ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಮುಚ್ಚವ ಸ್ಥಿತಿಗೆ ಹೋಗುತ್ತಿದ್ದು, ಇದನ್ನು ತಡೆಗಟ್ಟುವ ಪ್ರಯತ್ನ ಬಲವಾಗಿ ನಡೆಯುತ್ತಿದೆ. ಕಾರ್ಮಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಹೇಳಿದರು.
ಅವರು ಇಂದು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಅನೇಕ ವರ್ಷಗಳಿಂದ ವಿಐಎಸ್ಎಲ್ ಹಾಗೂ ಎಂಪಿಎಂ ಕಾರ್ಖಾನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಮೈಸೂರು ಮಹಾರಾಜರು ಆರಂಭಿಸಿದ ವಿಐಎಸ್ಎಲ್ ಕಾರ್ಖಾನೆ ಮುಚ್ಚುವ ಸ್ಥಿತಿಗೆ ಹೋಗುತ್ತಿರುವುದು ದುರ್ದೈವ ಎಂದರು.
ಈ ಹಿಂದೆ ಲಾಭದಲ್ಲಿ ನಡೆಯುತ್ತಿದ್ದ ಕಾರ್ಖಾನೆ ಅನೇಕ ದಶಕಗಳಿಂದ ನಷ್ಟದ ಸುಳಿಗೆ ಸಿಕ್ಕಿದ್ದೆ ಹೆಚ್ಚು. ಅಂದಿನ ಯುಪಿಎ ಸರ್ಕಾರವು ಸಹ ಸರ್ಕಾರಿ ಸೌಮ್ಯದ ಸೇಲ್ಗೆ ವಹಿಸಿ ಕಾರ್ಖಾನೆಗೆ ಜೀವ ತುಂಬಲು ಪ್ರಯತ್ನಿಸಿತ್ತು. ಸಂಸದನಾಗಿ ನಾನು ಸಹ 2 ಬಾರಿ ಕೇಂದ್ರದ ಸಚಿವರನ್ನು ಭದ್ರಾವತಿಗೆ ಕರೆಸಿ ಅಲ್ಲಿನ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಟ್ಟಿದ್ದೆ. ಅವರು ಸಹ ಕಾರ್ಖಾನೆಯ ಅಭಿವೃದ್ಧಿಗೆ ಭರವಸೆ ನೀಡಿದ್ದರೂ ಸಹ ಸಾಧ್ಯವಾಗಲಿಲ್ಲ. ನಷ್ಟದಿಂದ ಪಾರಾಗಲು ಖಾಸಗಿಯವರಿಗೆ ಕಾರ್ಖಾನೆ ವಹಿಸುವ ಪ್ರಯತ್ನವಾಗಿ 2019ರ ಜುಲೈನಲ್ಲಿ ಟೆಂಡರ್ ಕರೆಯಲಾಗಿತ್ತು. ಯಾವುದೇ ಖಾಸಗಿ ಕಂಪನಿಗಳು ಇದಕ್ಕೆ ಆಸಕ್ತಿ ತೋರಲಿಲ್ಲ. ಮತ್ತೆ ಟೆಂಡರ್ ಕರೆದರೂ ಸಹ ಬರಲಿಲ್ಲ ಎಂದರು.
ಜಗತ್ತಿನಾದ್ಯಂತ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಇದು ನಮ್ಮ ದೇಶದಲ್ಲೂ ಇದೆ. ಇದನ್ನು ಸರಿದೂಗಿಸಲು 2018-19ರಲ್ಲಿ 28 ಕಂಪನಿಗಳಿಂದ 85 ಸಾವಿರ ಕೋಟಿ ರೂ.ಮೌಲ್ಯದ ಸರ್ಕಾರದ ಷೇರನ್ನು ವಾಪಸ್ಸು ಪಡೆಯಲಾಯಿತು. 2019-20ರಲ್ಲಿ 15 ಕಂಪನಿಗಳಿಂದ 15 ಸಾವಿರ ಕೋಟಿ, 2020-21ರಲ್ಲಿ 18 ಕಂಪನಿಗಳಿಂದ 32 ಸಾವಿರ ಕೋಟಿ, 2021-22ರಲ್ಲಿ 10 ಕಂಪನಿಗಳಿಂದ 13,500 ಸಾವಿರ ಕೋಟಿ ರೂ. ಹಾಗೂ 2022-23ರಲ್ಲಿ 8 ಕಂಪನಿಗಳಿಂದ 38 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳನ್ನು ವಾಪಸ್ಸು ಪಡೆಯಲಾಗಿದೆ ಎಂದ ಅವರು, ದೇಶದಲ್ಲಿ ನಷ್ಟದಲ್ಲಿರುವ ಸುಮಾರು 80 ಕಾರ್ಖಾನೆಗಳನ್ನು ಸಹ ಮುಚ್ಚಲಾಗುತ್ತಿದೆ. ಇದಕ್ಕೆ ವಿಐಎಸ್ಎಲ್ ಹೊರತಾಗಿಲ್ಲ ಎಂದರು.
