ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದಿನ ಯುವಜನರಲ್ಲಿ ಸಂಸ್ಕೃತಿ ಪ್ರೀತಿ ನಶಿಸುತ್ತಿರುವುದು ಹೆಚ್ಚು ಆತಂಕಕ್ಕೆ ಕಾರಣವಾಗಿದೆ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಬಿ. ಧನಂಜಯ ಆತಂಕ ವ್ಯಕ್ತಪಡಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಎನ್’ಎಸ್’ಎಸ್ ಕೋಶ, ಎನ್’ಎಸ್’ಎಸ್ ಪ್ರಾದೇಶಿಕ ನಿರ್ದೇಶನಾಲಯ ಭಾರತ ಸರ್ಕಾರ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರವು ಏಳು ದಿನಗಳವರೆಗೆ ಯಶಸ್ವಿಯಾಗಿ ನಡೆದು ಕಾರ್ಯಕ್ರಮವು ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶ, ಭವಿಷ್ಯವನ್ನು ಮುನ್ನೆಡೆಸುವ ಅವರಲ್ಲಿ ಆಲಸ್ಯ, ಕ್ರಿಯಾಶೂನ್ಯತೆ ಆವರಿಸಿದರೆ ಮುಂದಿನ ತಲೆಮಾರಿನಿಂದ ಏನನ್ನು ನಿರೀಕ್ಷಿಸುವುದು ಸಾಧ್ಯ? ಅದಕ್ಕಾಗಿಯೇ ಕಳೆದ 50 ವರ್ಷಗಳ ಹಿಂದೆಯೇ ಯುವ ಚೇತನಗಳನ್ನು ಹುರಿದುಂಬಿಸಿ ಕ್ರಿಯಾಶೀಲರನ್ನಾಗಿಸಲು ರಾಷ್ಟ್ರೀಯ ಸೇವಾ ಯೋಜನೆಯನ್ನು ರೂಪಿಸಿ ದೇಶಕ್ಕೆ ಅರ್ಪಿಸಲಾಯಿತು. ಇಂದಿಗೂ ಎನ್’ಎಸ್’ಎಸ್ ಯುವ ಸಮುದಾಯಕ್ಕೆ ಸ್ಫೂರ್ತಿ ತುಂಬುವ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಸಿಂಡಿಕೇಟ್ ಸದಸ್ಯರೂ, ಡಿವಿಎಸ್ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಪದ್ಮೇಗೌಡರು ಮಾತನಾಡಿ, ಶಿಸ್ತು ಮತ್ತು ಸಂಯಮ ಇಂದಿನ ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾಗಿದೆ. ಶೈಕ್ಷಣಿಕ ಪಠ್ಯಗಳಿಂದ ಕಲಿಯುವುದಕ್ಕಿಂತ ಸಮಾಜದಿಂದ ಕಲಿಯುವುದು ಬಹಳಷ್ಟು ಇದೆ ಎಂದರು.
ಸಹ್ಯಾದ್ರಿ ನಾರಾಯಣ ಹೃದಯಾಲಯದ ಮ್ಯಾನೇಜರ್ ಎಸ್.ವಿ. ರಾಜಾ ಸಿಂಗ್ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ನಡೆ ನುಡಿಗಳಲ್ಲಿ ಸಭ್ಯತೆ ರೂಡಿಸಿಕೊಂಡು ಉತ್ತಮ ಪ್ರಜೆಗಳಾಗಿ ರುಪುಗೊಳ್ಳಬೇಕು. ಆಗಲೇ ಸಮಾಜದ ಪ್ರಗತಿ ಸಾಧ್ಯ ಎಂದರು.
Also read: ಶಿವಮೊಗ್ಗಕ್ಕೆ ನೂತನ ಎಡಿಜಿಪಿ ಹಿತೇಂದ್ರ ಭೇಟಿ: ಕಾನೂನು ಸುವ್ಯವಸ್ಥೆಯ ಅವಲೋಕನ
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜೇಶ್ವರಿ ಅವರು ಮಾತನಾಡಿ, ಯುವ ಪ್ರತಿಭೆಗಳಿಗೆ ಇಂತಹ ಶಿಬಿರಗಳು ಸ್ಫೂರ್ತಿದಾಯಕ. ದೇಶದ ಅನೇಕ ಭಾಗಗಳಿಂದ ಬಂದ ಅನೇಕ ಪ್ರತಿಭಾವಂತರೂ ಒಂದೇ ವೇದಿಕೆಯಲ್ಲಿ ಸೇರುವಂತಾದುದು ಸಂತೋಷದಾಯಕ ವಿಚಾರ ಎಂದು ಅಭಿಪ್ರಾಯಪಟ್ಟರು.
ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ.ಕೆ. ವೀಣಾ ಮಾತನಾಡಿ, ಮನುಷ್ಯತ್ವ ಮಾನವೀಯತೆ ನಮ್ಮ ಉಸಿರಾಗಲಿ. ಪರಸ್ಪರರನ್ನು ಗೌರವದಿಂದ ಕಾಣುವ ಸಂಸ್ಕೃತಿ ನಮ್ಮದಾಗಲಿ ಎಂದು ಶುಭ ಹಾರೈಸಿದರು.
ವಿವಿಧ ರಾಜ್ಯಗಳಿಂದ ಸ್ವಯಂಸೇವಕರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಶಿಬಿರದ ಭಾಗವಾಗಿ ಮಲೆನಾಡಿನ ಪ್ರಕೃತಿ ಸೌಂದರ್ಯ ಸವಿಯಲು ಪ್ರವಾಸ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು.
ವಿಶ್ವ ವಿದ್ಯಾಲಯದ ಸಂಯೋಜನಾಧಿಕಾರಿಗಳಾದ ಡಾ ನಾಗರಾಜ ಪರಿಸರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕು. ರಕ್ಷಿತಾ ಕಾರ್ಯಕ್ರಮ ನಿರೂಪಿಸಿ, ಅಂಜಲಿ ವಂದಿಸಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















