ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಡಿವಿಎಸ್ ಪದವಿ ಪೂರ್ವ (ಸ್ವತಂತ್ರ) ಕಾಲೇಜಿನಲ್ಲಿ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಡಿವಿಎಸ್ ಆವಿಷ್ಕಾರ ಎಂಬ ಶೀರ್ಷಿಕೆಯಡಿ ಡಿ.29ರಿಂದ 31ರವರೆಗೆ ವಸ್ತುಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಸ್. ರಾಜಶೇಖರ್ ಹೇಳೀದರು.
ಅವರು ಇಂದು ಡಿವಿಎಸ್ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವ ಮತ್ತು ವೈಜ್ಞಾನಿಕ ತಳಹದಿಯಲ್ಲಿ ರೂಪಿಸಿರುವ ಹಾಗೂ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲೂ ವಸ್ತುಪ್ರದರ್ಶನ ಸಾಧ್ಯ ಎಂದು ನಿರೂಪಿಸುವ ದೃಷ್ಟಿಯಿಂದ ಈ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದರು.
ಈ ವಸ್ತು ಪ್ರದರ್ಶನದಲ್ಲಿ ರಸಾಯನ ಶಾಸ್ತ್ರ, ಭೌತಶಾಸ್ತ್ರ, ಗಣಿತ, ಜೀವಶಾಸ್ತ್ರ, ತರ್ಕಶಾಸ್ತ್ರ, ಇತಿಹಾಸ ಅರ್ಥಶಾಸ್ತ್ರ, ರಾಜ್ಯ ಶಾಸ್ತ್ರ, ಸಮಾಜಶಾಸ್ತ್ರ, ವಾಣಿಜ್ಯಶಾಸತ್ರ, ಲೆಕ್ಕ ಶಾಸ್ತ್ರ, ಇಂಗ್ಲಿಷ್, ಉರ್ದು, ಕನ್ನಡ, ಸಂಸ್ಕೃತ, ಹಿಂದಿ ಈ ಎಲ್ಲಾ ವಿಭಾಗಗಳಲ್ಲಿಯೂ ನಮ್ಮ ವಿದ್ಯಾರ್ಥಿಗಳು ಮಾದರಿಯನ್ನು ಪ್ರದರ್ಶಿಸಲಿದ್ದಾರೆ. ಸಾಮಾನ್ಯವಾಗಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ಶಾಲೆಗಳಲ್ಲಿ ವಸ್ತುಪ್ರದರ್ಶನ ನಡೆಯುತ್ತಿತ್ತು. ಆದರೆ ನಮ್ಮ ಶಾಲೆಯಲ್ಲಿ ಕಲೆ ಮತ್ತು ಸಂಸ್ಕೃತಿ ಹಾಗೂ ಭಾಷೆ ವಿಷಯಗಳಿಗೂ ಸಂಬಂಧಿಸಿದಂತೆ ಈ ವಸ್ತುಪ್ರದರ್ಶನ ನಡೆಯುತ್ತಿದ್ದು, ಉದಾಹರಣೆಗೆ ಕನ್ನಡಕ್ಕೆ ಸಂಬಂಧಿಸಿದಂತೆ ಆದಿಕವಿ ಪಂಪನಿಗಿಂತಲೂ ಹಿಂದೆಯೇ ಕುಮದೇಂದು ಮುನಿಗಳು ರಚಿಸಿದ್ದ ಜಗತ್ತಿನ ಏಕೈಕ ಅಂಕಕಾವ್ಯವಾದ ಸಿರಿ ಭೂ ವಲಯ ಕೃತಿಯ ಪರಿಚಯ ಮತ್ತು ಪ್ರದರ್ಶನವನ್ನು ನಮ್ಮ ವಿದ್ಯಾರ್ಥಿಗಳು ಮಾಡಲಿದ್ದಾರೆ ಎಂದರು.
ಹಾಗೆಯೇ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ಎನರ್ಜಿ ಹಾರ್ವೆಸ್ಟಿಂಗ್ ಟೆಕ್ನಾಲಜೀಸ್ ಎಂಬ ಶೀರ್ಷಿಕೆಯಡಿ ಗಾಳಿಯಿಂದ ಸಮುದ್ರದ ಅಲೆಗಳಿಂದ ಹರಿಯುವ ನೀರಿನಿಂದ, ಚಲಿಸುತ್ತಿರುವ ವಾಹನ ಗಾಳಿಯಿಂದ, ಭೂಗರ್ಭದ ಅಂತರಾಳದಿಂದ ಬರುವ ಬಿಸಿ ಗಾಳಿಯ ಒತ್ತಡದಿಂದ ರಸ್ತೆಯ ಹಂಪುಗಳಿಂದಲೂ ಹೇಗೆ ವಿದ್ಯುತ್ ಉತ್ಪಾದಿಸಬಹುದು ಎಂಬ ಕೌತುಕದ ವಿಷಯಗಳನ್ನು ನಮ್ಮ ಮಕ್ಕಳೇ ರೂಪಿಸಿರುವುದು ಈ ಪ್ರದರ್ಶನದ ವಿಶೇಷವಾಗಿದೆ ಎಂದರು.
ಇದರ ಜೊತೆಗೆ ಸೌರಮಂಡಲದ ಗ್ರಹಗಳನ್ನು ದೂರದರ್ಶಕಗಳನ್ನು ಉಪಯೋಗಿಸಿ ನೇರ ಬಾಹ್ಯಾಕಾಶ ವೀಕ್ಷಣೆ, ಗಣಿತಕ್ಕೆ ಸಂಬಂಧಪಟ್ಟ ವಿಷಯಗಳು, ಮಣ್ಣಿನ ಸವಕಳಿ ತಡೆಗಟ್ಟುವ ರೀತಿ, ಇತಿಹಾಸದ ಘಟನೆಗಳು, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳು ಹೀಗೆ ಸುಮಾರು 270ಕ್ಕೂ ಹೆಚ್ಚು ಮಾದರಿಗಳನ್ನು ನಮ್ಮ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ. ಜ್ಞಾನ, ವಿಜ್ಞಾನ, ವಿಕಾಸ, ವೀಕ್ಷಣೆಯ ಮೂರು ದಿವಸದ ಈ ವಸ್ತುಪ್ರದರ್ಶನಕ್ಕೆ ಸಾರ್ವಜನಿಕರಿಗೂ ಅವಕಾಶವಿದೆ. ಮುಖ್ಯವಾಗಿ ವಿದ್ಯಾರ್ಥಿಗಳ ಪೋಷಕರು ಕಡ್ಡಾವಾಗಿ ಆಗಮಿಸುವಂತೆ ತಿಳಿಸಲಾಗಿದೆ ಎಂದರು.
ಕಾರ್ಯಕ್ರಮ:
ವಸ್ತುಪ್ರದರ್ಶನದ ಉದ್ಘಾಟನಾ ಸಮಾರಂಭವು ಡಿ.29ರಂದು ಬೆಳಿಗ್ಗೆ 9:30ಕ್ಕೆ ಕಾಲೇಜು ಆವರಣದಲ್ಲಿ ನಡೆಯಲಿದೆ. ಚಲನಚಿತ್ರ ನಟಿ ಕು. ಆಶಾ ಭಟ್ ವಸ್ತುಪ್ರದರ್ಶನ ಉದ್ಘಾಟಿಸುವರು. ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ. ಕೃಷ್ಣಪ್ಪ ಸೇರಿದಂತೆ ಸಂಸ್ಥೆಯ ನಿರ್ದೇಶಕರು, ಶಿಕ್ಷಕ ಪ್ರತಿನಿಧಿಗಳು, ಪ್ರಾಂಶುಪಾಲರು ಭಾಗವಹಿಸಲಿದ್ದಾರೆ ಸಂಸ್ಥೆಯ ಅಧ್ಯಕ್ಷ ಕೆ.ಎನ್. ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸುವರು ಎಂದರು.
Also read: ಕೊರೋನಾ ಮುಂಜಾಗ್ರತೆ: ಜಿಲ್ಲೆಯಲ್ಲಿ ಎಷ್ಟು ಐಸಿಯು ಬೆಡ್, ಆಕ್ಸಿಜನ್ ಪ್ಲಾಂಟ್’ಗಳಿವೆ? ಇಲ್ಲಿದೆ ಮಾಹಿತಿ
ಡಿ.30ರ ಬೆಳಿಗ್ಗೆ 9 ಗಂಟೆಗೆ ವಿಜ್ಞಾನಗೋಷ್ಠಿ ಇರುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಂ.ಎಸ್. ಪ್ರಸನ್ನಕುಮಾರ್ ಗೋಷ್ಠಿ ಉದ್ಘಾಟಿಸುತ್ತಾರೆ. ಬಿ.ಪಿ. ದಾಕ್ಷಾಯಿಣಿ ಮುಖ್ಯ ಭಾಷಣ ಮಾಡುತ್ತಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಆರ್. ಪರಮೇಶ್ವರ್, ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ನಾಗರಾಜ್ ಸೇರಿದಂತೆ ಸಂಸ್ಥೆಯ ಹಲವರು ಭಾಗವಹಿಸುತ್ತಾರೆ.
ಸಮಾರೋಪ ಸಮಾರಂಭ ಡಿ.31ರಂದು ಬೆಳಿಗ್ಗೆ 9:30ಕ್ಕೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ವಿಜ್ಞಾನ ಪರಿಷತ್ ಅಧ್ಯಕ್ಷ ಗಿರೀಶ್ ಡಿ.ಕಡ್ಲೆವಾಡ್, ಕಾರ್ಯದರ್ಶಿ ಬೆಂಜಮಿನ್ ಫ್ರಾನ್ಸಿಸ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದು, ಸಂಸ್ಥೆಯ ಉಪಾಧ್ಯಕ್ಷ ಎಸ್.ಪಿ. ದಿನೇಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಡಿವಿಎಸ್ ಸಂಸ್ಥೆಯ ಕೆ.ಎನ್. ರುದ್ರಪ್ಪ ಕೊಳಲೆ, ಸಹಕಾರ್ಯದರ್ಶಿ ಡಾ.ಎ.ಸತೀಶ್ ಕುಮಾರ್ ಶೆಟ್ಟಿ, ಖಜಾಂಚಿ ಬಿ. ಗೋಪಿನಾಥ್, ನಿರ್ದೇಶಕರಾದ ಜಿ. ಮಧುಸೂದನ್, ಎಂ. ರಾಜು, ಶಿಕ್ಷಣ ಪ್ರತಿನಿಧಿ ಡಾ.ಎಂ. ವೆಂಕಟೇಶ್, ಪ್ರಾಂಶುಪಾಲ ಎ.ಈ. ರಾಜಶೇಖರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post