ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿಮುಲ್ ಅನ್ನು ರಾಜ್ಯದಲ್ಲಿಯೇ ನಂಬರ್ ಒನ್ ಒಕ್ಕೂಟ ಮಾಡಬೇಕು ಎಂಬುದು ನನ್ನ ಆಸೆ. ಆ ದಿಕ್ಕಿನಲ್ಲಿಯೇ ಒಕ್ಕೂಟ ಈಗ ಸಾಕಷ್ಟು ಬಲಿಷ್ಟವಾಗಿದೆ ಎಂದು ಶಿಮುಲ್ ಅಧ್ಯಕ್ಷ ಶ್ರೀಪಾದರಾವ್ ನಿಸರಾಣಿ ಹೇಳಿದರು.
ಅವರು ಇಂದು ಪ್ರೆಸ್ ಟ್ರಸ್ಟ್ ಹಾಗೂ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಂiದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾಡನಾಡಿ, ಶಿವಮೊಗ್ಗ,ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಒಕ್ಕೂಟವು ಪ್ರಸ್ತುತ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದೆ. ಉತ್ತಮ ಆಡಳಿತವಿದ್ದರೆ ರೈತರಿಗೆ ಒಳ್ಳೆಯ ಬೆಲೆ ಕೊಡಬಹುದು ಎಂಬುದಕ್ಕೆ ನಮ್ಮ ಒಕ್ಕೂಟವೇ ಸಾಕ್ಷಿ ಎಂದರು.
ನಾನು ಅಧ್ಯಕ್ಷನಾಗಿದ್ದಾಗ ಹಾಲು ಉತ್ಪಾದಕರಿಗೆ ಲೀಟರಿಗೆ 24.55 ರೂ. ಇತ್ತು. ಪ್ರಸ್ತುತ ಈಗ 31.85ರೂ. ಇದೆ. ಒಂದು ವರ್ಷದಲ್ಲಿ ಲೀಟರಿಗೆ 7ರೂ. ಅನ್ನು ನಾವು ಹೆಚ್ಚಿಸಿದ್ದೇವೆ. ಇದರಿಂದ ವರ್ಷಕ್ಕೆ ಸುಮಾರು 11 ಕೋಟಿಯಷ್ಟು ನಮಗೆ ಹೆಚ್ಚುವರಿ ಖರ್ಚು ಬರುತ್ತಿದೆ. ಸದ್ಯಕ್ಕೆ ಹಾಲಿನ ಕೊರತೆ ಇದೆ. ಆದರೆ ಗುಣಮಟ್ಟದಲ್ಲಿ ನಾವು ಎಂದೂ ರಾಜಿ ಆಗಿಲ್ಲ ಎಂದರು.
ಒಕ್ಕೂಟ ಇದುವರೆಗೂ ಯಾವುದೇ ಬ್ಯಾಂಕಿನಿಂದ ಸಾಲ ತೆಗೆದುಕೊಂಡಿಲ್ಲ. 100 ಕೋಟಿ ರೂ.ನಿಧಿ ನಮ್ಮ ಬಳಿಯೆ ಇದೆ. ಒಕ್ಕೂಟ ಉತ್ಪದಾಕರಿಗೆ ಏರಿಸಿದ ದರವನ್ನು ಎಂದೂ ಇಳಿಸಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಾವು ಉತ್ಪಾದಕರಿಗೆ ಅಧಿಕ ಬೆಲೆ ನೀಡುತ್ತಿದ್ದೇವೆ. ರೈತರಿಗೆ ಅನುಕೂಲವಾಗುವಂತಹ ವಾತಾವರಣ ಕಲ್ಪಿಸಿದ್ದೇವೆ. ದೇಶೀಯ ಹಸು ಸಾಕಲು ನಬಾರ್ಡ್ ಜೊತೆಗೂಡಿ ಸಾಲ ಸೌಲಭ್ಯ ಹಾಗೂ ರಿಯಾಯಿತಿ ನೀಡುವ ಉದ್ದೇಶವೂ ನಮಗಿದೆ ಎಂದರು.
ಬಿಜೆಪಿಯ ಪ್ರಬಲ ಆಕಾಂಕ್ಷಿ
ಸೊರಬ ಅಥವಾ ಸಾಗರ ಕ್ಷೇತ್ರದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಆಕಾಂಕ್ಷೆಇದೆ. ಡಿಸಿಸಿ ಬ್ಯಾಂಕ್ ನಿರ್ದೆಶಕನಾಗಿ ಹಲವು ವರ್ಷ ಕೆಲಸ ಮಾಡಿದ್ದೇನೆ . ಈಗ ಶಿಮುಲ್ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷ ಟಿಕೆಟ್ ನೀಡಿದರೆ ಖಂಡಿತಾ ಗೆದ್ದುಬರುವೆ. ನಾನೂ ಆಕಾಂಕ್ಷಿ ಎಂದ ಅವರು ಇಷ್ಟರಲ್ಲಿಯೇ ಜಿಲ್ಲಾಧ್ಯಕ್ಷರಿಗೆ ಮನವಿ ಪತ್ರ ನೀಡುವೆ.
