ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪ್ರವಾಸೋದ್ಯಮಕ್ಕಷ್ಟೇ ಅಲ್ಲದೆ ಇಡೀ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಡಿನ ಹೆಮ್ಮೆಯ ಜನನಾಯಕ ಹಾಗೂ ಜಿಲ್ಲೆಯ ಜನರ ಒಲುಮೆ ಗೆದ್ದ ಧೀಮಂತ ನಾಯಕರಾಗಿದ್ದಾರೆ ಎಂದು ಟಾಸ್ಕ್ಫೋರ್ಸ್ ಸದಸ್ಯ ಲಕ್ಷ್ಮೀನಾರಾಯಣ ಕಾಶಿ ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ 79ನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಟಾಸ್ಕ್ಫೋರ್ಸ್, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಹಾಗೂ ಸಾಗರ, ಶಿಕಾರಿಪುರ, ಹೊಸನಗರ ಘಟಕಗಳ ಪರವಾಗಿ ಅಭಿನಂದನೆ ಸಲ್ಲಿಸಿದರು.
ಪ್ರವಾಸೋದ್ಯಮವನ್ನು ರಾಜ್ಯದಲ್ಲಿ ಇಲ್ಲಿಯವರೆಗೆ ಯಾವ ಮುಖ್ಯಮಂತ್ರಿಯೂ ಆದ್ಯತಾ ಅಭಿವೃದ್ಧಿವಲಯ ಎಂದು ಪರಿಗಣಿಸಿರಲಿಲ್ಲ. ಆದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲೆರಡು ತಿಂಗಳಿನಲ್ಲೆ ಪ್ರವಾಸೋದ್ಯಮ ಅಭಿವೃದ್ಧಿ ಚಿಂತನೆಗಾಗಿ ಟಾಸ್ಕ್ಫೋರ್ಸ್ ರಚಿಸಿದರು. ಇದರ ನಡುವೆಯೇ ಸರ್ಕಾರದಿಂದ ಜೋಗ, ಅಂಬುತೀರ್ಥ, ಶಿವಪ್ಪನಾಯಕ ಅರಮನೆ, ನಗರಕೋಟೆ, ಕವಲೇದುರ್ಗ, ಉಡುತಡಿ, ಸಿಂಹಧಾಮ, ಕರೂರು-ಬಾರಂಗಿ ಸೇತುವೆ, ಸಕ್ಕರೆ ಬೈಲಿನಲ್ಲಿ ಜೈವಿಕ ಉದ್ಯಾನವನ ಮುಂತಾದ ಹಲವು ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಾವಿರಾರು ಕೋಟಿರೂ. ಅನುದಾನ ನೀಡಿದ್ದಾರೆ ಎಂದು ವಿವರಿಸಿದರು.
ಕೋವಿಡ್-19 ಹಾಗೂ ಅತಿವೃಷ್ಠಿಯ ಸಂಕಟಗಳನ್ನು ಸಮರ್ಥವಾಗಿ ಎದುರಿಸಿ ಜನಪ್ರಿತಿ ಗಳಿಸಿ, ನಲ್ಮೆಯ ಮುಖ್ಯಮಂತ್ರಿ ಎನಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ಪ್ರವಾಸಿ ತಾಣಗಳನ್ನು ಆಕರ್ಷಣೀಯವಾಗಿಸಲು ಹೆಚ್ಚು ಯೋಜನೆಗಳನ್ನು ನೀಡುತ್ತಾರೆ ಎನ್ನುವ ಭರವಸೆಯೆದೆ ಎಂದು ಹೇಳಿದರು.
ಅವರಂಥ ದೂರದರ್ಶೀಯ, ಜನರೊಲುಮೆಯ ಜನನಾಯಕ, ಛಲಗಾರ, ನಿಷ್ಠಾವಂತ ಜನಪರ ಚಿಂತಕರಿಗೆ ನಾಳೆ ಶಿವಮೊಗ್ಗಯಲ್ಲಿ ನಮ್ಮೊಲುಮೆ ಎಂಬ ಹೆಸರಿನ ಜಿಲ್ಲಾ ನಾಗರೀಕ ಸನ್ಮಾನ ನಡೆಯಲಿದ್ದು, ಅದರಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯೂ ಸೇರಿಕೊಂಡು ನಮ್ಮ ಹೆಮ್ಮೆಯ ನಲುಮೆಯ ನಾಯಕನಿಗೆ ನಮನ ಸಲ್ಲಿಸಿ ಅಭಿನಂದಿಸುತ್ತದೆ. ಜಿಲ್ಲೆಯ ನಾಗರೀಕರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಕಾರ್ಯದರ್ಶಿ ಗೋಪಿನಾಥ್, ಕೆ.ಎಸ್. ಮಂಜುನಾಥ ಶರ್ಮ, ರಾಷ್ಟ್ರೀಯ ಸಮಿತಿ ಸದಸ್ಯ ಅ.ನಾ. ವಿಜಯೇಂದ್ರ ರಾವ್, ರಾಜ್ಯ ಉಪಾಧ್ಯಕ್ಷ ವಿಜಯಕುಮಾರ್, ಅಭಿನಂದನಾ ಸಮಿತಿ ಸದಸ್ಯ ಬಳ್ಳೆಕೆರೆ ಸಂತೋಷ್, ಜಿಪಂ ಸದಸ್ಯ ಪೂಜಾರ್ ಅವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post