ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜೈವಿಕ ಇಂಧನಕ್ಕೆ ಪೂರಕ ಗಿಡಗಳನ್ನು ಪೋಷಿಸುವ ಮೂಲಕ ಗ್ರಾಮೀಣ ಭಾಗದ ಮನೆ ಮನೆಗಳಲ್ಲಿ ಜೈವಿಕ ಇಂಧನಗಳ ಉತ್ಪಾದನೆ ಸಾಧ್ಯ ಎಂದು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ.ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಜೈವಿಕ ಇಂಧನ ಸಂಶೋಧನೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ ಹಾಗೂ ಜಿಲ್ಲಾ ಜೈವಿಕ ಇಂಧನ ಉಸ್ತುವಾರಿ ಸಮಿತಿ ಸಂಯುಕ್ತಾಶ್ರಯದಲ್ಲಿ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಜೈವಿಕ ಇಂಧನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೈವಿಕ ಇಂಧನದ ಉತ್ಪಾದನೆಯ ಅವಶ್ಯಕತೆ ಕುರಿತಾಗಿ ನಗರ ಹಾಗೂ ಗ್ರಾಮೀಣ ಮಟ್ಟದಲ್ಲಿ ಒಲವು ಮೂಡಬೇಕಿದೆ. ಜೈವಿಕ ಇಂಧನ ಉತ್ಪಾದಿಸಬಲ್ಲ ಅದೆಷ್ಟೋ ಅಮೂಲ್ಯವಾದ ಮರಗಳ ಬೀಜಗಳು ವ್ಯರ್ಥವಾಗುತ್ತಿದೆ. ಗ್ರಾಮೀಣ ಪ್ರದೇಶದ ಅಧಿಕಾರಿಗಳು ಅಂತಹ ಬೀಜಗಳನ್ನು ಸಂಗ್ರಹಿಸಿ ಇಂಧನವಾಗಿ ಪರಿವರ್ತಿಸಬಲ್ಲ ಕಾರ್ಯವಿಧಾನವನ್ನು ಹಳ್ಳಿಗರಿಗೆ ಕಲಿಸಿ ಕೊಡಬೇಕಿದೆ. ಇಂತಹ ಕಾರ್ಯ ವಿಧಾನಗಳು ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಸ್ವಯಂ ಉದ್ಯೋಗಾವಕಾಶ ಕಲ್ಪಿಸಲಿದೆ. ಕೃಷಿ ಚಟುವಟಿಕೆಗಳ ನಡುವೆ ಜೈವಿಕ ಇಂಧನದ ಪೂರಕ ಗಿಡಗಳನ್ನು ನೆಟ್ಟು ಪೋಷಿಸುವತ್ತ ಗಮನ ವಹಿಸುವಂತೆ ಪ್ರೇರಣೆ ನೀಡುವ ಯೋಜನೆಗಳನ್ನು ಅನುಷ್ಟಾನಗೊಳಿಸಬೇಕಿದೆ ಎಂದು ಹೇಳಿದರು.
Also read: ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ | ಜೈನ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಅಮೋಘ ಸಾಧನೆ
ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮಾತನಾಡಿ, ಆಧುನಿಕ ಬದುಕಿನಲ್ಲಿ ಕೆಲವೊಂದು ಪರಿಸರ ಸ್ನೇಹಿ ಜೀವನ ಪದ್ದತಿ ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ. ಈ ಮೂಲಕ ಪರಿಸರದ ಅಮೂಲ್ಯ ಅಂಶಗಳು ಕಣ್ಮರೆಯಾಗಬಹುದು ಎಂಬ ಆತಂಕವನ್ನು ಒಂದಿಷ್ಟು ಕಾಲ ದೂರ ಮಾಡಬಹುದು.
ಈ ವರ್ಷ ಕಾಲೇಜಿನಲ್ಲಿ ನಾಲ್ಕು ಪರಿಸರ ಸ್ನೇಹಿ ಧ್ಯೇಯಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಕಾಗದ ರಹಿತ ಕಡತಗಳ ನಿರ್ವಹಣೆ, ಆನ್ಲೈನ್ ಬ್ಯಾಂಕಿಂಗ್, ಕಾಲೇಜಿಗೆ ಬೇಕಾಗುವಷ್ಟು ಸ್ವಯಂ ವಿದ್ಯುತ್ ಉತ್ಪಾದನೆ, ಮಳೆ ನೀರಿನ ಸಂಗ್ರಹಣೆ ಮೂಲಕ ವರ್ಷ ಪೂರ್ತಿ ಬಳಸುವಂತಹ ಅನೇಕ ಉದ್ದೇಶಗಳು ಕೆಲವೇ ತಿಂಗಳಲ್ಲಿ ಕಾಲೇಜಿನಲ್ಲಿ ಸಾಕಾರಗೊಳ್ಳಲಿದೆ ಎಂದು ಹೇಳಿದರು.
ಜೈವಿಕ ಇಂಧನ ಸಂಶೋಧನೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರದ ಸಂಚಾಲಕ ಡಾ.ಚೇತನ್.ಎಸ್.ಜಿ ಮಾತನಾಡಿ, ಖ್ಯಾತ ವಿಜ್ಞಾನಿ ರುಡಾಲ್ಫ್ ಡಿಸೇಲ್ ಅವರು ಡೀಸೆಲ್ ಎಂಜಿನ್ ಒಂದನ್ನು ಕಂಡುಹಿಡಿದು ಶೇಂಗಾ ಎಣ್ಣೆಯನ್ನು ಬಳಸಿ ಚಾಲು ಮಾಡಿದ ದಿನವನ್ನು ಜೈವಿಕ ಇಂಧನ ದಿನವಾಗಿ ಆಚರಿಸಲಾಗುತ್ತಿದೆ.
2040 ರ ವೇಳೆಗೆ ಫಾಸಿಲ್ ಫ್ಯೂಯಲ್ ನಶಿಸಿ ಹೋಗುವ ಸಾಧ್ಯತೆಗಳಿವೆ. ಇಂತಹ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು, ಪರ್ಯಾಯ ಇಂಧನ ವ್ಯವಸ್ಥೆಯನ್ನು ರೂಪಿಸುವಲ್ಲಿ ನವೀಕರಿಸಬಹುದಾದ ಶಕ್ತಿ ಮೂಲಗಳು ಅತಿ ಪ್ರಮುಖ ಸ್ಥಾನ ಪಡೆದಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಜೈವಿಕ ಇಂಧನ ಸಂಶೋಧನೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರದ ಸಹ ಸಂಚಾಲಕ ಡಾ.ರವಿಕುಮಾರ್.ಬಿ.ಎನ್, ಎಸ್.ಟಿ.ಪಿ ವಿಭಾಗದ ಯೋಜನಾ ಸಹಾಯಕಿ ರಶ್ಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿ ಪಿಡಿಓಗಳು, ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೈವಿಕ ಇಂಧನವನ್ನು ತಯಾರಿಸುವ ಕಾರ್ಯವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post