ಶ್ರೀಪಾದರಾವ್ ನಿಸರಾಣಿ , ಶಿಮುಲ್ ಅಧ್ಯಕ್ಷ
ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಒಕ್ಕೂಟ ಹೆಜ್ಜೆ ಹಾಕಿದೆ. 100 ಅನಲೈಸರ್ ಹೊಸ ಯಂತ್ರಗಳನ್ನು ಸಂಘಗಳಿಗೆ ನೀಡಿದ್ದೇವೆ. ಹೊಸ ಉಪಕರಣ ಕೊಳ್ಳಲು ಸಬ್ಸಿಡಿ ನೀಡುತ್ತೇವೆ. ಮುಖ್ಯವಾಗಿ ದಾವಣಗೆರೆಯಲ್ಲಿ ಸುಮಾರು 200 ಕೋಟಿ ರೂ.ವೆಚ್ಚದಲ್ಲಿ ಹಾಲಿನ ಘಟಕ ಸ್ಥಾಪಿಸಲು ಉದ್ದೇಶ ಹೊಂದಲಾಗಿದೆ. ಚಿತ್ರದುರ್ಗದಲ್ಲಿ ಸಹ ಒಂದು ಲಕ್ಷ ಲೀ. ಸಾಮರ್ಥ್ಯದ ಘಟಕವನ್ನು ಸ್ಥಾಪಿಸುತ್ತೇವೆ. ಆದರೆ ಹೊಸ ಒಕ್ಕೂಟ ಮಾಡುವುದಿಲ್ಲ. ಅದರ ಅವಶ್ಯಕತೆ ಇಲ್ಲ ಎಂದರು.
Also read: ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು: ಶಾಸಕ ಬಂಡೆಪ್ಪ ಖಾಶೆಂಪುರ್ ಕರೆ
ಶಿಮುಲ್ನಿಂದ ಜ.21ರಿಂದ ಉತ್ಪಾದಕರಿಂದ ಖರೀದಿಸುವ ಹಾಲಿನ ದರವನ್ನು ಪರಿಷ್ಕರಿಸಲಾಗಿದೆ. ಪ್ರತಿ ಕೆಜಿಗೆ 1.50ರೂ. ಹೆಚ್ಚಿಸಲಾಗಿದೆ. ಸಂಘದಿಂದ ಉತ್ಪಾದಕರಿಗೆ ಈ ಹಿಂದೆ 30.29ರೂ. ಲೀಟರಿಗೆ ನೀಡಲಾಗುತ್ತಿತ್ತು. ಅದನ್ನು ಈಗ 31.85ಕ್ಕೆ ಏರಿಸಲಾಗಿದೆ ಎಂದ ಅವರು, ಇದೇ ಸಂದರ್ಭದಲ್ಲಿ ನಂದಿನಿ ಸಿಹಿ ಲಸ್ಸಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದರು.
ಅಮುಲ್ ಸಂಸ್ಥೆಯ ಜೊತೆ ನಂದಿನಿ ಸಂಸ್ಥೆ ವಿಲೀನವಾಗಬೇಕು ಎಂಬ ಮಾತು ಕೇಳಿಬಂದಿದ್ದು ಸಹಜ. ಇದರಿಂದ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವಿತ್ತು. ಆದರೆ ನಂದಿನಿ ಬ್ರಾಂಡ್ ಅನ್ನು ನಾವೆಂದೂ ಬಿಟ್ಟುಕೊಡುವುದಿಲ್ಲ. ಹಾಲು ಒಕ್ಕೂಟ ಭದ್ರವಾಗಿಯೇ ಇದೆ ಸದ್ಯಕ್ಕೆ ವಿಲೀನ ಮಾಡುವ ಯೋಚನೆ ಇಲ್ಲ ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಟ್ರಸ್ಟ್ ಪದಾಧಿಕಾರಿಗಳಾದ ಎನ್. ಮಂಜುನಾಥ್, ಗೋಪಾಲ್ ಯಡಗೆರೆ, ನಾಗರಾಜ್ ನೇರಿಗೆ, ಸಂತೋಷ್ ಕಾಚಿನಕಟ್ಟೆ ಇದ್ದರು. ರಾಮಚಂದ್ರ ಗುಣಾರಿ ಸ್ವಾಗತಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post