ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ : ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್, ವೈವಾಹಿಕ, ಮೋಟಾರು ಪರಿಹಾರ ಪ್ರಕರಣಗಳು, ಚೆಕ್ಬೌನ್ಸ್, ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು ಹಾಗೂ ಹಿಂದೂ ವಾರಸು ಕಾಯ್ದೆಗೆ ಸಂಬಂಧಿಸಿದಂತೆ ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಮುಂತಾದ ವಿಷಯಗಳ ಪ್ರಕರಣಗಳನ್ನು ಗುರುತಿಸಿ, ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಸೆಪ್ಟಂಂಬರ್ 30ರಂದು ಮಧ್ಯಾಹ್ನ 1ರಿಂದ ನಡೆಯಲಿರುವ ಲೋಕ ಅದಾಲತ್ನಲ್ಲಿ ಇತ್ಯರ್ಥಗೊಳಿಸಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುಸ್ತಾಫ ಹುಸೇನ್ ಎಸ್.ಎ. ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಈ ಅದಾಲತ್ನಲ್ಲಿ ಉಭಯ ಕಕ್ಷಿದಾರರ ಒಪ್ಪಿಗೆಯ ಮೇರೆಗೆ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಕ್ರಮ ವಹಿಸಲಾಗುವುದು ಎಂದರು.
ಈ ಅದಾಲತ್ನಿಂದಾಗಿ ಕೊರೋನದಂತಹ ಸಾಂಕ್ರಾಮಿಕದ ಕಾರಣದಿಂದಾಗಿ ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ಅನೇಕ ಪ್ರಕರಣಗಳ ಇತ್ಯರ್ಥಕ್ಕೆ ವೇಗ ಹೆಚ್ಚಲಿದೆ ಎಂದ ಅವರು, ಅನೇಕ ಕುಟುಂಬಗಳಲ್ಲಿನ ಆಸ್ತಿ ಹಂಚಿಕೆ ಸಂಬಂಧ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳಿಂದಾಗಿ ಕೌಟುಂಬಿಕ ಸಂಬಂಧಗಳು ಹಾಳಾಗಿವೆ. ಇಂತಹ ಪ್ರಕರಣಗಳನ್ನು ಗುರುತಿಸಿ, ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಿ ಕೌಟುಂಬಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಕಳೆದ ಸಾಲಿನಲ್ಲಿ ಇಂತಹ ಸುಮಾರು 45 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿತ್ತು ಎಂದರು.
ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳಲ್ಲಿ ದಾಖಲಾಗುತ್ತಿರುವ ಚೆಕ್ಬೌನ್ಸ್ ಪ್ರಕರಣಗಳನ್ನು ನಿಯಂತ್ರಿಸಲು ವಿಶೇಷ ತಂಡ ರಚಿಸಿ, ಪ್ರಕರಣ ದಾಖಲಾಗುವ ಪೂರ್ವದಲ್ಲಿಯೇ ಇತ್ಯರ್ಥಗೊಳಿಸುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದ ಅವರು, ವ್ಯಾವಹಾರಿಕವಾದ ತುರ್ತು ಅಗತ್ಯಗಳಿಗೆ, ತಾತ್ಕಾಲಿಕ ಹೊಂದಾಣಿಕೆಗಾಗಿ ನೀಡಲಾಗುವ ಚೆಕ್ನಿಂದ ಸಮಸ್ಯೆಗಳಿಗೆ ಸಿಲುಕಿ, ಅನೇಕ ವರ್ಷಗಳ ಕಾಲ ಅನಗತ್ಯವಾಗಿ ನ್ಯಾಯಾಲಯಕ್ಕೆ ಅಲೆಯುವುದನ್ನು ತಪ್ಪಿಸಿ, ಅರ್ಹರಿಗೆ ನ್ಯಾಯ ಒದಗಿಸಲು ಈ ಅದಾಲತ್ ಸಹಕಾರಿಯಾಗಲಿದೆ ಎಂದರು.
