ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸಿ) #Artificial Intelligence ಎಂಬುವುದು ಮನುಷ್ಯನ ದೈನ್ಯಂದಿನ ಭಾಗವಾಗಿ ವೇಗವಾಗಿ ಬೆಳೆಯುತ್ತಿದ್ದು, ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು ಎಂದು ಲೇಖಕ, ಸಾಹಿತಿ, ಹಿರಿಯ ಪತ್ರಕರ್ತ ಜೋಗಿ (ಗಿರೀಶ್ ರಾವ್ ಹತ್ವರಾ) #Journalist Jogi ಹೇಳಿದರು.
ಅವರು ಇಂದು ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಕೃತಕ ಬುದ್ಧಿಮತ್ತೆ ಎಂಬುವುದು ಇಂದು ಆಧುನಿಕ ಜೀವನ ಶೈಲಿಯ ಬಹುತೇಕ ಎಲ್ಲಾ ಹಂತಗಳಲ್ಲಿಯೂ ಸದ್ದಿಲ್ಲದೆ ಜಾಗ ಮಾಡಿಕೊಳ್ಳುತ್ತಿದೆ. ಆರೋಗ್ಯ, ಶಿಕ್ಷಣ, ವ್ಯಾಪಾರ, ಮನರಂಜನೆ ಹೀಗೆ ಎಲ್ಲಾ ವಿಷಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ತನ್ನ ಸ್ಥಾನವನ್ನು ವಿಸ್ತರಿಸಿಕೊಳ್ಳುತ್ತಿದೆ. ಇದು ಭಯ ಮತ್ತು ಆತಂಕವನ್ನು ಸೃಷ್ಟಿಸುವುದರ ಜೊತೆಗೆ ಜ್ಞಾನವನ್ನು ಕೂಡ ವಿಸ್ತರಿಸುತ್ತಿದೆ. ಆಗಾಗಿ ಇದನ್ನು ಒಳಿತಿಗಷ್ಟೇ ಬಳಸಿಕೊಳ್ಳಬೇಕಾಗಿದೆ.
ಈಗಿನ ತಂತ್ರಜ್ಞಾನ ಸಾಮಾಜಿಕ ಜಾಲತಾಣಗಳ #Social Media ಮೂಲಕ ಸಾಗುತ್ತಿದ್ದು, ಕೌಟುಂಬಿಕ ಮತ್ತು ಮನುಷ್ಯ ಸಂಬಂಧಗಳನ್ನೇ ಸಡಿಲಗೊಳಿಸುತ್ತಿವೆ. ಅದರಲ್ಲೂ ಎಐ ಮನೆಯ ಮಗನಂತೆ ಕೆಲಸ ಮಾಡುತ್ತಿದೆ. ನಮ್ಮ ಪ್ರತಿನಿತ್ಯದ ಸರಳ ಕ್ಷಣಗಳು ಕೂಡ ಇದಕ್ಕೆ ಆಹುತಿಯಾಗುತ್ತಿವೆ. ನಮ್ಮ ಜ್ಞಾನ ಮತ್ತು ವಿವೇಕಗಳು ನಾವು ಹೆಚ್ಚುತ್ತಿವೆ ಎಂದು ಭಾವಿಸುತ್ತೇವೆ. ಆದರೆ, ಇದು ನಿಜಕ್ಕೂ ಕಡಿಮೆಯಾಗುತ್ತಿದೆ. ಆಗಾಗಿ ಈ ಬಗ್ಗೆ ನಾವು ಒಂದು ದೊಡ್ಡ ಸವಾಲನ್ನೇ ಎದುರಿಸುತ್ತಿದ್ದೇವೆ. ನಿರಾಕರಣೆ ಮಾಡಲಾಗದೆ ಮತ್ತು ಅನುಕರಣೆ ಮಾಡಲಾಗದೆ ಆತಂಕ ಸ್ಥಿತಿಯಲ್ಲಿ ನಾವಿದ್ದೇವೆ.
