ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾಲ್ಕು ಗೋಡೆಯ ಶಿಕ್ಷಣದ ಜೊತೆಗೆ ಹೃದಯವಂತಿಕೆಯನ್ನು ಕಲಿಸುವ ನೈತಿಕ ಶಿಕ್ಷಣವನ್ನು ಕಲಿಸಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣ ರಾವ್ ಅಭಿಪ್ರಾಯಪಟ್ಟರು.
ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ವತಿಯಿಂದ ಶನಿವಾರ ಕಾಲೇಜಿನ ಆವರಣದಲ್ಲಿ ವೈಶಾಖ ವೈಭವ ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ಬಿಎ, ಬಿಕಾಂ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭದಲ್ಲಿ (ಗ್ರಾಜುಯೇಷನ್ ಡೇ) ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಿ ಮಾತನಾಡಿದರು.
ಜವಾಬ್ದಾರಿಯುತ ವ್ಯವಸ್ಥೆಯಲ್ಲಿ ನಾವಿದ್ದೇವೆ. ಒಳ್ಳೆಯ ಶಿಕ್ಷಣ ಬೇಕು ನಿಜ. ಅದರೆ ಶಿಕ್ಷಣ ಕಲಿತ ಕೂಡಲೆ ಉತ್ತಮ ನಾಗರಿಕರಾಗುವುದಿಲ್ಲ. ನಮ್ಮ ನಿಜವಾದ ಬದುಕು ರೂಪಿಸುವುದು ಸಮಾಜದಿಂದ ಪಡೆದ ಅನುಭವವೆಂಬ ಶಿಕ್ಷಣ. ಅಂತಹ ವ್ಯಕ್ತಿತ್ವದ ಪರಿಪೂರ್ಣತೆಗೆ ಕಾಲೇಜು ಹಂತದಲ್ಲಿ ಲಭ್ಯವಿರುವ ವೇದಿಕೆಗಳನ್ನು ಬಳಸಿಕೊಳ್ಳಿ.
ಒಂದು ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಏಳನೇ ತರಗತಿಯೆ ಕೊನೆ ಎಂಬ ಮನಸ್ಥಿತಿ ಇತ್ತು. ಬದಲಾದ ಕಾಲಮಾನದಲ್ಲಿ ಸಮಾಜದ ಮುಖ್ಯ ವಾಹಿನಿಯಲ್ಲಿ ಇಂದು ಹೆಣ್ಣು ಮಕ್ಕಳು ಅದ್ಭುತ ಸಾಧಕರಾಗಿ ಹೊರಹೊಮ್ಮುತ್ತಿದ್ದಾರೆ. ವಿಭಿನ್ನವಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ದೇಶವನ್ನು ಉದ್ದೇಶಿಸಿ ಯುದ್ದದ ಕುರಿತಾಗಿ ಇಬ್ಬರು ಮಹಿಳಾ ಕಮಾಂಡರ್ ಮಾಡಿದ ಸುದ್ದಿಗೋಷ್ಟಿಯೇ ಅದ್ಭುತ ಉದಾಹರಣೆ. ಅಂತಹ ದಿಟ್ಟತನವನ್ನು ನಾವೆಲ್ಲರೂ ಅಭಿನಂದಿಸಬೇಕಿದೆ.
ಶಿಕ್ಷಣ ಇದ್ದವರು ಕಸವನ್ನು ಎಸೆದು, ಶಿಕ್ಷಣ ಇಲ್ಲದವರು ಅದನ್ನು ಸ್ವಚ್ಚ ಮಾಡಿದರೆ ಶಿಕ್ಷಣಕ್ಕೆ ಸಿಕ್ಕ ಬೆಲೆಯಾದರು ಏನು. ಹಣದ ಕಡೆಗೆ ನಮ್ಮ ಲಕ್ಷ ಇದೆ. ಅರಮನೆಗಾಗಿ ಶಾಂತಿಯನ್ನು ತ್ಯಜಿಸುತ್ತಿದ್ದಾರೆ. ಅದರೆ ಜೀವನದಲ್ಲಿ ತೃಪ್ತಿ ಮತ್ತು ನೆಮ್ಮದಿಯನ್ನು ನೀಡುವುದು ಅನುಭವ ಮತ್ತು ಸಂಬಂಧಗಳಿಂದ ಮಾತ್ರ ಎಂಬ ಸತ್ಯ ಅರಿಯಬೇಕಿದೆ.
ನಮಗೆ ಎಷ್ಟು ಸ್ನೇಹ ಸಂಬಂಧಗಳಿವೆ ಎನ್ನುವುದಕ್ಕಿಂತ, ಜೀವವಿರುವ ಸಂಬಂಧಗಳು ಎಷ್ಟಿವೆ ಎನ್ನುವುದು ಮುಖ್ಯ. ಗ್ರಹದಿಂದ ಗ್ರಹಕ್ಕೆ ಹಾರುವುದನ್ನು ಕಲಿತ ಮಾನವ ಗೃಹದಿಂದ ಗೃಹಕ್ಕೆ ಹೋಗುವುದನ್ನು ಮರೆತ. ಒಳ್ಳೆಯ ಸಂಬಂಧ ಸ್ನೇಹವೆಂಬ ಗೃಹ ನಮ್ಮದಾಗಬೇಕು. ನಿಜವಾದ ಸಾರ್ಥಕತೆಯಿರುವುದು ಜೀವನದ ಸುದೀರ್ಘತೆಯಲ್ಲಿ ಅಲ್ಲ, ಅದರ ಸುಂದರತೆಯಿಂದ. ಅಂತಹ ಸುಂದರ ಜೀವನಕ್ಕೆ ನೈತಿಕ ಶಿಕ್ಷಣ ಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಎಂ.ಜಗದೀಶ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜನಾಧಿಕಾರಿ ಡಾ.ಓಂಕಾರಪ್ಪ.ಎ.ಪಿ, ಸಾಂಸ್ಕೃತಿಕ ಸಂಘದ ಸಂಚಾಲಕಿ ಕಾವ್ಯಶ್ರೀ.ಡಿ.ಎಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post