ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ಅವರು 16ನೇ ಬಾರಿ ದಾಖಲೆಯ ಮುಂಗಡ ಪತ್ರವನ್ನು ಮಂಡಿಸಿದ್ದು, ಹೆಚ್ಚಿನ ಬಂಡವಾಳ ಹೂಡಿಕೆ, ಹೊಸದಾಗಿ ಉದ್ಯೋಗ ಅವಕಾಶ ಸೃಷ್ಟಿಸುವುದಕ್ಕೆ ಆದ್ಯತೆ ಕೊಡಲಾಗಿದೆ ಎಂದು ಆರ್ಥಿಕ ತಜ್ಞ ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಡಾ. ಎಂ.ಎಸ್. ಮಂಜುನಾಥ್ ಹೇಳಿದ್ದಾರೆ.
2025-26ನೇ ಸಾಲಿನ ರಾಜ್ಯ ಮುಂಗಡ ಪತ್ರ #State Budget ಒಟ್ಟು 4,09,549 ಕೋಟಿ ರೂ. ಗಾತ್ರವಾಗಿದೆ. ಇದರಲ್ಲಿ 3,11,739 ಕೋಟಿ ರೂ. ರಾಜಸ್ವ ವೆಚ್ಚ, 71,336 ಕೋಟಿ ಬಂಡವಾಳ ವೆಚ್ಚ, 26,474 ಕೋಟಿ ರೂ. ಸಾಲ ಮರುಪಾವತಿ ಒಳಗೊಂಡಿದೆ. 19,262 ಕೋಟಿ ರಾಜಸ್ವ ಕೊರತೆ ಅಂದಾಜಿಸಲಾಗಿದ್ದು, ವಿತ್ತೀಯ ಕೊರತೆ 90,428 ಕೋಟಿ ಅಂದಾಜಿಸಲಾಗಿದೆ. ಎಲ್ಲಾ ಸ್ವೀಕೃತಿಗಳು ಸೇರಿ 2025-26ನೇ ಸಾಲಿನಲ್ಲಿ 4,08,647 ಕೋಟಿ ರೂ. ಸ್ವೀಕೃತಿಯನ್ನು ಅಂದಾಜಿಸಲಾಗಿದೆ ಎಂದಿದ್ದಾರೆ.
Also read: ಶಿವಮೊಗ್ಗ | ಕೌಶಲ್ಯತೆಯು ವಿದ್ಯೆಯ ಜೊತೆಗಿನ ಅತ್ಯವಶ್ಯಕ ಸಾಧನ | ನಾಗರಾಜ
ಶಿಕ್ಷಣ, ಆರೋಗ್ಯ, ಕೃಷಿ ನೀರಾವರಿ, ಗ್ರಾಮೀಣ ಅಭಿವೃದ್ಧಿ, ಆರ್ಥಿಕ, ಸಾಮಾಜಿಕ ಸೇವೆಗಳಿಗೆ, ನೀರು ಪೂರೈಕೆ, ನೈರ್ಮಲ್ಯ, ಸಮಾಜ ಕಲ್ಯಾಣಕ್ಕೆ, ಇತರೆ ಸಾಮಾನ್ಯ ಸೇವೆಗಳಿಗೆ, ಸಾಲ ಮರುಪಾವತಿಗೆ ಆದ್ಯತೆ ನೀಡಲಾಗಿದೆ. ಜನ ಕಲ್ಯಾಣಕ್ಕೆ ಆಯವ್ಯಯದಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ದೇಶದ ಜಿಡಿಪಿಗೆ 8.4ರಷ್ಟು ಕೊಡುಗೆ ನೀಡಿದೆ ಎಂದಿದ್ದಾರೆ.
ರಾಜ್ಯದಲ್ಲಿ ಸಾರಿಗೆ ಕೊರತೆಯನ್ನು ನೀಗಿಸಲು ಹೊಸ ಬಸ್ ಚಾಲನೆಗೆ ಅವಕಾಶ ನೀಡಲಾಗಿದೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಯೋಜನೆಗೆ ಒತ್ತನ್ನು ನೀಡಲಾಗಿದೆ. ಪಂಚ ಗ್ಯಾರೆಂಟಿಗಳನ್ನು ಉಳಿಸಿಕೊಂಡಿದ್ದು, ಒಟ್ಟಾರೆ ಯಾವುದೇ ಹೊರೆಯನ್ನು ಜನತೆಗೆ ವಿಧಿಸದೆ, ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮುದ್ರಾಂಕದಿಂದ ಅಧಿಕ ಪ್ರಮಾಣದ ರಾಜಸ್ವ ಸಂಗ್ರಹಣೆ ಗುರಿ ಹೊಂದಲಾಗಿದೆ. ಬಜೆಟ್ ನಿಂದ ಎಲ್ಲಾ ವರ್ಗದ ಜನತೆಗೆ ಅನುಕೂಲವಾಗಿದ್ದರೂ, ಪ್ರಾದೇಶಿಕ ಅಸಮತೋಲನ ನಿರ್ವಹಣೆಗೆ ಇನ್ನಷ್ಟು ಪ್ರಾಮುಖ್ಯತೆಯನ್ನು ಕೊಡಬೇಕಾಗಿರುವುದು ಕಂಡುಬಂದಿದೆ ಎಂದಿದ್ದಾರೆ.
ಒಟ್ಟಾರೆ ಜನಪರ ಮುಂಗಡ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ್ದು, ವಿತ್ತೀಯ ಶಿಸ್ತನ್ನು ಹಾಗೂ ರಾಜ್ಯದ ಭದ್ರತೆಯನ್ನು ಕಾಪಾಡಿಕೊಂಡು ಬಂದಿದೆ ಡಾ. ಎಂ.ಎಸ್. ಮಂಜುನಾಥ್ ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post