ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಾದಚಾರಿ ಮಾರ್ಗದಲ್ಲಿದ್ದ ಮರಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ ಜಾಗದಲ್ಲೇ ಅರಣ್ಯ ಇಲಾಖೆಯು ಮತ್ತೆ ಗಿಡಗಳನ್ನು ನೆಡುವುದರ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಒಳಗಾಗಿದ್ದಾರೆ.
ನಗರದ ಬಿ.ಎಚ್.ರಸ್ತೆಯ ಹೋಟೆಲ್ ಒಂದರ ಎದುರಿನಲ್ಲಿದ್ದ ಎರಡು ಕಾಡು ಬಾದಾಮಿ ಮರಗಳನ್ನು ಮಂಗಳವಾರ ತಡರಾತ್ರಿ ದುಷ್ಕರ್ಮಿಗಳು ಗರಗಸ ಹಚ್ಚಿ ಧರೆಗುರುಳಿಸಿದ್ದರು. ಮಾರನೇ ದಿನ ಬೆಳಿಗ್ಗೆ ಇದರ ಸುದ್ದಿ ತಿಳಿಯುತ್ತಿದ್ದಂತೆ ಪರಿಸರಪ್ರೇಮಿಗಳು ದಿಢೀರ್ ಪ್ರತಿಭಟನೆಗೆ ಇಳಿದಿದ್ದರು. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ, ನಗರ ಪಾಲಿಕೆ ಅಧಿಕಾರಿಗಳು ಅಪರಾಧಿಗಳನ್ನು ಹುಡುಕುವುದಾಗಿ ಭರವಸೆ ನೀಡಿದ್ದರಲ್ಲದೆ ಗಿಡಗಳನ್ನು ನೆಡುವುದಾಗಿ ಮಾತು ಕೊಟ್ಟಿದ್ದರು.
ಅದರಂತೆ ಬುಧವಾರವೇ ಓರ್ವನನ್ನು ಪೊಲಿಸರು ವಶಕ್ಕೆ ಪಡೆದಿದ್ದರಲ್ಲದೆ ಇಂದು ಅರಣ್ಯ ಅಧಿಕಾರಿಗಳೇ ಸ್ವತ: ಹಾರೆ, ಪಿಕಾಸು ಹಿಡಿದು ಗುಂಡಿ ತೋಡಿ ಮರಕಡಿತಲೆ ಆದ ಜಾಗದಲ್ಲಷ್ಟೇ ಅಲ್ಲ ಅಕ್ಕ ಪಕ್ಕ ಜಾಗದಲ್ಲೂ 10 ಗಿಡಗಳನ್ನು ನೆಟ್ಟು ತಮ್ಮ ಕರ್ತವ್ಯಪರತೆಯನ್ನು ಮೆರೆದರು. ಅರಣ್ಯ ಇಲಾಖೆಯ ಶಂಕರ ವಲಯದ ಆರ್.ಎಫ್.ಒ. ವಿಜಯಕುಮಾರ್, ಡಿ.ಆರ್.ಎಫ್.ಒ. ನರೇಂದ್ರ ಮತ್ತಿತರ ಅಧಿಕಾರಿಗಳು ಗಿಡ ನೆಡುವ ಕೆಲಸದಲ್ಲಿ ಭಾಗಿಯಾಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post