ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ ಕೆ-12 ಟೆಕ್ನೊ ಸರ್ವೀಸ್ ಕಂಪನಿಯ ಸಂಯುಕ್ತಾಶ್ರಯದಲ್ಲಿ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳ ಏರ್ಪಡಿಸಲಾಗಿತ್ತು.
ಸುಮಾರು 170 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಮೇಳದಲ್ಲಿ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಬಿಸಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್ (BDA), ಪೇರೆಂಟ್ ರಿಲೇಷನ್ಶಿಪ್ ಮ್ಯಾನೇಜರ್ (PRM) ಮತ್ತು ಸ್ಕೂಲ್ ಎಕ್ಸಿಕ್ಯೂಟಿವ್ ಸೇರಿದಂತೆ ವಿವಿಧ ಹುದ್ದೆಗಳ ಸುಮಾರು 4 ಲಕ್ಷದಿಂದ 5.20 ಲಕ್ಷವರೆಗಿನ ವಾರ್ಷಿಕ ವೇತನವುಳ್ಳ ಉದ್ಯೋಗ ಪಡೆಯುವಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ.
ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ. ವಿಜಯಕುಮಾರ್ ಅಭಿನಂದಿಸಿದರು. ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಸಿ.ಶ್ರೀಕಾಂತ್ ಮಾತನಾಡಿ, ವಿದ್ಯಾಸಂಸ್ಥೆಗಳಲ್ಲಿ ಏರ್ಪಡಿಸುವ ಉದ್ಯೋಗ ಮೇಳಗಳು ಪದವಿಯ ಜೊತೆಗೆ ಕೈಗಾರಿಕಾ ಅನುಭವ ಮತ್ತು ಉದ್ಯೋಗಾರ್ಹತೆ ಕೌಶಲ್ಯತೆಗಳ ಕುರಿತ ಅವಲೋಕನ ನಡೆಸಲು ಪೂರಕ ವೇದಿಕೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆ-12 ಟೆಕ್ನೊ ಸರ್ವೀಸ್ ಕಂಪನಿಯ ಸಿಎಚ್ಆರ್ಓ ರಾಹುಲ್ ಸಿಂಗ್, ಅಸೋಸಿಯೇಟ್ ಸಿಓಇ ನಿತ್ಯಶ್ರೀ, ಎಂಬಿಎ ವಿಭಾಗದ ಪ್ಲೇಸ್ಮೆಂಟ್ ಸಂಯೋಜಕರಾದ ಡಾ. ಹರ್ಷ ಸಿ. ಮಠದ್ ಮತ್ತು ಡಾ. ಪ್ರವೀಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















