ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ನಡೆಯುತ್ತಿದ್ದು, ಅಂತಹ ಬದಲಾಣೆಗಳಿಗೆ ತಕ್ಕಂತೆ ಶಿಕ್ಷಕರ ಅಧ್ಯಯನ ಮುಂದುವರಿಯಲಿ ಎಂದು ವಿಧಾನಪರಿಷತ್ತಿನ ಸದಸ್ಯರಾದ ಡಿ.ಎಸ್. ಅರುಣ್ ಅಭಿಪ್ರಾಯಪಟ್ಟರು
ಶನಿವಾರ ನಗರದ ನ್ಯಾಷನಲ್ ಪಬ್ಲಿಕ್ ಶಾಲೆ ಆವರಣದಲ್ಲಿ ಸಹ್ಯಾದ್ರಿ ಸಹೋದಯ ಶಾಲೆಗಳ ಒಕ್ಕೂಟದ ವತಿಯಿಂದ ‘ಅಧ್ಯಯನ್ – 3’ ವಾರ್ಷಿಕ ಶಿಕ್ಷಕರ ಸಮ್ಮೇಳನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಶಿಕ್ಷಣದ ವ್ಯವಸ್ಥೆಯಲ್ಲಿ ಸಾಕಷ್ಟು ಸವಾಲುಗಳಿವೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ, ಶಿಕ್ಷಣದ ವ್ಯವಸ್ಥೆಯ ಪರಿವರ್ತನಾ ಕಾರ್ಯ ನಡೆಸುತ್ತಿದೆ. ಓದು ಮತ್ತು ಬದುಕು ನಡುವಿನ ವ್ಯತ್ಯಾಸಗಳನ್ನು ನೀವಾರಿಸುವಲ್ಲಿ ಎನ್ಇಪಿ ಪೂರಕವಾಗಿದೆ. ಈ ಹಿನ್ನಲೆಯಲ್ಲಿ ವೈಜ್ಞಾನಿಕ ಹಾಗೂ ವಾಸ್ತವತೆಯ ತಳಹದಿಯ ಬೋಧನೆ ಮತ್ತು ಅಧ್ಯಯನ ನಡೆಯಬೇಕಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾಣಲು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು.
Also read: ಮಡಿಕೇರಿಯಲ್ಲಿ 2.43 ಕೋಟಿ ರೂ. ವೆಚ್ಚದಲ್ಲಿ ಸರ್ವಋತು ರಸ್ತೆ ನಿರ್ಮಾಣಕ್ಕೆ ಚಾಲನೆ
ಮಕ್ಕಳಲ್ಲಿ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸ ಬೆಳೆಸಬೇಕಿದೆ. ಹಿಂದಿನ ದಿನಮಾನದ ಕೂಡು ಕುಟುಂಬಗಳು ಮರೆಯಾಗಿ, ಮಕ್ಕಳನ್ನು ಸೀಮಿತತೆಯ ಒಳಗೆ ಪೋಷಕರು ಬೆಳೆಸುತ್ತಿದ್ದಾರೆ. ಅಂತಹ ಸೀಮಿತತೆಯ ಹೊರತಾಗಿ ಮಕ್ಕಳ ಆಲೋಚನೆ ಮುನ್ನಡೆಯುವಂತೆ ಮಾಡಲು ಶಿಕ್ಷಕರ ಪಾತ್ರ ಅತ್ಯವಶ್ಯಕ. ಕಷ್ಟಗಳನ್ನ ಮತ್ತು ನಿವಾರಿಸುವ ಗುಣಗಳನ್ನು ಕಲಿಸಿಕೊಡದೆ ಇದ್ದರೆ ವಿದ್ಯಾರ್ಥಿಗಳು ಅಪೂರ್ಣರಾಗಿ ಬಿಡುತ್ತಾರೆ ಎಂದರು.
