ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸರ್ವೋಚ್ಚ ನ್ಯಾಯಾಲಯ ರೈತ ಹೋರಾಟಕ್ಕೆ ಬೆಂಬಲವಾಗಿ ಸರ್ಕಾರಕ್ಕೆ ಚಾಟಿ ಏಟು ಬೀಸಿರುವುದು ಸ್ವಾಗತಾರ್ಹ. ರೈತರ ಜೊತೆ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರಕ್ಕೆ ಇನ್ನಷ್ಟು ಖಾರವಾಗಿ ಪ್ರತಿಕ್ರಿಯೆ ನೀಡಬೇಕು ಎಂದು ಈ ಮೂಲಕ ಆಮ್ ಆದ್ಮಿ ಪಕ್ಷ ಮನವಿ ಮಾಡಿದೆ.
ಈ ಕುರಿತಂತೆ ಮಾತನಾಡಿರುವ ಎಎಪಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಮೂರು ಮಾರಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಕಳೆದ 65 ದಿನಗಳಿಂದ ನಡೆಯುತ್ತಿರುವ ಐತಿಹಾಸಿಕ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಬಿಜೆಪಿ ಸರ್ಕಾರ ಅಸಾಂವಿಧಾನಿಕ ಮಾರ್ಗಗಳನ್ನು ಪ್ರತಿದಿನ ಹೇರುತ್ತಲೆ ಇದೆ ಎಂದಿದ್ದಾರೆ.ಇದುವರೆಗೂ ನಡೆಸಿರುವ ಎಲ್ಲಾ ಮಾತುಕತೆಗಳು, ಸಂಧಾನಗಳು ವಿಫಲವಾಗಿ ಗಣರಾಜ್ಯೋತ್ಸವ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಹೆದರಿ, ಸರ್ವೋಚ್ಚ ನ್ಯಾಯಾಲಯ ಆಕ್ಷೇಪಣೆ ಸಲ್ಲಿಸಲು ನೇಮಿಸಿರುವ ಸಮಿತಿಯ ನಾಲ್ಕು ಜನರ ಮೇಲೆ ಸರ್ಕಾರದ ಪ್ರಭಾವಿದೆ ಎಂದವರು ಆರೋಪಿಸಿದ್ದಾರೆ.
ಈ 4 ಜನ ಸಮಿತಿ ಸದಸ್ಯರು ಬಹಿರಂಗವಾಗಿ ಕೃಷಿ ಕಾಯ್ದೆಗೆ ಬೆಂಬಲ ನೀಡಿದವರು. ಇವರಿಂದ ರೈತರಿಗೆ ನ್ಯಾಯ ನಿರೀಕ್ಷಿಸಲು ಸಾಧ್ಯವೇ. ಏನಾದರೂ ಮಾಡಿ ರೈತರನ್ನು ಹೋರಾಟದ ಜಾಗದಿಂದ ತೆರವುಗೊಳಿಸಲು ಹೊರಟಿರುವ ಮೋದಿಯವರ ನೇತೃತ್ವದ ಹೇಡಿ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಕಿಡಿ ಕಾರಿದ್ದಾರೆ.
ಸಮಿತಿಯಲ್ಲಿರುವ ಭೂಪಿಂದರ್ ಸಿಂಗ್, ಡಾ. ಪ್ರಮೋದ್ ಕುಮಾರ್ ಜೋಷಿ, ಅಶೋಕ್ ಗುಲಾಟಿ ಮತ್ತು ಅನಿಲ್ ಗನ್ವತ್ ಇದ್ದು ಇವರೆಲ್ಲರೂ ಕಾಯ್ದೆಯ ಪರವಾಗಿರುವವರು ಎಂಬುದಕ್ಕೆ ಆಧಾರವಾಗಿ ಕೃಷಿ ಕಾಯ್ದೆಗಳನ್ನು ಬಹಿರಂಗವಾಗಿ ಬೆಂಬಲಿಸಿ ನೀಡಿರುವ ಹೇಳಿಕೆಗಳೇ ಸಾಕ್ಷಿ. ಸರ್ವೋಚ್ಚ ನ್ಯಾಯಾಲಯ ನೇಮಿಸಿದ ಸಮಿತಿ ಹೇಗಿದೆ ಎಂದರೆ ಪ್ರಪಂಚದ ಅತ್ಯುತ್ತಮ ಪ್ರಧಾನಿ ಯಾರು ಎಂದು ಆಯ್ಕೆ ಮಾಡಲು ಸಂಬಿತ್ ಪಾತ್ರ, ಕಂಗನಾ ರನಾವತ್, ಅರ್ನಬ್ ಗೋಸ್ವಾಮಿ, ರಜತ್ ಶರ್ಮಾ ಅವರನ್ನ ನೇಮಕ ಮಾಡಿದಂತಾಗಿದೆ ಎಂದು ದೂರಿದ್ದಾರೆ.
ಅಂಬಾನಿ ಮತ್ತು ಅಧಾನಿಗೆ ಉಪಯೋಗವಾಗುವಂತೆ ಇರುವ ಕೃಷಿ ಮಸೂದೆಗಳಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ನಡೆಸಿದ ಪ್ರಯತ್ನ ಮತ್ತು ರಾಜ್ಯಸಭೆಯಲ್ಲಿ ಅನುಸರಿಸಿದ ಅಸಾಂವಿಧಾನಿಕ ರೀತಿ ನೀತಿ ಹಾಗೂ ಹೋರಾಟದ ಆದಿಯಲ್ಲಿ ರೈತರನ್ನು ನಡೆಸಿಕೊಂಡ ಬಗೆ ನೋಡಿದರೆ ತಿಳಿಯುತ್ತದೆ. ಸರ್ಕಾರಕ್ಕೆ ಹಾಗೂ ಎಲ್ಲಾ ವ್ಯವಸ್ಥೆಗಳಿಗೆ ಎಷ್ಟು ಕಾಳಜಿ ಇದೆ ಎಂಬುದು. ಕೇಂದ್ರ ಸರ್ಕಾರ ಈ ಎಲ್ಲಾ ನವರಂಗಿ ಆಟಗಳನ್ನು ಬಿಟ್ಟು ನೈಜ ಆಡಳಿತಗಾರರಂತೆ ನಡೆದುಕೊಳ್ಳಲಿ ಎಂದು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post