ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಜೆಎನ್’ಎನ್ ಎಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ ಶುಕ್ರವಾರ ಕಾಲೇಜಿನ ಆವರಣದಲ್ಲಿ ಜಿಲ್ಲೆಯ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಮ್ಯಾನೇಜ್ಮೆಂಟ್ ಫೆಸ್ಟ್ #ManagementFest ‘ಉತ್ಥಾನ-2025’ ಕಾರ್ಯಕ್ರಮವು ಸಾಂಸ್ಕೃತಿಕ, ಸಂಶೋಧನೆ, ಕ್ರೀಡೆ, ನಿರ್ವಹಣೆ ಕ್ಷೇತ್ರದ ವಿವಿಧ ಸ್ಪರ್ಧೆಗಳೊಂದಿಗೆ, ಸುಂದರವಾಗಿ ಅಲಂಕೃತಗೊಂಡಿದ್ದ ಎಂಬಿಎ ವಿಭಾಗದ ಕಟ್ಟಡವು ನೆರೆದಿದ್ದವರ ಮನಸೂರೆಗೊಳಿಸಿತ್ತು.
Also Read>> Smart Meter Purchase Price is Scientific and Executed with Full Transparency: BESCOM MD Shivashankara
ವಿವಿಧ ಸ್ಪರ್ಧೆಗಳಾದ ಯುಗಳ ಗೀತೆ, ಸಮೂಹ ನೃತ್ಯ, ಬಿಸಿನೆಸ್ ಕ್ವಿಜ್, ಸ್ಮಾರ್ಟ್ ಟ್ಯಾಂಕ್, ಫೈನಾನ್ಸ್ ಗೇಮ್, ಪೇಪರ್ ಪ್ರೆಸಂಟೇಶನ್, ಆ್ಯಡ್ ಜ್ಯಾಪ್, ಟೀಮ್ ಗೇಮ್, ಸ್ಟ್ರೀಟ್ ಪ್ಲೇ, ಫೋಟೋಗ್ರಫಿ ಹಾಗೂ ಷಟಲ್ ಬ್ಯಾಡ್ಮಿಂಟನ್, ಥ್ರೋ ಬಾಲ್ ಹಾಗೂ ವಾಲಿಬಾಲ್ ಸ್ಪರ್ಧೆಗಳಲ್ಲಿ ಸುಮಾರು 38 ಕಾಲೇಜುಗಳ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣ ರಾವ್ ಮಾತನಾಡಿ, ಅಂತರ ಕಾಲೇಜು ಸ್ಪರ್ಧೆಗಳು ಒಬ್ಬ ವಿದ್ಯಾರ್ಥಿಯ ಪ್ರತಿಭಾನ್ವೇಷಣೆ ಹಾಗೂ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಮಹತ್ವವನ್ನು ವಹಿಸುತ್ತದೆ. ಇಂತಹ ಕಾರ್ಯಚಟುವಟಿಕೆಗಳನ್ನು ಸತತ ಒಂಬತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದರು.
ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ. ನಾರಾಯಣ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ವಿದ್ಯಾರ್ಥಿ ಜೀವನದಲ್ಲಿ ಸರ್ವಾಂಗೀಣ ಬೆಳವಣಿಗೆ ಹಾಗೂ ಅಭಿವೃದ್ಧಿಯತ್ತ ಗಮನಹರಿಸಬೇಕು. ಇಂತಹ ಉತ್ಸವದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಅವರ ಕ್ರಿಯಾಶೀಲತೆ ಹಾಗೂ ಪ್ರಬುದ್ಧತೆ ಹೆಚ್ಚುವುದರ ಜೊತೆಗೆ ಅವರ ವ್ಯಕ್ತಿತ್ವ ನಿರ್ಮಾಣವಾಗುವುದೆಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ. ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಶೋಧನಾ ಡೀನ್ ಡಾ.ಎಸ್.ವಿ. ಸತ್ಯನಾರಾಯಣ, ಎಂಬಿಎ ನಿರ್ದೇಶಕ ಡಾ. ಶ್ರೀಕಾಂತ್, ಕಾರ್ಯಕ್ರಮ ಸಂಯೋಜಕ ಡಾ.ಸಂತೋಷ್ ಶಾನಭಾಗ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ತಂಡ ಚಾಂಪಿಯನ್ಸ್ ಗಳಾಗಿ ಹೊರಹೊಮ್ಮಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post