ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈತರು ಹೊಲ, ಗದ್ದೆ, ತೋಟಗಳಲ್ಲಿ ರಾಸಾಯನಿಕಗಳನ್ನು ಸಿಂಪಡಿಸುವ ಮುನ್ನ ಕಡ್ಡಾಯವಾಗಿ ಪಿಪಿಇ ಕಿಟ್ ಧರಿಸುವ ಜೊತೆಯಲ್ಲಿ ಗಾಳಿಯ ದಿಕ್ಕನ್ನು ಗಮನಿಸಿ ಸಿಂಪಡಿಸಬೇಕು ಎಂದು ಕೃಷಿ ವಿದ್ಯಾರ್ಥಿಗಳು ರೈತರಿಗೆ ಸಲಹೆ ನೀಡಿದರು.
ಕಲ್ಮನೆ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ್ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, #Keladi Shivappanayaka VV ಇರುವಕ್ಕಿ, ಶಿವಮೊಗ್ಗದ ಬಿಎಸ್ಸಿ (ಹಾನರ್ಸ್) ಕೃಷಿ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ರಾಸಾಯನಿಕ ಸಿಂಪಡಣೆಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಎಂಬ ವಿಷಯದ ಕುರಿತು ರೈತರಿಗೆ ಸಮಗ್ರ ಗುಂಪು ಚರ್ಚೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಾತನಾಡಿದರು.
ಇಂದಿನ ದಿನಗಳಲ್ಲಿ ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರ ಆರೋಗ್ಯ ರಕ್ಷಣೆ ಹಾಗೂ ಪರಿಸರ ಸಂರಕ್ಷಣೆ ಅತ್ಯಂತ ಮುಖ್ಯ ಎಂದು ತಿಳಿಸಿದರು.
ವಿದ್ಯಾರ್ಥಿಗಳು ರೈತರಿಗೆ ವಿವರಿಸಿ, ರಾಸಾಯನಿಕ ಸಿಂಪಡಣೆಯಲ್ಲಿ ತಪ್ಪಾದ ವಿಧಾನಗಳು ಮಾನವ ಆರೋಗ್ಯ, ಮಣ್ಣಿನ ಆರೋಗ್ಯ ಹಾಗೂ ಬೆಳೆ ಉತ್ಪಾದನೆಗೆ ಹಾನಿಕಾರಕವಾಗಬಹುದು ಎಂದು ವೈಜ್ಞಾನಿಕ ವಿವರಗಳೊಂದಿಗೆ ತಿಳಿಸಿದರು.
ರಾಸಾಯನಿಕಗಳನ್ನು ಸಿಂಪಡಿಸುವ ಮುನ್ನ ಕಡ್ಡಾಯವಾಗಿ ಪಿಪಿಇ ಕಿಟ್ (ಗ್ಲೌಸ್, ಮಾಸ್ಕ್, ಏಪ್ರಾನ್,ಬೂಟು ) ಧರಿಸುವುದು, ಗಾಳಿ ದಿಕ್ಕು ಗಮನಿಸಿ ಸಿಂಪಡಣೆ, ಶಿಫಾರಸು ಮಾಡಿದ ಪ್ರಮಾಣದ ರಾಸಾಯನಿಕಗಳನ್ನು ಮಾತ್ರ ಬಳಸುವುದು, ವಿಷತ್ವ ಮಟ್ಟ, ಸಿಂಪಡಣೆ ನಂತರ ಕೈ, ಮುಖ ಮತ್ತು ಕಾಲುಗಳನ್ನು ಸ್ವಚ್ಛ ನೀರಿನಿಂದ ತೊಳೆಯುವುದು ಹೀಗೆ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಾಸ್ತವಿಕ ಉದಾಹರಣೆಗಳು, ಪ್ರದರ್ಶನ ಚಿತ್ರಗಳು ಹಾಗೂ ಮಾದರಿ ರಸಾಯನಿಕ ಬಾಟಲಿಗಳು ಬಳಸಿ ರೈತರಿಗೆ ಪ್ರಾಯೋಗಿಕ ಜ್ಞಾನವನ್ನು ನೀಡಿದರು. ರೈತರು ಉತ್ಸಾಹದಿಂದ ಪ್ರಶ್ನೋತ್ತರದಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಗ್ರಾಮದ ರೈತರು ಈ ಜಾಗೃತಿ ಕಾರ್ಯಕ್ರಮವನ್ನು ಮೆಚ್ಚಿ ಮಾತನಾಡಿ, ಇಂತಹ ವಿಜ್ಞಾನಾಧಾರಿತ ಮಾಹಿತಿ ಗ್ರಾಮೀಣ ರೈತರಿಗೆ ಅತ್ಯಂತ ಅಗತ್ಯ. ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ರೈತರಾದ ನಾಗರಾಜ್, ಸುರೇಶ್, ಭೀಮನಗೌಡ್ರು, ಕುಮಾರಸ್ವಾಮಿ, ಶಿವಮೂರ್ತಿ, ದೇವೇಂದ್ರಪ್ಪ ಮತ್ತು ಇತರ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















