ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀಗಂಧ ಸಂಸ್ಥೆ ಸಹಯೋಗದೊಂದಿಗೆ ಸಪ್ತಸ್ವರ, ಹಿಂದೂಸ್ತಾನಿ ಸಂಗೀತ ಸಭಾ ಆಶ್ರಯದಲ್ಲಿ ದಿ.ಅರುಣ್ ಹಂಪಿಹೊಳಿ ಅವರ 67ನೇ ಜನ್ಮದಿನದ ಸವಿನೆನಪಿಗಾಗಿ ಪಂ. ಪ್ರವೀಣ ಗೋಡಕಿಂಡಿ ಮತ್ತು ಪಂ. ಜಯತೀರ್ಥ ಮೇವುಂಡಿ ಇವರಿಂದ `ನಾದನಿನಾದ’ ವೇಣು-ಗಾನ ಜುಗಲ್ಬಂದಿ ಕಾರ್ಯಕ್ರಮ ಮೇ17ರಂದು ಭಾನುವಾರ ಸಂಜೆ 6ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ ಎಂದು ಶ್ರೀಗಂಧ ಸಂಸ್ಥೆಯ ಖಜಾಂಚಿ ಕೆ.ಈ. ಕಾಂತೇಶ್ ಹೇಳಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಖ್ಯಾತ ಕಲಾವಿದರಾದ ಇವರ ಜುಗಲ್ಬಂದಿ ಕಾರ್ಯಕ್ರಮ ಶಿವಮೊಗ್ಗ ಜನತೆಯ ಸೌಭಾಗ್ಯವಾಗಿದೆ. ಇವರಿಬ್ಬರೂ ಒಟ್ಟಿಗೆ ಸಿಗುವುದೇ ಕಷ್ಟ. ಈ ಕಾರ್ಯಕ್ರಮದಲ್ಲಿ ಹಾರ್ಮೋನಿಯಂ ಪಂಡಿತ್ ನರೇಂದ್ರನಾಯಕ್, ತಬಲಾದಲ್ಲಿ ಕೇಶವ ಜೋಷಿ, ಪಕ್ವವಾದ್ಯದಲ್ಲಿ ರಾಘವೇಂದ್ರ ಪ್ರಭು ಮತ್ತು ತಾಳದಲ್ಲಿ ಕಾರ್ತೀಕೇಯ ಪ್ರಭು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀಗಂಧ ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್. ಈಶ್ವರಪ್ಪ ವಹಿಸಲಿದ್ದು, ಸಪ್ತಸ್ವರ ಸಂಗೀತ ಸಭಾದ ಅಧ್ಯಕ್ಷರಾದ ಭಾಸ್ಕರ್ ಜಿ.ಕಾಮತ್ ಉಪಸ್ಥಿತಿ ಇರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗದ ಹಿರಿಯ ವಿದ್ವಾಂಸರುಗಳಾದ ಹೊಸಹಳ್ಳಿ ವೆಂಕಟ್ರಾಮ್, ವಿದ್ವಾನ್ ಹೆಚ್.ಎಸ್.ನಾಗರಾಜ್, ಪಂ. ಹುಮಾಯೂನ್ ಹರ್ಲಾಪುರ್, ಪಂ. ಸಂಗಮೇಶ್ ಗವಾಯಿಗಳು, ಪಂ. ಶಿವಮೊಗ್ಗ ವೇಣುಗೋಪಾಲ್, ಪಂ. ತುಕಾರಾಮ್ ರಂಗಧೋಳ್ ಹಾಗೂ ರೇಖಾ ಹಂಪಿಹೊಳಿಯವರನ್ನು ಅಭಿನಂದಿಸಲಾಗುವುದು ಎಂದರು.
ಭಾಸ್ಕರ್ ಜಿ. ಕಾಮತ್ ಮಾತನಾಡಿ, ಸಪ್ತಸ್ವರ ಸಂಗೀತಸಭಾ ಇದೂವರೆಗೆ ಶಿವಮೊಗ್ಗದಲ್ಲಿ 85 ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ಮಾಡಿದ್ದು, ಪ್ರಪ್ರಥಮ ಭಾರಿಗೆ ಸಂಗೀತ ದಿಗ್ಗಜರ ಜುಗಲ್ಬಂಧಿ, ಕಾರ್ಯಕ್ರಮ ನಡೆಯುತ್ತಿದ್ದು, ಸಾರ್ವಜನಿಕರು ಭಾಗವಹಿಸುವಂತೆ ಕೋರಿದರು.
Also read: ಹಿಜಾಬ್ಗೆ ಅವಕಾಶ, ಕೇಸರಿ ಶಾಲಿಗೆ ನಿರ್ಬಂಧ | ರಾಜ್ಯ ಸರ್ಕಾರದ ವಿರುದ್ಧ ಈಶ್ವರಪ್ಪ ವಾಗ್ದಾಳಿ
ಕೆ.ಎಸ್.ಈಶ್ವರಪ್ಪ ಮಾತನಾಡಿ, ಮೇ15ರಂದು ಬೆಳಿಗ್ಗೆ ಅಬ್ಬಲಗೆರೆ ಸಮೀಪ ಶ್ರೀ ಉಜ್ಜನಿ ಮರುಳಸಿದ್ದೇಶ್ವರ ಮಹಾದ್ವಾರದ ಬಳಿ ವಿಶ್ವಬಂಧು ಗೋಶಾಲೆ ಮತ್ತು ಸಾವಯವ ಕೃಷಿ ತರಬೇತಿ ಶಿಬಿರದ ಉದ್ಘಾಟನೆಯನ್ನು ಶ್ರೀ ರಾಘವೇಶ್ವರಿ ಭಾರತಿ ಮಹಸ್ವಾಮಿಗಳು ನೆರವೇರಿಸಲಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಮಧ್ಯಾಹ್ನ 12 ಗಂಟೆಗೆ ಶುಭಮಂಗಳ ಸಮುದಾಯ ಭವನದಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ಭೋಜನದ ವ್ಯವಸ್ಥೆಯೂ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಮೇಶ್ ಆರಾಧ್ಯ, ಕುಬೇರಪ್ಪ, ದೇವುಕುಮಾರ್, ವಿವೇಕಾನಂದ ನಾಯಕ್, ಶ್ರೀನಿವಾಸ್ ಹಂಪಿಹೊಳಿ, ಕೆ.ಜಿ.ಕುಮಾರಶಾಸ್ತ್ರೀ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















