ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈ ಬಾರಿಯ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಶಾಸಕರು ಹಾಗೂ ಸಚಿವರಾದ ವೀರಶೈವ ಲಿಂಗಾಯತ ಸಮಾಜದ ನಾಯಕರಿಗೆ ಸನ್ಮಾನ ಸಮಾರಂಭವನ್ನು ಜುಲೈ 5 ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷ ಬಿ.ಶಿವರಾಜ್ ತಿಳಿಸಿದರು.
ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಬುಧವಾರ ಬೆಳಗ್ಗೆ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರುಗಳಾದ ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ವಹಿಸುವರು. ನಾಡಿನ ವಿವಿಧ ಮಠಗಳ ಪೂಜ್ಯರುಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಲಿಂಗಾಯತ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.
ಸರ್ಜಿ ಫೌಂಡೇಶನ್ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಮಾತನಾಡಿ, ರಾಜ್ಯದಲ್ಲಿ ವೀರಶೈವ ಸಮಾಜವು ಅತ್ಯಂತ ಪ್ರಾಬಲ್ಯವನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ 67 ಲಕ್ಷ, ಆಂದ್ರಪ್ರದೇಶದಲ್ಲಿ 12 ಲಕ್ಷ ಮಂದಿ ಇದ್ದರೆ ನಮ್ಮ ರಾಜ್ಯದಲ್ಲಿ ಒಟ್ಟು 1.5 ಕೋಟಿ ಮಂದಿ ವೀರಶೈವರು ಇದ್ದಾರೆ. ಅಲ್ಲದೇ ರಾಜ್ಯದಲ್ಲಿ ಒಟ್ಟು 100 ಕ್ಷೇತ್ರಗಳಲ್ಲಿ ಲಿಂಗಾಯತ ಸಮಾಜವು ಹೆಚ್ಚಿನ ಪ್ರಾಬಲ್ಯವನ್ನು ಹೊಂದಿದೆ. ಇತ್ತೀಚೆಗೆ ನಡೆದ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ 56 ಮಂದಿ ಲಿಂಗಾಯತ ಸಮಾಜದ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿರುವುದು ಸಮಾಜದ ಬಹುದೊಡ್ಡ ಶಕ್ತಿಗೆ ನಿದರ್ಶನವಾಗಿದೆ. ಹಾಗೆಯೇ 2019 ರಲ್ಲಿ ನಡೆದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ 9 ಮಂದಿ ಆಯ್ಕೆಯಾಗಿದ್ದಾರೆ. ಒಬ್ಬರು ರಾಜ್ಯಸಭಾ ಆಯ್ಕೆಯಾಗಿದ್ದಾರೆ. ಹೀಗೆ ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ಸಮಾಜದ ಕೊಡುಗೆ ಬಹು ದೊಡ್ಡದಿದೆ. ಸಮಾಜದಿಂದ ಶಾಸಕರಾಗಿದ್ದಾರೆ, ಸಚಿವರಾಗಿದ್ದಾರೆ, ಸಂಸದರಾಗಿದ್ದಾರೆ, ಕೇಂದ್ರ ಸಚಿವರಾಗಿರುವ ಹಿರಿಮೆಯೂ ಲಿಂಗಾಯತ ಸಮಾಜಕ್ಕಿದೆ ಎಂದು ಹೇಳಿದರು.
Also read: ಶಿವಮೊಗ್ಗ: ಬರದಲ್ಲಿ ಕೆರೆಗೆ ಬಂದ ನೀರು ಕಂಡು ರೈತರಲ್ಲಿ ಮಂದಹಾಸ
ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಶಿವಮೊಗ್ಗ ತಾಲ್ಲೂಕು ಅಧ್ಯಕ್ಷರಾದ ಬಿ.ಜಿ.ಧನ್ರಾಜ್ ಮಾತನಾಡಿ, ಕಳೆದ ಆರು ವರ್ಷಗಳಿಂದ ನಮ್ಮ ಜನಾಂಗದ ಸಂಘಟನೆ ಹಾಗೂ ಶ್ರೇಯೋಭಿವೃದ್ಧಿಗೆ ಶ್ರಮಿಸುವುದರೊಂದಿಗೆ,ನಮ್ಮ ಆಚಾರ, ವಿಚಾರಗಳ ಉಳಿಸುವ ಸಂಕಲ್ಪದೊಂದಿಗೆ ವೇದಿಕೆಯು ಹಲವು ಹೋರಾಟ ನಡೆಸುತ್ತಿದೆ. ಭಾರತೀಯ ಸಂಸ್ಕೃತಿ,ನಾಡು ನುಡಿ ರಕ್ಷಣೆ ಯೊಂದಿಗೆ ನಮ್ಮ ಜನಾಂಗದ ಉನ್ನತಿಯೂ ಮುಖ್ಯವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ನಮ್ಮ ಸಮುದಾಯದ ಕೊಡುಗೆ ಅಪಾರ ಹಾಗೂ ಗಮನಾರ್ಹವಾದುದು ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ವೇದಿಕೆಯ ರಾಷ್ಟ್ರೀಯ ಕಾರ್ಯದರ್ಶಿ ಗೌರಮ್ಮ, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಅನುರಾಧಾ, ಮಧ್ಯಕರ್ನಾಟಕದ ಕೆ.ಎಸ್.ಲಲಿತಾ ಪ್ರಕಾಶ್, ಉಪಾಧ್ಯಕ್ಷೆಯಾದ ಶ್ರೀಮತಿ ಶಾರದಾ, ಜಿಲ್ಲಾ ಉಪಾಧ್ಯಕ್ಷ ರುಗಳಾದ ಕೆ.ಬಿ.ಉಮೇಶ್, ಉಮೇಶ್ ಹಿರೇಮಠ್, ಪ್ರದೀಪ್ ಎಲಿ, ನಗರಾಧ್ಯಕ್ಷ ಬಿ.ಆರ್.ಅವಿನಾಶ್, ಜಿಲ್ಲಾ ಸಹಕಾರ್ಯದರ್ಶಿ ದರ್ಶನ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಜಶೇಖರ್, ತಾಲ್ಲೂಕು ಉಪಾಧ್ಯಕ್ಷ ಪರಮೇಶ್ವರಪ್ಪ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post