ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರವೀಂದ್ರ ನಗರದಲ್ಲಿ ವಾಕಿಂಗ್ ಮಾಡುತ್ತಿದ್ದ 83 ವರ್ಷದ ವೃದ್ಧೆಯೊಬ್ಬರ ಚಿನ್ನದ ಸರವನ್ನು ಅಪಹರಿಸಿದ್ದ ಆರೋಪಿಯನ್ನು ಒಂದೇ ದಿನದಲ್ಲಿ ಪೊಲೀಸರು ಪತ್ತೆ ಮಾಡಿದ್ದು, ಈತನ ಬಂಧನದ ಮೂಲಕ ಮೂರು ಸರಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣದ ಹಿನ್ನೆಲೆ:
ಸೆ.11ರಂದು ರವೀಂದ್ರ ನಗರದ ರೈಲ್ವೆ ಹಳಿ ಪಕ್ಕದ ರಸ್ತೆಯಲ್ಲಿ ಸ್ಥಳೀಯ ನಿವಾಸಿ 83 ವರ್ಷದ ವೃದ್ಧೆಯೊಬ್ಬರು ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಬೈಕ್’ನಲ್ಲಿ ಬಂದ ವ್ಯಕ್ತಿಯೊಬ್ಬನು ವೃದ್ಧೆಯ ಕೊರಳಿನಲ್ಲಿದ್ದ 25 ಗ್ರಾಂ ತೂಕದ ಸುಮಾರು 150000 ರೂ. ಬೆಲೆಬಾಳುವ ಚಿನ್ನದ ಸರವನ್ನು ಕಿತ್ತುಕೊಂಡು ಅಪಹರಿಸಿದ್ದನು.
ಘಟನೆ ಕುರಿತಂತೆ ಜಯನಗರ ಠಾಣೆಯಲ್ಲಿ ಬಿಎನ್’ಎಸ್ ಕಲಂ 309(4)ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಪ್ರಕರಣ ಪತ್ತೆಗಾಗಿ ತಂಡವನ್ನು ರಚಿಸಲಾಗಿತ್ತು.
ತನಿಖೆ ಆರಂಭಿಸಿದ ಪೊಲೀಸರು ಅರಸೀಕೆರೆಯ ಬಾಣಾವರ ಮೂಲದ, ಶಿವಮೊಗ್ಗ ರವೀಂದ್ರ ನಗರ ನಿವಾಸಿಯಾಗಿದ ಬಿ.ಎಚ್. ಹರೀಶ್(39) ಎನ್ನುವವನನ್ನು ಸೆ.12ರಂದು ಬಂಧಿಸುವಲ್ಲಿ ಬಂಧಿಸಿದ್ದಾರೆ. ಈತ ತೀರ್ಥಹಳ್ಳಿಯ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.
ಆರೋಪಿಯಿಂದ ಜಯನಗರ ಠಾಣೆಯ ಒಟ್ಟು ಮೂರು ಸರಗಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಒಟ್ಟು, ಮೂರು ಪ್ರಕರಣಗಳಲ್ಲಿ ಸರಗಳ್ಳತನವಾಗಿದ್ದು ಒಟ್ಟು 71 ಗ್ರಾಂನ 03 ಬಂಗಾರದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂದಾಜು 7,10,000 ರೂ. ಮೌಲ್ಯದ ಬಂಗಾರದ ಆಭರಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ 30,000 ರೂ. ಬೆಲೆಯ ಸ್ಪ್ಲೆಂಡರ್ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ಪತ್ತೆಗಾಗಿ ಎಸ್’ಪಿ ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 1 ಎ.ಜಿ. ಕಾರಿಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 2 ಎಸ್. ರಮೇಶ್ ಕುಮಾರ್, ಶಿವಮೊಗ್ಗ ಉಪ ವಿಭಾಗ ಬಿಡಿವೈಎಸ್’ಪಿ ಸಂಜೀವ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಜಯನಗರ ಪೊಲೀಸ್ ಠಾಣೆ ಪಿಐ ಎಚ್.ಎಂ. ಸಿದ್ದೇಗೌಡ, ಪಿಎಸ್’ಐ ಬಿ.ಆರ್. ಕೋಮಲ, ಎಎಸ್’ಐ ಸಿ.ಆರ್. ಕರಿಬಸಪ್ಪ , ಸಿಬ್ಬಂದಿಗಳಾದ ಕೆ. ನಾಗರಾಜ್, ಜಿ. ವಸಂತ, ಎಚ್.ಎಸ್. ಸಚಿನ್, ಬ.ಎಂ. ವೀರೇಶ್ ಅವರುಗಳ ತಂಡದಲ್ಲಿದ್ದರು.
ಈ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ಪ್ರಶಂಸಿಸಿ ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post