ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಜೆ.ಎನ್.ಎನ್.ಸಿ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ವಿದ್ಯಾರ್ಥಿಗಳ ನಾವಿನ್ಯ ಯೋಜನೆಗಳ ಪ್ರದರ್ಶನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈಮೇಜ್ ಪ್ರೊಸೆಸಿಂಗ್, ಕೃತಕ ಬುದ್ದಿಮತೆ, ಕ್ರಿಪ್ಟೊಗ್ರಫಿ, ಐ.ಒ.ಟಿ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನಗಳ ಹಿನ್ನಲೆಯೊಳಗೆ ಸುಮಾರು 11 ನಾವಿನ್ಯ ಯೋಜನೆಗಳ ಮೂಲ ಮಾದರಿಯನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಅತ್ಯುತ್ತಮ ಮೂರು ಯೋಜನೆಗಳಿಗೆ ಬಹಮಾನ ವಿತರಿಸಲಾಯಿತು.
ವಿದ್ಯಾರ್ಥಿಗಳಾದ ನಿಖಿತಾ ಮತ್ತು ತಂಡ ರೂಪಿಸಿದ ರಾಸ್ಪ್ಬೆರಿ ಪೈ ಮೂಲಕ ವಿಕಲಚೇತನರಿಗಾಗಿ ಸ್ವಯಂಚಾಲಿತ ಗಾಲಿಕುರ್ಚಿಯ ಸಂಚಾರ ಮತ್ತು ಆರೋಗ್ಯ ಮೇಲ್ವಿಚಾರಣೆ ಯೋಜನೆಗೆ ಪ್ರಥಮ ಬಹುಮಾನ ಲಭಿಸಿದೆ. ಗಾಲಿಕುರ್ಚಿಯ ಮೇಲೆ ಕುಳಿತ ವ್ಯಕ್ತಿಯ ದೇಹದ ಚಲನೆಗೆ ಅನುಗುಣವಾಗಿ ಸ್ವಯಂ ಕಾರ್ಯನಿರ್ವಹಿಸಲಿದೆ.
ರಾಸ್ಪ್ಬೆರಿ ಪೈ ಮೂಲಭೂತ ಅಂತರ್ಗತ ತಂತ್ರಜ್ಞಾನದ ಮೂಲಕ ವ್ಯಕ್ತಿಯು ಗಾಲಿಕುರ್ಚಿಯ ಮೇಲೆ ಕುಳಿತ ಕೂಡಲೇ ಗಾಲಿಯು ಸ್ವಯಂ ನಿರ್ವಹಣೆಗೆ ಸಜ್ಜಾಗಲಿದೆ. ಬಳಕೆದಾರರ ತಲೆ ಎಡಕ್ಕೆ ತಿರುಗಿಸಿದಾಗ ಎಡಕ್ಕೆ ಮತ್ತು ಬಲಕ್ಕೆ ತಿರುಗಿಸಿದಾಗ ಬಲಕ್ಕೆ, ಮೇಲೆ ಕೆಳಗೆ ತಲೆಯಾಡಿಸಿದಾಗ ಗಾಲಿಕುರ್ಚಿಯು ಮುಂದೆ ಹಿಂದೆ ಚಲಿಸಲಿದೆ. ಒಂದು ವೇಳೆ ಗಾಲಿಕುರ್ಚಿಯು ಬೀಳುವ ಸಂದರ್ಭ ಎದುರಾದಲ್ಲಿ ಅಲರಾಂ ಮತ್ತು ವ್ಯಕ್ತಿಯ ಆರೈಕೆದಾರರಿಗೆ ಸ್ವಯಂ ಸಂದೇಶ ರವಾನೆಯಾಗಲಿದೆ. ಜೊತೆಗೆ ಕುರ್ಚಿಯ ಮೇಲೆ ಕುಳಿತ ವ್ಯಕ್ತಿಯ ನಾಡಿಮಿಡಿತ ಹಾಗೂ ತಾಪಮಾನದ ಏರಿಳಿತದ ಕುರಿತ ಮಾಹಿತಿ ಆರೈಕೆದಾರರಿಗೆ ರವಾನೆಯಾಗುವಂತೆ ರೂಪಿಸಲಾಗಿದೆ. ಬ್ಲೂಟುತ್ ಮೂಲಕ ಗೃಹಪಯೋಗಿ ವಸ್ತುಗಳನ್ನು ಕುರ್ಚಿಯಲ್ಲಿ ಅಳವಡಿಸಿದ ಸ್ವಿಚ್ಗಳ ಮೂಲಕ ನಿಯಂತ್ರಿಸಬಹುದಾಗಿದೆ.
