ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಅಹೋ ರಾತ್ರಿಯ ರೈತರ ಹೋರಾಟವನ್ನು ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಸಾಮೂಹಿಕ ನಾಯಕತ್ವದಲ್ಲಿ)ವತಿಯಿಂದ ಫೆ.27ರಂದು ಬೆಳಿಗ್ಗೆ 11ಕ್ಕೆ ಮಲವಗೊಪ್ಪದ ಕಾಡಾ ಕಚೇರಿ ಎದುರು ಗ್ರಾಮ ಹಾಗೂ ತಾಲ್ಲೂಕು ಬಂದ್ ಆಚರಿಸಲಾಗುವುದು ಎಂದು ರೈತ ಮುಖಂಡ ಕೆ.ಟಿ. ಗಂಗಾಧರ್ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೆಹಲಿ ಗಡಿಯಲ್ಲಿ ರೈತರು ಅಹೋ ರಾತ್ರಿ ಧರಣಿ ನಡೆಸಿ ತಮ್ಮ ಹಕ್ಕುಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇದನ್ನು ಬೆಂಬಲಿಸಿ ಶಿವಮೊಗ್ಗ ಜಿಲ್ಲಾ ರೈತ ಸಂಘವು ಕೂಡ ಗ್ರಾಮ ಬಂದ್ ಹಾಗೂ ತಾಲ್ಲೂಕು ಬಂದ್ನ್ನು ಫೆ.27ರಂದು ನಡೆಸುತ್ತಿದ್ದು, ಸರ್ಕಾರದ ಗಮನವನ್ನು ಸೆಳೆಯುತ್ತದೆ ಎಂದರು.
ಕೃಷಿ ಕಾಯ್ದೆಗೆ ತಂದ ತಿದ್ದುಪಡಿಗಳು ರೈತಾಪಿ ಜನರನ್ನು ಸಂಕಷ್ಟಕ್ಕೆ ದೂಡಿವೆ. ರೈತ ಸಮೂಹವಲ್ಲದೆ, ಇತರೆ ಕ್ಷೇತ್ರಗಳಲ್ಲೂ ವ್ಯತಿರಿಕ್ತ ಪರಿಣಾಮ ಬೀರಿವೆ. ಆದ್ದರಿಂದ ಅನೇಕ ರೈತ ವಿರೋಧಿ ಕಾಯ್ದೆಗಳನ್ನು ತಿದ್ದಪಡಿ ಮಾಡುವ ಅಗತ್ಯವಿದೆ ಎಂದರು.
Also read: ಶಿಕ್ಷಣ ಜ್ಞಾನದ ಜೊತೆಗೆ ಕೌಶಲ್ಯವಿರಲಿ: ಚಂದ್ರಶೇಖರ್
ಪ್ರಮುಖವಾಗಿ ಕನಿಷ್ಟ ಬೆಂಬಲ ಬೆಲೆಯನ್ನು ಎತ್ತಿಯಿಡಿಯಬೇಕಾಗಿದೆ. ಅದಕ್ಕಾಗಿ ಕಾನೂನು ರಚಿಸಬೇಕಾಗಿದೆ. ಕನಿಷ್ಟ ಬೆಂಬಲ ಬೆಲೆ ಘೋಷಿಸಿದ ನಂತರ ಯಾರೇ ಆಗಲಿ ಅದಕ್ಕಿಂತ ಕಡಿಮೆ ಬೆಲೆಯಲ್ಲಿ ರೈತರ ಬೆಳೆಗಳನ್ನು ಖರಿದಿಸಿದರೆ ಅವರಿಗೆ ಶಿಕ್ಷೆಯಾಗಬೇಕು. ಇಂತಹ ಕಾನೂನನ್ನು ತರಬೇಕಾಗಿದೆ ಮತ್ತು ಈಗಾಗಲೇ ತೋಟಗಾರಿಕೆ ಸೇರಿದಂತೆ ಹಲವು ಬೆಳೆಗಳನ್ನು ಕನಿಷ್ಟ ಬೆಂಬಲ ಯೋಜನೆ ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಅವುಗಳನ್ನು ಮತ್ತೆ ಪಟ್ಟಿಗೆ ಸೇರಿಸಬೇಕು ಎಂದರು.
ಅಗತ್ಯ ವಸ್ತುಗಳ ಕಾಯ್ದೆಯನ್ನು ತಿದ್ದುಪಡಿ ಮಾಡಬಾರದು. ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ತಿದ್ದುಪಡಿಗಳು ರೈತರ ಮತ್ತು ಗ್ರಾಹಕರ ರಕ್ಷಣೆ ಮಾಡುವಂತಹ ನಿಬಂಧನೆಗಳು ಸಡಿಲಿಸುವ ಹುನ್ನಾರವಾಗಿದೆ. ಇದು ರೈತ ಮತ್ತು ಗ್ರಾಹಕ ವಿರೋಧಿಯಾಗಿದೆ. ಈ ಪ್ರಮುಖ ಕಾಯ್ದೆಯನ್ನು ಸುಧಾರಣೆಗೊಳಿಸಬೇಕೆ ವಿನಹ ಬದಲಾವಣೆ ಮಾಡಬಾರದು ಎಂದರು.
ಕೃಷಿ ಮಾರುಕಟ್ಟೆಯ ಸಮಗ್ರತೆಯನ್ನು ರಕ್ಷಿಸಬೇಕು. ಭೂಸುಧಾರಣಾ ಕಾಯ್ದೆಗಳು ರೈತರ ಪರವಾಗಿರಬೇಕು. ಕಬ್ಬು ಬೆಳೆಗೆ ನ್ಯಾಯಯುತ ಬೆಲೆ ಸಿಗಬೇಕು. ಎಪಿಎಂಸಿ ಕಾಯ್ದೆಗೆ ತಿದ್ದುಪಡಿಯಾಗಬೇಕು. ರೈತರ ಎಲ್ಲಾ ಸಮಸ್ಯೆಗಳು ಬಗೆಹರಿಯಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಯಶ್ವಂತರಾವ್ ಗೋರ್ಪಡೆ, ಕೆ.ಎಸ್.ಪುಟ್ಟಪ್ಪ, ಮಂಜುನಾಥೇಶ್ವರ ಎಚ್.ಎಸ್., ಜಗದೀಶ್ ನಾಯಕ್, ಕೆ.ಆರ್.ಮಂಜುನಾಥ್ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post