ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸಂಕಷ್ಟದ ಪರಿಸ್ಥಿತಿಯಲ್ಲಿ, ರಾಜ್ಯಸರ್ಕಾರ ಕಾರ್ಮಿಕರ ಪರವಾಗಿ ನಿಂತಿದ್ದು, ಸರ್ಕಾರದ ಯೋಜನೆಗಳನ್ನು ಜನತೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಇಂದು ನಗರದ ಗಾಂಧಿ ಬಜಾರ್ ನ ತುಳಜಾ ಭವಾನಿ ದೇವಾಲಯದ ತುಳಜಾ ಭವನ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ಟೈಲರ್ಸ್ ಗಳಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ, ವಿವಿಧ ಯೋಜನೆಗಳ ಮೂಲಕ ಬಡವರನ್ನು ತಲುಪುವ ಯೋಜನೆಗಳನ್ನು ರೂಪಿಸಿದೆ. ಅಲ್ಲದೇ, ಕಾರ್ಮಿಕ ಇಲಾಖೆ ಮೂಲಕ, ಕಾರ್ಮಿಕರಿಗೆ ಸಹಾಯಹಸ್ತ ಚಾಚುವ ಯೋಜನೆಯಾಗಿ, ಆಹಾರ ಕಿಟ್ ವಿತರಣೆ ಮಾಡಲಾಗುತ್ತಿದೆ. ಕಾರ್ಮಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಅಲ್ಲದೇ, ಟೈಲರ್ ಗಳು, ಇಲಾಖೆಯ ಯೋಜನೆಗಳ ಫಲಾನುಭವಿಗಳಾಗಲು, ಹೆಚ್ಚು ಹೆಚ್ಚು ಹೆಸರು ನೋಂದಾವಣೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು. ಈಗಾಗಲೇ ಕೆಲವರು ನೋಂದಣಿ ಮಾಡಿಕೊಂಡಿದ್ದು, ಇದು ಇನ್ನೂ ಹೆಚ್ಚಾಗಬೇಕೆಂದು ಕರೆ ನೀಡಿದರು.
ಕಾರ್ಮಿಕ ಇಲಾಖಾಧಿಕಾರಿ ವಿಶ್ವನಾಥ್ ಮಾತನಾಡಿ, ಟೈಲರ್ ಗಳು ತಮ್ಮ ಹೆಸರುಗಳನ್ನು ಆನ್ ಲೈನ್ ನಲ್ಲೇ ನೋಂದಣಿ ಮಾಡಿಕೊಳ್ಳುವುದರ ಮೂಲಕ ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳಾಗಬೇಕೆಂದು ಹೇಳಿದರು.
ದೂರದಲ್ಲಿರುವ ಟೈಲರ್ ಗಳು ಕಚೇರಿ ಹುಡುಕಿಕೊಂಡು ಬಂದು ನೋಂದಾವಣೆ ಮಾಡಿಕೊಳ್ಳದೇ, ತಾವು ಇದ್ದಲ್ಲೇ, ಆನ್ ಲೈನ್ ನಲ್ಲಿಯೇ ವೆಬ್ ಮೂಲಕ ನೋಂದಣಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಟೈಲರ್ಸ್ ಗಳು, ಕಡಿಮೆ ಸಂಖ್ಯೆಯಲ್ಲಿ ನೋಂದಾವಣೆ ಮಾಡಿಕೊಂಡಿದ್ದು, ಇದು ಹೆಚ್ಚಾಗಲಿ ಸರ್ಕಾರದ ಸವಲತ್ತು ಪಡೆಯುವಂತಾಗಲೀ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ನೋಂದಾಯಿತ ಅರ್ಹ ಟೈಲರ್ ಗಳಿಗೆ ಆಹಾರ ಕಿಟ್ ವಿತರಿಸಲಾಯಿತು.
ಈ ವೇಳೆ ವೇದಿಕೆಯಲ್ಲಿ, ಜಿ.ಪಂ. ಮಾಜಿ ಸದಸ್ಯ ಕೆ.ಈ. ಕಾಂತೇಶ್, ಶ್ರೀ ರಾಮ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್.ಎಸ್. ಗಿರೀಶ್, ಸಮಾಜದ ಪ್ರಧಾನ ಕಾರ್ಯದರ್ಶಿ ಸಂತೋಷ್ ಸಾಕ್ರೆ, ಉಪಾಧ್ಯಕ್ಷರಾದ ಸುರೇಶ್ ಬೇದ್ರೆ, ಗಜೇಂದ್ರನಾಥ್ ಮಾಳೋದೆ, ನಗರ ಬಿಜೆಪಿ ಅಧ್ಯಕ್ಷ ಜಗದೀಶ್, ಎಂ.ಕೆ. ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷರಾದ ಓಂಪ್ರಕಾಶ್ ತೇಲ್ಕರ್ ವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post