ವಿಐಎಸ್ಎಲ್ಗೆ ಬಂಡವಾಳ ಹೂಡಿ ಉತ್ಪಾದನೆಗೆ ಚಾಲನೆ ನೀಡಿದ್ದರೂ ಸಹ ಸಂಪೂರ್ಣವಾಗಿ ನಷ್ಟ ಉಂಟಾಗಿ ಉತ್ಪಾದನೆ ಸ್ಥಗಿತವಾಯಿತು. ಕೇಂದ್ರ ಸರ್ಕಾರ ಬಂಡವಾಳ ಹೂಡುವ ಪರಿಸ್ಥಿತಿಯಿಲ್ಲ. ರಾಜ್ಯ ಸರ್ಕಾರ ಬಂಡವಾಳ ಹೂಡಲು ಇತ್ತೀಚೆಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಯಿತು ಎಂದ ಅವರು, ಶೀಘ್ರದಲ್ಲೆ ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಮಿಕ ಮುಖಂಡರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹೂಡಿಕೆದಾರರನ್ನು ಮನವೊಲಿಸಿ ಕಾರ್ಖಾನೆಗೆ ಬಂಡವಾಳ ಹೂಡುವಂತೆ ಪ್ರಯತ್ನಿಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದರು.
ಕಾರ್ಖಾನೆ ಮುಚ್ಚುವ ಸ್ಥಿತಿಗೆ ಹೋಗುತ್ತಿದೆ ಎಂದು ನೌಕರರು ಹಾಗೂ ನಿವೃತ್ತಿ ನೌಕರರ ಮುಖಂಡರು ಹಗಲು ರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದು, ಕಾರ್ಮಿಕರ ಹಿತದೃಷ್ಟಿಯಿಂದ, ರಾಜಕೀಯ ಕೆಸರಾಟಕ್ಕೆ ಅವಕಾಶ ನೀಡದೆ ಕಾರ್ಖಾನೆ ಉಳಿಸಲು ಮತ್ತೆ ಪತ್ರ ವ್ಯವಹಾರ ಹಾಗೂ ಸಭೆಗಳನ್ನು ನಡೆಸಲಾಗುವುದು ಎಂದರು.
ಜಿಲ್ಲೆಯ ಆಸ್ತಿಯಾಗಿರುವ ಈ ಕಾರ್ಖಾನೆ ಮುಚ್ಚುವ ಸ್ಥಿತಿಯಲ್ಲಿದ್ದರೂ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಬಂದಿದೆ. ವಿಮಾನ ನಿಲ್ದಾಣ ಉದ್ಘಾಟನೆ ನಂತರ ವಿಮಾನದ ಹಾರಾಟದಿಂದ ಬಂಡವಾಳ ಹೂಡಿಕೆದಾರರು ಕಾರ್ಖಾನೆಗೆ ಬಂಡವಾಳ ಹೂಡಲು ಮುಂದೆ ಬರಬಹುದು ಎಂಬ ಆತ್ಮವಿಶ್ವಾಸವಿದೆ ಹಾಗೂ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಬಲವಾಗಿರುತ್ತದೆ ಎಂದರು.
ಪತ್ರಿಕಾಗೊಷ್ಟಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಬಿ.ಕೆ.ಶ್ರೀನಾಥ್, ಎಸ್.ಎನ್.ಚನ್ನಬಸಪ್ಪ, ಶಿವರಾಜ್, ಧರ್ಮಪ್ರಸಾದ್, ರಮೇಶ್, ಚಂದ್ರಶೇಖರ್, ವಿನ್ಸ್ಂಟ್, ಕೆ.ವಿ.ಅಣ್ಣಪ್ಪ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post