ಮೂಲಕ ಪ್ರತಿಯೊಬ್ಬ ನಾಗರೀಕನನ್ನು ತಲುಪಲು ಸಾಧ್ಯವಿದೆ. ದೇಶ ಮತ್ತು ಸಮಾಜವನ್ನು ಕಾಪಾಡುವ ದೃಷ್ಟಿಯಿಂದ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಜಾಗೃತಿ ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ಮೂಲಕ ಮೊಬೈಲ್ ಮೂಲಕ ಅವರನ್ನು ತಲುಪಿ ತಿಳುವಳಿಕೆ ಮೂಡಿಸುವ ಅಗತ್ಯವಿದೆ ಎಂದರು.
ನಾಗರಿಕರಿಗೆ ಹೆಚ್ಚು ಹೆಚ್ಚು ತಿಳುವಳಿಕೆ ನೀಡುವ ಮೂಲಕ ಚುನಾವಣೆಗೆ ತಯಾರಿ ನಡೆಸಬೇಕಿದೆ. ವ್ಯವಸ್ಥೆ ಸಡಿಲಗೊಳಿಸುವ ಬಗ್ಗೆ ಆದ್ಯತೆ ನೀಡಬೇಕಿದೆ. ಈ ಮೂಲಕ ಸುಲಭವಾಗಿ, ಸರಳವಾಗಿ ಆಡಳಿತ ನಡೆಸಲು ಬಿಜೆಪಿ ಸರ್ಕಾರ ಒತ್ತು ನೀಡಿದೆ ಎಂದರು.

ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಿದರೆ, ಭಾರತಕ್ಕೆ ನೀಡಿದಂತೆ. ನಮ್ಮ ನಂಬಿಕೆಯ ಧಾರ್ಮಿಕ ಕೇಂದ್ರಗಳನ್ನು ಉಳಿಸಿ ಅಭಿವೃದ್ಧಿ ಮಾಡುತ್ತಿರುವ ಪಕ್ಷ ಬಿಜೆಪಿ. ನರೇಂದ್ರ ಮೋದಿಯವರು ಇಡೀ ವಿಶ್ವವೇ ಮೆಚ್ಚಿರುವ ನಾಯಕ. ಬೇರೆ ದೇಶಗಳಿಗೆ ನಮ್ಮ ದೇಶದ ಆರ್ಥಿಕ ಬೆಳವಣಿಗೆ ಉತ್ತಮವಾಗಿದೆ. ಆರ್ಥಿಕ ಬೆಳವಣಿಗೆಯಲ್ಲಿ ಇಡೀ ವಿಶ್ವದಲ್ಲೇ ಭಾರತ ನಂ.1 ಸ್ಥಾನದಲ್ಲಿದೆ ಎಂದರು.

ಅಮೂಲ್ ಉತ್ಪನ್ನಗಳು ಕಳೆದ ಹಲವಾರು ವ?ಗಳಿಂದ ರಾಜ್ಯದಲ್ಲಿ ಮಾರಾಟವಾಗುತ್ತಿವೆ. ಅಮೂಲ್ ರಾಜ್ಯಕ್ಕೆ ಹೊಸದೇನೂ ಅಲ್ಲ. ಅಮೂಲ್ ಉತ್ಪನ್ನಗಳಿಂದ ನಂದಿನಿ ಸಂಸ್ಥೆ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನಮ್ಮ ನಂದಿನಿಗೆ ಉತ್ತೇಜನ ನೀಡಿ ಉತ್ತಮ ಬೆಳವಣಿಗೆಯಾಗಿದೆ. ಹೊರ ರಾಜ್ಯದಲ್ಲೂ ಕೂಡ ನಂದಿನಿ ಉತ್ಪನ್ನಗಳು ಮಾರಾಟವಾಗುತ್ತವೆ. ಡಿ.ಕೆ. ಶಿವಕುಮಾರ್ಗೆ ಇದ್ದಕ್ಕಿದ್ದಂತೆ ನಂದಿನಿ ನೆನಪಾಗಿದೆ. ನಂದಿನಿ ಬಗ್ಗೆ ಮಾತನಾಡುವ ಇವರ ಮನೆಯಲ್ಲಿ ಅಮೇಜಾನ್ನಿಂದ, ಫ್ಲಿಪ್ ಕಾರ್ಟ್ನಿಂದ, ವಾಲ್ ಮಾರ್ಟ್ನಿಂದ ಏನೇನು ತರಿಸಿಕೊಳ್ಳುತ್ತಾರೆ ಗೊತ್ತಾ… ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್ ಅರುಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಗಿರೀಶ್ ಪಟೇಲ್, ಮೋನಪ್ಪ ಭಂಡಾರಿ, ಮೇಯರ್ ಶಿವಕುಮಾರ್, ವಿಕಾಸ್ ಪುತ್ತೂರು, ಮಹೇಶ್ ಪೂಜಾರಿ, ಶರತ್ ಕಲ್ಯಾಣಿ ಸೇರಿದಂತೆ ಹಲವರಿದ್ದರು.









Discussion about this post