ಈ ಕೃತಿಕ ಬುದ್ಧಿಮತ್ತೆ ಇನ್ನೂ ಕೆಲವೇ ದಿನಗಳಲ್ಲಿ ಕನ್ನಡಕ್ಕೂ ಬರುವುದರಲ್ಲಿ ಆಶ್ಚರ್ಯವಿಲ್ಲ. ನಾವು ಏನೇ ಕೆಲಸ ಮಾಡಬೇಕಾದರೂ ಈ ಯಂತ್ರವನ್ನು ಕೇಳಿಯೇ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಯಾವುದೇ ವಿಷಯವನ್ನು ತಿಳಿದುಕೊಳ್ಳಲು ಅನಿವಾರ್ಯವಾಗಿ ಇದರ ಮೊರೆಯನ್ನು ನಾವು ಹೋಗಬೇಕಾಗುತ್ತದೆ. ಪತ್ರಿಕೋದ್ಯಮಕ್ಕೂ ಇದು ಅನಿವಾರ್ಯವಾಗಿ ಬಿಡುತ್ತಿದೆ ಎಂದರು.
ಈಗಾಗಲೇ ಬರೆಯುವವರು ತಮ್ಮ ಮೊನಚನ್ನು ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಯುವ ಜನಾಂಗಕ್ಕೆ ಪ್ರಭಾವಿಗಳು ಇಲ್ಲವಾಗುತ್ತಿದೆ. ನಾವು ತುಂಬ ಗೊಂದಲದಲ್ಲಿದ್ದೇವೆ. ಬರೆಯುವುದನ್ನು ಮರೆತು ಮಾತನಾಡ ತೊಡಗಿದ್ದೇವೆ. ಮೌಖಿಕವೇ ವಿಜೃಂಭಿಸುತ್ತಿದೆ. ಇದು ಪತ್ರಿಕೋದ್ಯಮಕ್ಕೂ ತನ್ನ ಕಬಂದ ಬಾಹುವನ್ನು ಚಾಚಿಕೊಂಡಿದೆ ಎಂದರು.
Also read: ಶಿವಮೊಗ್ಗ | 2022ರ ಕೊಲೆ ಪ್ರಕರಣ | ಆರೋಪಿ ಜಿಕ್ರುಲ್ಲಾಗೆ ಜೀವಾವಧಿ ಶಿಕ್ಷೆ | ಏನಿದು ಕೇಸ್?
ಪತ್ರಿಕೆಗಳಿಗಿಂತ ಮುಂಚೆಯೇ ಸಾಮಾಜಿಕ ಜಾಲತಾಣಗಳಲ್ಲಿ ವಿಷಯಗಳು ಶರವೇಗದಲ್ಲಿ ಪ್ರಕಟವಾಗುತ್ತಿವೆ. ಯೂ ಟ್ಯೂಬ್ನಂತಹ ಚಾನಲ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳು ಪತ್ರಿಕೋದ್ಯಮಕ್ಕೆ ಒಂದು ಸವಾಲಾಗಿಯೇ ಪರಿಗಣಿಸಿದೆ. ಇದು ಶಕ್ತಿಯೂ ಹೌದು, ಭಯವೂ ಹೌದು. ಪತ್ರಕರ್ತರ ವಿವೇಚನೆಯನ್ನೇ ಪ್ರಶ್ನಿಸುವ ಅಥವಾ ಮರೆತುಬಿಡುವ ಪ್ರಶ್ನೆಯಾಗಿ ಇಂದು ಬೆಳೆಯುತ್ತಿದೆ. ಮನುಷ್ಯರ ಕ್ರಿಯಾಶೀಲತೆಯನ್ನು ಅಡವಿಟ್ಟಂತಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪತ್ರಿಕೆಗಳನ್ನು ಓದುವುದೇ ಕಡಿಮೆಯಾಗುತ್ತಿದೆ. ನಾವು ಬಳಕೆಯ ಆನಂದವನ್ನು ಕಳೆದುಕೊಳ್ಳ ತೊಡಗಿದ್ದೇವೆ. ಓದುವ ಹಸಿವು ಕೂಡ ಇಲ್ಲವಾಗಿದೆ. ಸಾಹಿತ್ಯವು ಕೂಡ ದೂರತಳ್ಪಟ್ಟಿದೆ. ಕ್ರೈಮ್, ರಾಜಕಾರಣ ವಿಜೃಂಭಿಸುತ್ತಿದೆ. ಸಿನಿಮಾ ಕ್ಷೇತ್ರವು ಕೂಡ ಹಾಗೆಯೇ ಆಗಿದೆ. ಒಂದು ಕೌಟುಂಬಿಕ ಸಿನಿಮಾಗಳು ಇಂದು ಬರುತ್ತಿಲ್ಲ. ಓಟಿಪಿಯ ರೋಗ ಸಿನಿಮಾ ಕ್ಷೇತ್ರವನ್ನು ಬಾಧಿಸುತ್ತಿದೆ. ಸಿನಿಮಾ ರಂಗದಲ್ಲೂ ಕೂಡ ಯಾವುದೇ ಕಲಾವಿದ, ತಂತ್ರಜ್ಞಾನ, ವೃತ್ತಿಪರನಾಗದೇ ಹವ್ಯಾಸಿಯಾಗಿದ್ದಾನೆ. ಅದರಲ್ಲೂ ಕನ್ನಡ ಸಿನಿಮಾಗಳು ಓಟಿಪಿಯನ್ನು ಕೂಡ ಮುಟ್ಟಲು ಸಾಧ್ಯವಾಗುತ್ತಿಲ್ಲ ಎಂದರು.
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಇರುವ ನಾವುಗಳು ನಮ್ಮ ಕ್ರಿಯಾಶೀಲತೆಯನ್ನು ಜೀವಂತವಾಗಿ ಇಟ್ಟುಕೊಳ್ಳಬೇಕಾಗಿದೆ. ಆಗಾಗಿ ಸಾಮಾಜಿಕ ಜಾಲತಾಣಗಳು ಈ ಕೃತಕ ಬುದ್ಧಿಮತ್ತೆ, ಆಧುನಿಕತೆ ಇವುಗಳ ಜೊತೆಯಾಗಿಯೇ ಇರಬೇಕಾದ ಅನಿವಾರ್ಯತೆ ಇರುವುದರಿಂದ ನಮ್ಮ ಭಾವುಕತೆಗಳನ್ನು ಇಟ್ಟುಕೊಂಡೇ ಮುಂದುವರೆಯಬೇಕು ಎಂದರು.
ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ ಮಾತನಾಡಿ, ಜೋಗಿಯವರು ಬರೆಯುವವರೆಗೆ ಸ್ಫೂರ್ತಿಯಾಗಿದ್ದಾರೆ.ಅವರನ್ನು ನಾವು ಅಕ್ಷರ ಸರಸ್ವತಿ ಎಂದು ಕರೆಯುತ್ತಿದ್ದೇವೆ. ಇತ್ತೀಚೆಗಷ್ಟೇ ಅವರ 100ನೇ ಕೃತಿ ಇಳಂಗೋವನ್ ಕೃತಿ ಲೋಕಾರ್ಪಣೆಗೊಂಡಿದೆ. ಮಲೆನಾಡಿನ ಸಮಸ್ಯೆಗಳು ಸೇರಿದಂತೆ ಹಲವು ವಿಷಯಗಳತ್ತ ಪ್ರಭಾವ ಬೀರಿರುವ ಅವರದು ಬಹು ದೊಡ್ಡ ವ್ಯಕ್ತಿತ್ವವಾಗಿದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ನಾಗರಾಜ್ ನೇರಿಗೆ, ಗಿರೀಶ್ ಉಮ್ರಾಯಿ, ಶಿಜು ಪಾಶಾ, ಹುಲಿಮನೆ ತಿಮ್ಮಪ್ಪ ಸೇರಿದಂತೆ ಹಲವು ಪತ್ರಕರ್ತರು ಸಂವಾದದಲ್ಲಿ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post