ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಶಿವಮೊಗ್ಗ ಭಾಗದ ಅನೇಕ ರೈಲು ಸೇವೆಗಳಲ್ಲಿ ಅನೇಕ ವ್ಯತ್ಯಯಗಳು ಉಂಟಾಗಿದ್ದು, ಅದನ್ನು ಸರಿಪಡಿಸಿ ರೈಲು ಸಂಚಾರ ಪುನರಾರಂಭಿಸುವಂತೆ ರೈಲ್ವೆ ಇಲಾಖೆಯೊಂದಿಗೆ ನಿರಂತರವಾಗಿ ಮಾತುಕತೆ ನಡೆಸಿದ್ದರ ಫಲವಾಗಿ ಬಹುದಿನಗಳಿಂದ ನಿಲುಗಡೆಯಾಗಿದ್ದ ಅನೇಕ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರೈಲು ಸೇವೆಯು ಪುನರಾರಂಭಗೊಂಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರರವರು ತಿಳಿಸಿದ್ದಾರೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಈಗಾಗಲೇ ಸಂಚರಿಸುತ್ತಿರುವ ರೈಲುಗಳ ಜೊತೆಗೆ 67369/75, ತಾಳಗುಪ್ಪ-ಶಿವಮೊಗ್ಗ ಟೌನ್-ತಾಳಗುಪ್ಪ ಪ್ಯಾಸೆಂಟರ್ ರೈಲಿನ ಸೇವೆಯನ್ನು ಸೆಪ್ಟೆಂಬರ್ 1 ರಿಂದ ಆರಂಭಿಸಲಾಗುತ್ತಿದೆ. ಹಾಗೆಯೇ 07311/07312 ಯಶವಂತಪುರ-ಶಿವಮೊಗ್ಗ-ಯಶವಂತಪುರ ವಾರಕ್ಕೆ 3 ಬಾರಿ ಸಂಚರಿಸುವ ಎಕ್ಸ್ಪ್ರೆಸ್ ಸೇವೆಯನ್ನು (ಸೋಮವಾರ ಬುಧವಾರ ಮತ್ತು ಶನಿವಾರ) ಅಕ್ಟೋಬರ್ 12 ರಿಂದ ಪುನಾರಂಭ ಮಾಡಲಾಗುತ್ತಿದೆ ಎಂದವರು ತಿಳಿಸಿದ್ದಾರೆ.


ಶಿವಮೊಗ್ಗ-ತಾಳಗುಪ್ಪ ನಡುವಿನ ಅರಸಾಳು ರೈಲ್ವೆ ನಿಲ್ದಾಣದ ಪ್ಲಾಟ್ಫಾರಂ ವಿಸ್ತರಣಾ ಕಾಮಗಾರಿಯು 2020ರ ಜನವರಿಯಲ್ಲಿ ಲೋಕಾರ್ಪಣೆ ಮಾಡಲಾಗಿದ್ದು, ಈಗ 24 ಕೋಚ್ಗಳ ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಬೇಕಾದ ಮೂಲಸೌಕರ್ಯವನ್ನು ಹೊಂದಿರುತ್ತದೆ. ರೈಲ್ವೆ ಇಲಾಖೆಯು 06227-06228 ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್ಪ್ರೆಸ್ ರೈಲು ದಿನಾಂಕ: 01.09.2021 ರಿಂದ ಈ ನಿಲ್ದಾಣದಲ್ಲಿ ನಿಲುಗಡೆ ಮಾಡಲಿದೆ ಎಂದವರು ತಿಳಿಸಿದ್ದಾರೆ.


ಶಿವಮೊಗ್ಗ -ಯಶವಂತಪುರ-ಶಿವಮೊಗ್ಗ ಜನಶತಾಬ್ದಿ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಈಗಾಗಲೇ ಸಂಸದರ, ಒತ್ತಾಸೆಯಿಂದ ಬೆಂಗಳೂರು ನಗರ ನಿಲ್ದಾಣದವರೆಗೆ ವಿಸ್ತರಿಸಲಾಗಿದೆ. ಮೈಸೂರು-ಬೆಂಗಳೂರು-ತಾಳಗುಪ್ಪ ಎಕ್ಸ್ಪ್ರೆಸ್ ಬೆಳಗಿನ ಜಾವ ಸುಮಾರು 4ಗಂಟೆಗೆ ತಲುಪುತಿದ್ದು, ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿತ್ತು, ಶಿವಮೊಗ್ಗದಲ್ಲಿ ಈ ರೈಲು ಬೆಳಿಗ್ಗೆ 5 ಗಂಟೆಗೆ ಆಗಮಿಸುವಂತೆ ವೇಳಾಪಟ್ಟಿಯಲ್ಲಿ ಮಾರ್ಪಾಡು ಮಾಡಲಾಗಿದೆ. ಹಾಗೆಯೇ ತಾಳಗುಪ್ಪ-ಶಿವಮೊಗ್ಗ-ಬೆ೦ಗಳೂರು ಎಕ್ಸ್ಪ್ರೆಸ್ ಸೇವೆಯು ಬೆಂಗಳೂರು ನಗರ ನಿಲ್ದಾಣಕ್ಕೆ ಸುಮಾರು 4 ಗಂಟೆಗೆ ತಲುಪುತ್ತಿದ್ದದ್ದನ್ನು ಈಗ 5 ಗಂಟೆಗೆ ಆಗಮಿಸುವಂತೆ ಮಾಡಲಾಗಿದೆ. ಶಿವಮೊಗ್ಗ ಭಾಗದ ಎಲ್ಲಾ ಪ್ರಯಾಣಿಕರು ಕೋವಿಡ್-19 ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ನಿಯಮಾವಳಿಗಳನ್ನು ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ಎಲ್ಲಾ ರೈಲು ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸದರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