ಕಳೆದ ಆಗಸ್ಟ್ 14ರಂದು ಜಿಲ್ಲೆಯಾಧ್ಯಂತ ಹಮ್ಮಿಕೊಳ್ಳಲಾಗಿದ್ದ ಬೃಹತ್ ಲೋಕಅದಾಲತ್ನಿಂದಾಗಿ ಗುರುತಿಸಲಾಗಿದ್ದ 8,635ಪ್ರಕರಣಗಳ ಪೈಕಿ 15,013ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಪ್ರಸ್ತುತ ಅವಧಿಯಲ್ಲಿಯೂ ನಿರೀಕ್ಷೆಗೆ ಮೀರಿದ ಸಾಧನೆ ಮಾಡುವ ಸಂಕಲ್ಪ ಮಾಡಲಾಗಿದ್ದು, ನ್ಯಾಯವಾದಿಗಳು ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿದರು.
ದೇಶದಾದ್ಯಂತ ಏರ್ಪಡಿಸುವ ಲೋಕಅದಾಲತ್ನಿಂದಾಗಿ ಹೆಚ್ಚಿನ ಪ್ರಕರಣಗಳು ಇತ್ಯರ್ಥಗೊಳ್ಳುತ್ತಿವೆ. ವಿಶೇಷವಾಗಿ ರಾಜ್ಯದಲ್ಲಿ ಪ್ರತಿಬಾರಿ ನಡೆಯುವ ಅದಾಲತ್ನಲ್ಲಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ದೇಶದಲ್ಲಿಯೇ ಮೊದಲ ಪಂಕ್ತಿಯಲ್ಲಿದೆ, ಇದರಿಂದಾಗಿ ರಾಜ್ಯದ ನ್ಯಾಯಾಲಯಗಳು ಪ್ರಶಂಸೆಗೆ ಒಳಗಾಗಿವೆ ಎಂದರು.
ಜಿಲ್ಲೆಯಲ್ಲಿ ಫೋಕ್ಸೋ ಕಾಯ್ದೆಯಡಿ 300ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನು ಒಂದು ವರ್ಷದ ಕಾಲಾವಧಿಯಲ್ಲಿ ಇತ್ಯರ್ಥಗೊಳಿಸಲು ಪ್ರತ್ಯೇಕವಾದ ನ್ಯಾಯಾಧೀಶರನ್ನು ನೇಮಿಸಲಾಗಿದೆ. ಅಲ್ಲದೇ ಹೆಚ್ಚುವರಿಯಾಗಿ ನ್ಯಾಯಾಧೀಶರನ್ನು ನೇಮಿಸಲು ಉಚ್ಛ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವೇದ್ರಪ್ಪ ಅವರು ಮಾತನಾಡಿ, ಜನಸಾಮಾನ್ಯರಲ್ಲಿ ಕಾನೂನಿನ ಅರಿವು ಮೂಡಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದ ಅವರು, ಲೋಕ ಅದಾಲತ್ ಮಾತ್ರವಲ್ಲದೇ ಮಧ್ಯಸ್ಥಿಕಾ ಕೇಂದ್ರಗಳ ಮೂಲಕವೂ ಪ್ರಕರಣಗಳನ್ನು ಇತ್ಯರ್ಥ ಮಾಡುವ ಮೂಲಕ ಕೌಟುಂಬಿಕ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ವಕೀಲರುಗಳು ಸಹಕರಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಇದರಿಂದಾಗಿ ಸಂಪಾದನೆಯೊಂದೆ ಪ್ರಧಾನವಲ್ಲ ಎಂಬುದು ಸಾಬೀತಾಗಿದೆ ಎಂದರು.
ನ್ಯಾಯಾಲಯಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳಿಗೆ ಜನಸಂಖ್ಯೆಯ ಏರಿಕೆಯೂ ಪ್ರಮುಖ ಕಾರಣವಾಗಿದೆ. ದಾಂಪತ್ಯ ಕಲಹ, ವೈವಾಹಿಕ ಸಂಬಂಧಗಳಿಗೆ ಸಂಬಂಧಪಟ್ಟಂತ ಪ್ರಕರಣಗಳನ್ನು ವ್ಯಾಜ್ಯದಾಖಲಿಸುವ ಪೂರ್ವದಲ್ಲಿಯೇ ಇತ್ಯರ್ಥಗೊಳಿಸಲು ವಕೀಲರುಗಳು ಉತ್ಸುಕರಾಗಿದ್ದಾರೆ. ಇದರಿಂದಾಗಿ ಕೌಟುಂಬಿಕ ಸಾಮರಸ್ಯ ಉಂಟಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಪೂರ್ಣಿಮಾ ಕೆ.ಯಾದವ್ ಅವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post