ವಿದ್ಯಾರ್ಥಿಗಳಾದ ನಿಮ್ರಾ ಕುಲಸಂ ಮತ್ತು ತಂಡ ರೂಪಿಸಿದ ಸಾರ್ವಜನಿಕ ಉದ್ಯಾನಗಳ ಯಾಂತ್ರೀಕರಣ ಮತ್ತು ಸಾಮಾಜಿಕ ಅಂತರದ ಸ್ವಯಂ ಮೇಲ್ವಿಚಾರಣೆ ಯೋಜನೆಗೆ ದ್ವಿತೀಯ ಬಹುಮಾನ ಲಭಿಸಿದೆ. ಕೊರೊನಾ ವೈರಸ್ ಹಿನ್ನಲೆಯಲ್ಲಿ ಸಾರ್ವಜನಿಕ ಸ್ಥಳಗಳ ಮುಕ್ತ ಬಳಕೆಗೆ ಅವಕಾಶ ನೀಡುವ ಸವಾಲುಗಳಿಗೆ ಈ ಯೋಜನೆ ಪೂರಕವಾಗಿದೆ. ಉದ್ಯಾನಕ್ಕೆ ಪ್ರವೇಶಿಸುವ ಪ್ರತಿಯೊಬ್ಬ ವ್ಯಕ್ತಿ ಆರೋಗ್ಯದ ಮೇಲೆ ನಿಗಾ ವಹಿಸಲು ತಾಪಮಾನ ಸೆನ್ಸಿಂಗ್ ಡೋರ್ ಕಂಟ್ರೋಲ್ ಸಿಸ್ಟಮ್ ವಿನ್ಯಾಸಗೊಳಿಸಲಾಗಿದೆ. ಇದರಿಂದ ಅಧಿಕ ಉಷ್ಣಾಂಶವಿರುವ ವ್ಯಕ್ತಿಯನ್ನು ಉದ್ಯಾನವನಕ್ಕೆ ಪ್ರವೇಶ ನೀಡಲು ಸಾಧ್ಯವಾಗುವುದಿಲ್ಲ. ಜೊತೆಗೆ ಸ್ವಯಂಚಾಲಿತ ಉದ್ಯಾನವನಕ್ಕೆ ತೇವಾಂಶ ಆಧಾರಿತ ನೀರು ಸರಬರಾಜು, ಅವಶ್ಯಕತೆಯ ಆಧಾರದ ಮೇಲೆ ಬೆಳಕಿನ ಪೂರೈಕೆಯನ್ನು ಯೋಜನೆ ಒಳಗೊಂಡಿದೆ.
ವಿದ್ಯಾರ್ಥಿಗಳಾದ ಪ್ರತಿಷ್ಟಾ ಮತ್ತು ತಂಡ ರೂಪಿಸಿದ ಡೀಪ್ ನೆಟ್ವರ್ಕ ಮೂಲಕ ಸ್ವಯಂ ಶ್ವಾಸಕೋಶದ ಗಂಟುಗಳ ವಿಭಜನಾ ಯೋಜನೆಗೆ ತೃತೀಯ ಬಹುಮಾನ ಲಭಿಸಿದೆ. ಶ್ವಾಸಕೋಶದ ಸೊಂಕಿನಿಂದ ಬಳಲುತ್ತಿರುವ ವ್ಯಕ್ತಿಗಳ ಚಿಕಿತ್ಸೆಯಲ್ಲಿ ಸೊಂಕಿನ ಪ್ರಮಾಣವನ್ನು ಸ್ವಯಂಚಾಲಿತ ವೇಗ ಮತ್ತು ನಿಖರವಾಗಿ ಗುರುತಿಸಲು ಈ ಯೋಜನೆ ಸಹಕಾರಿಯಾಗಲಿದೆ.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತೀರ್ಪುಗಾರರಾದ ನಿವೃತ್ತ ಪ್ರಾದ್ಯಾಪಕರಾದ ಪ್ರೋ.ಎಸ್.ಎನ್. ಜಗದೀಶ, ಪ್ರೋ.ಹೆಚ್.ಕೆ. ಹರೀಶ್, ಜೆ.ಎನ್.ಎನ್.ಸಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥ.ಪಿ, ಇನ್ಫ್ರಾಸ್ಟ್ರಕ್ಚರ್ ಡೀನ್ ಡಾ.ಎಂ.ಎಂ. ರಜತ್ ಹೆಗಡೆ, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ವಿ. ಸತ್ಯನಾರಾಯಣ, ಸಹ ಪ್ರಾದ್ಯಾಪಕರಾದ ಡಾ.ಎಸ್. ಪ್ರಮೋದ ಕುಮಾರ್, ಶರತ್ ಎಸ್.ಎಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post