ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳ ಬದುಕಿಗೆ ಛಲ ಎಷ್ಟು ಮುಖ್ಯವೋ, ಸಾಧನೆಗೂ ಛಲವೇ ಅಡಿಪಾಯ ಅಷ್ಟೇ ಮುಖ್ಯ ಎಂದು ರಾಷ್ಟಿçÃಯ ಶಿಕ್ಷಣ ಸಮಿತಿಯ ಕುಲಸಚಿವ ಪ್ರೊ.ಹೂವಯ್ಯ ಗೌಡ ಕರೆ ನೀಡಿದರು.
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ 2021-22ನೆಯ ಸಾಲಿನ ಸಾಂಸ್ಕೃತಿಕ, ಕ್ರೀಡಾ ಕಾರ್ಯಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜ್ಞಾನ ಅಥವಾ ತಿಳುವಳಿಕೆ ಎಂಬುದು ಈ ಕಾಲಕ್ಕೆ ಹೆಚ್ಚು ಪ್ರಚಲಿತವಾದ ಪದ. ನಿತ್ಯ ನೂತನವಾದುದು. ಜಗತ್ತು ವೇಗವಾಗಿ ಬದಲಾಗುತ್ತಿದೆ. ಈ ಬದಲಾವಣೆಗೆ ನಾವು ಬೌದ್ಧಿಕವಾಗಿ ಸಿದ್ಧರಾಗಬೇಕು. ಪ್ರತಿ ದಿನವೂ ಹೊಸ ಹೊಸ ಜ್ಞಾನ ಸಾಧ್ಯತೆಗಳಿಗೆ ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕು. ಪುಸ್ತಕದ ಜ್ಞಾನ ಎಷ್ಟು ಮುಖ್ಯವೋ ಹೊರಗಿನಿಂದ ಪಡೆಯುವ ಕೌಶಲ ಜ್ಞಾನವೂ ಅಷ್ಟೇ ಮುಖ್ಯ. ಉತ್ತಮ ಚಾರಿತ್ರ ಉತ್ತಮ ವ್ಯಕ್ತಿತ್ವ ನಿರ್ಮಿಸುತ್ತದೆ. ಬದುಕಿಗೆ ಛಲ ಮುಖ್ಯ; ಸಾಧನೆಗೆ ಛಲವೇ ಅಡಿಪಾಯ. ಸೋಲಿಗೆ ಧೃತಿಗೆಡದೆ ಗೆಲುವಿಗೆ ಹಿಗ್ಗದೆ ನಿರಂತರ ಕ್ರಿಯಾಶೀಲವಾಗಿರುವುದೇ ನಮ್ಮ ಜೀವನದ ಗುರಿಯಾಗಿರಬೇಕು ಎಂದರು.
ಪದ್ಮಶ್ರೀ ಪುರಸ್ಕೃತ ಅಂತರ ರಾಷ್ಟ್ರೀಯ ಕ್ರೀಡಾಪಟು .ಕೆ.ವೈ. ವೆಂಕಟೇಶ್ ಯತಿರಾಜ್ ಮಾತನಾಡಿ, ಭಾರತೀಯರು ವಿಶ್ವಮಟ್ಟದಲ್ಲಿ ಉನ್ನತ ಸಾಧನೆ ಮಾಡುತ್ತಿದ್ದಾರೆ. ಸಾಧನೆಗೆ ಪರಿಶ್ರಮವೇ ಮುಖ್ಯ. ಅಂಗವೈಕಲ ಸಾಧನೆಗೆ ಅಡ್ಡಿ ಎಂದು ಭಾವಿಸಬಾರದು. ಅನೇಕ ವಿಕಲ ಚೇತನರು ಅದ್ಭುತ ಸಾಧನೆ ಮಾಡಿದ್ದಾರೆ. ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯಲ್ಲಿ ಪದಕ ಪಡೆದಿದ್ದಾರೆ. ಎಲ್ಲದಕ್ಕೂ ಆತ್ಮ ವಿಶ್ವಾಸ ಬೇಕು. ಅದಿಲ್ಲದ ಬದುಕು ಬರಡು ಎಂದರು.
Also read: ಸಮಾಜದಲ್ಲಿ ಇಂಜಿನಿಯರ್ ಪಾತ್ರ ಪ್ರಮುಖವಾದದ್ದು : ಡಾ.ಆರ್. ಸೆಲ್ವಮಣಿ
ಮಲೆನಾಡಿನ ಉದಯೋನ್ಮಖ ಪ್ರತಿಭಾವಂತ ಹಿರಿತೆರೆ ಹಾಗೂ ಕಿರುತೆರೆ ನಟಿಯಾಗಿರುವ ಕು.ಸಮೀಕ್ಷಾ ರಾಮ್ ಅವರು ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಿನೆಮಾ ಮಾಧ್ಯಮದಲ್ಲಿ ಪ್ರವೇಶ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಸಾಕಷ್ಟು ಅವಮಾನ, ಕಷ್ಟಗಳನ್ನು ಸಹಿಸಿದ್ದರೆ ಮಾತ್ರ ಉತ್ತಮ ಅವಕಾಶಗಳು ದೊರೆಯುತ್ತದೆ, ನಮ್ಮ ಮಲೆನಾಡಿನ ಸಂಸ್ಕೃತಿ, ಜನರ ಬಗ್ಗೆ ವಿಶೇಷ ಅಭಿಮಾನವಿದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ.ಕೆ.ವೀಣಾ ಮಾತನಾಡಿ, ಯಾವ ಸಾಧನೆಯು ಹೂವಿನ ಹಾಸಿಗೆಯಲ್ಲ. ಒಂದು ಸ್ಥಾನಕ್ಕೆ ಬರಬೇಕಾದ ನಿರಂತರ ಪರಿಶ್ರಮಬೇಕು. ಬರೀ ಕನಸು ಕಾಣುವುದಲ್ಲ. ಹಗಲು ಕನಸುಗಳಿಂದ ಯಾವುದೇ ಕಾರ್ಯ ಸಾಧಿತವಾಗುವುದಿಲ್ಲ. ಅದನ್ನು ನನಸಾಗಿಸುವಲ್ಲಿ ಶ್ರಮ ಪಡಬೇಕು ಎಂದರು.
ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ. ಎನ್. ರಾಜೇಶ್ವರಿ, ಕ್ರೀಡಾ ಸಮಿತಿ ಸಂಚಾಲಕರಾದ ಡಾ. ಕುಂದನ್ ಬಸವರಾಜ್, ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಡಾ.ಎ. ಶಿವಮೂರ್ತಿ, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಡಾ.ಕೆ.ವಿ. ಗಿರಿಧರ, ವಿದ್ಯಾರ್ಥಿ ಪ್ರತಿನಿಧಿಗಳಾದ ಎಚ್. ಪ್ರಜ್ವಲ್, ಕೆ. ಲಂಕೇಶ್, ಜಿ.ಬಿ. ರುದ್ರೇಶ್, ಕೆ. ರವಿ ಕಿರಣ್, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿವಿಧ ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















