ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜೆಡಿಎಸ್ನ ಅಭಿವೃದ್ಧಿ ಕಾರ್ಯಗಳನ್ನು ಪ್ರತಿ ಗ್ರಾಮಕ್ಕೂ ತಲುಪಿಸುವ ಉದ್ದೇಶವನ್ನಿಟ್ಟುಕೊಂಡ ಜೆಡಿಎಸ್ ಪಂಚರತ್ನ ರಥಯಾತ್ರೆ ಶಿವಮೊಗ್ಗಕ್ಕೆ ಫೆ.22 ಮತ್ತು 23ರಂದು ಆಗಮಿಸಲಿದೆ ಎಂದು ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕಿ ಶಾರದಾ ಪೂರ್ಯಾ ನಾಯ್ಕ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಪಂಚರತ್ನ ಯಾತ್ರೆಯ ನೇತೃತ್ವವನ್ನು ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಭೋಜೇ ಗೌಡ ವಹಿಸಲಿದ್ದಾರೆ. ಇವರ ಜೊತೆಗೆ ಜಿಲ್ಲೆಯ ಎಲ್ಲಾ ಜೆಡಿಎಸ್ ಮಖಂಡರು ಭಾಗವಹಿಸಲಿದ್ದಾರೆ.
ಫೆ.22ರಂದು ಅರೆಬಳಚಿ ಕ್ಯಾಂಪಿನಿಂದ ಪಂಚರತ್ನ ರಥ ಸಾಗುತ್ತದೆ. ಹೊಳೆಹೊನ್ನೂರು, ಆನವೇರಿ, ಮಂಗೋಟೆ, ಹೊಳಲೂರು, ಕೊಮ್ಮನಾಳು, ಕುಂಚೇನಹಳ್ಳಿ, ಆಯನೂರು, ಕುಂಸಿ, ಹಾರನಹಳ್ಳಿ ಮೂಲಕ ಸಾಗಿ ಮಲವಗೊಪ್ಪ ತಲುಪುತ್ತದೆ. ಈ ಮಧ್ಯೆ ಭದ್ರಾವತಿಯ ಕನಕ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿದೆ ಎಂದರು. ಅಲ್ಲಿ ಗ್ರಾಮ ವಾಸ್ತವ್ಯವಿದ್ದು, ಫೆ.23ರಂದು ಬೆಳಿಗ್ಗೆ ಸೂಳೇಬೈಲು ವಾರ್ಡಿನಿಂದ ಯಲವಟ್ಟಿ, ಹಸೂಡಿ, ಶೆಟ್ಟಿಹಳ್ಳಿ, ಕಾಟಿಕೆರೆ, ಬಿ.ಬೀರನಹಳ್ಳಿ, ಪಿಳ್ಳಂಗೆರೆ ಮೂಲಕ ಹೊಳೆಬೆನವಳ್ಳಿ ತಲುಪಲಿದೆ. ಮಧ್ಯಾಹ್ನ 2ರಿಂದ 3 ಗಂಟೆಯವರೆಗೆ ಹೆಚ್.ಡಿ.ಕುಮಾರಸ್ವಾಮಿಯವರು ಮತ್ತೊಮ್ಮೆ ಶಾರದಮ್ಮ ಎಂಬ ಘೋಷಣೆ ಅಡಿ ಬೂತ್ ಮಟ್ಟದ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ ಎಂದರು.
Also read: ಶಿವರಾತ್ರಿ: ಶಿವನ ದರ್ಶನ ಪಡೆದು ಭಕ್ತಿಯ ಭಾವದಲ್ಲಿ ಮಿಂದೆದ್ದ ಭಕ್ತರು
ಜಿಲ್ಲೆಯಲ್ಲಿ ಈಗ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸುವುದು ಖಚಿತವಾಗಿದೆ. ಸೊರಬದಲ್ಲಿ ಅಭ್ಯರ್ಥಿಗಳ ನಡುವೆ ಸ್ವಲ್ಪ ಗೊಂದಲವಿದೆ. ಇನ್ನುಳಿದಂತೆ ಅಭ್ಯರ್ಥಿಗಳಲ್ಲಿ ಯಾವ ಗೊಂದಲವೂ ಇಲ್ಲ. ಶಿವಮೊಗ್ಗ ಕ್ಷೇತ್ರದ ಬಗ್ಗೆ ಇನ್ನೂ ಅಭ್ಯರ್ಥಿಯ ಘೋಷಣೆ ಆಗಿಲ್ಲ. ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಅವರು ಪಂಚರತ್ನ ರಥಯಾತ್ರೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂದರು.
ಜೆಡಿಎಸ್ ಅಧಿಕಾರದಲ್ಲಿದ್ದಾಗ ವಸತಿಗೆ, ಶಿಕ್ಷಣಕ್ಕೆ ಮಹಿಳಾ ಸಬಲೀಕರಣಕ್ಕೆ, ಆರೋಗ್ಯ ಕ್ಷೇತ್ರಕ್ಕೆ, ರೈತರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು. ಅದನ್ನು ಈಗ ನಾವು ಪ್ರತಿ ಮನೆಗೂ ತಲುಪಿಸುತ್ತೇವೆ. ನಾನು ಶಾಸಕಿಯಾಗಿದ್ದಾಗ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ ತುಂಗಾ ಏತನೀರಾವರಿ ಯೋಜನೆ, ಹಳ್ಳಿಗಳ ಅಭಿವೃದ್ಧಿ, ಕುಡಿಯುವ ನೀರು, ರಸ್ತೆ, ತುಂಗಭದ್ರಾ ನದಿಗೆ ಸೇತುವೆ, ಆರೋಗ್ಯ ಸಮುದಾಯಗಳು, ಗ್ರಾಮಾಂತರ ರಸ್ತೆಗಳನ್ನು ನಿರ್ಮಿಸಿದ್ದೇನೆ ಎಂದರು.
ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಸುಮಾರು 11,151 ರೈತರ ಸಾಲವಾದ 43.98 ಕೋಟಿ ರೂ. ಮನ್ನಾ ಮಾಡಿದ್ದಾರೆ. ಈಗ ಮತ್ತೊಮ್ಮೆ ಜೆಡಿಎಸ್ ಅಧಿಕಾರಕ್ಕೆ ಬರಬೇಕಾಗಿದೆ. ಇಡೀ ರಾಜ್ಯ ಸಂಕಟದಲ್ಲಿದೆ. ಉದ್ಯೋಗವಿಲ್ಲ. ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಸಮಸ್ಯೆಗಳು ಸಾವಿರ ಇವೆ. ಇವೆಲ್ಲವನ್ನೂ ಸರಿಪಡಿಸಲು ಶಾಶ್ವತ ಪರಿಹಾರ ಕಂಡುಕೊಳ್ಳಲು ಹೆಚ್.ಡಿ. ಕುಮಾರಸ್ವಾಮಿಯವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗೀತಾ ಸತೀಶ್, ಕಾಂತರಾಜ್, ದಾನೇಶಪ್ಪ, ಸತೀಶ್, ದಾದಾಪೀರ್, ರೇಣುಕಮ್ಮ, ಮಹೇಶಣ್ಣ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post