ಗಂಗಾ ಸ್ನಾನ ತುಂಗಾ ಪಾನ ಎಂಬ ಮಾತಿದೆ. ಅದರೇ ತುಂಗೆ ಕಲುಷಿತಗೊಳ್ಳುತ್ತಿದೆ. ಪವಿತ್ರ ಗಂಗೆಯು ಶುದ್ಧಗೊಂಡಂತೆ, ತುಂಗೆಯು ಶುದ್ಧೀಕರಣಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನಪರಿಷತ್ತಿನ ಸದಸ್ಯರಾದ ಬೋಜೆಗೌಡ ಮಾತನಾಡಿ, ಸಮಾಜದ ಮುಖ್ಯ ವಾಹಿನಿಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರ ಜವಾಬ್ದಾರಿ ಮಹತ್ವ ಪೂರ್ಣವಾಗಿದೆ. ಮಂಕುತಿಮ್ಮನ ಕಗ್ಗ ಉಲ್ಲೇಖಿಸುವಂತೆ, ಚಿಂತನೆಗಳ ಮಡುವಿನಲ್ಲಿ ಮುಳುಗದೆ ಬದುಕಿನ ಎಲ್ಲ ಏಳು ಬೀಳುಗಳನ್ನು ನಿರ್ಭಿತಿಯಿಂದ ಎದುರಿಸಬೇಕಿದೆ. ಅಂತಹ ಎದುರಿಸುವ ಗುಣ ಶಿಕ್ಷಣ ಶಿಕ್ಷಕರಿಂದ ಮಕ್ಕಳಿಗೆ ಸಿಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾಡಿ, ಅಧ್ಯಾಪನದಲ್ಲಿ ನಾವೀನ್ಯಯುತ ಬೋಧನಾ ಕೌಶಲ್ಯತೆ ಅತ್ಯವಶ್ಯಕ ವಿಚಾರವಾಗಿದೆ. ಕಲಿಕೆ ಮತ್ತು ಬೋಧನೆಯ ಸುತ್ತಲು ಪ್ರಗತಿಪರ ನಾವೀನ್ಯತೆ ಅಳವಡಿಸುವ ಕಾರ್ಯ ಶಿಕ್ಷಕರು ಮಾಡಬೇಕಿದ್ದು, ಇದರಿಂದಾಗಿ ಮೌಲ್ಯಾಧಾರಿತ ಶಿಕ್ಷಣ ಸಾಧ್ಯವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನ್ಯಾಷನಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ನವೀನ.ಎಂ. ಪಾಯಸ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಿಗೆ ಮೌಲ್ಯ, ನೈತಿಕತೆ ಮತ್ತು ತತ್ವಗಳು ಕುರಿತಾಗಿ ರಾಮಕೃಷ್ಣ ಆಶ್ರಮದ ಸ್ವಾಮಿ ಮಂಗಳನಾಥನಂದಾಜೀ ಮಾತನಾಡಿದರು. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮತ್ತು ನೀತಿ ಕುರಿತು ಡಯಟ್ ಉಪನ್ಯಾಸಕರಾದ ಡಾ.ಜಿ.ವಿ.ಹರಿಪ್ರಸಾದ್, ಅಧ್ಯಯನಕಾರರ ಭಾವನಾತ್ಮಕ ಯೋಗಕ್ಷೇಮ ಕುರಿತು ಮಂಗಳೂರಿನ ಅಕೊಲೇಡ್ಸ್ ಅಕಾಡೆಮಿ ನಿರ್ದೇಶಕರಾದ ಶ್ರೀಕೃಷ್ಣಪ್ರಸಾದ್ ಅಡಪ್ಪಾ, ಪರಿಣಾಮಕಾರಿ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ ಕಲೆ ಮತ್ತು ನಾಟಕದ ಪಾತ್ರ ಕುರಿತು ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎನ್.ಕೆ.ಚಿದಾನಂದ ಮಾತನಾಡಿದರು. ಸಹ್ಯಾದ್ರಿ ಸಹೋದಯ ಶಾಲೆಗಳ ಒಕ್ಕೂಟದ ಸುಮಾರು ಇಪ್ಪತ್ತನಾಲ್ಕು ಶಾಲೆಗಳ ಶಿಕ್ಷಕರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post