ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಇಲ್ಲಿನ ಛತ್ರಹಳ್ಳಿ ಗ್ರಾಮದಲ್ಲಿ ದರೋಡೆ ನಡೆಸಿದ್ದ ಆರೋಪಿಗಳಲ್ಲಿ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಛತ್ರದಳ್ಳಿ ಗ್ರಾಮದ ವಾಸಿ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿರುವ ಸಮಯದಲ್ಲಿ 5 ಜನ ಅಪರಿಚಿತ ವ್ಯಕ್ತಿಗಳು ಅವರ ಮನೆಗೆ ನುಗ್ಗಿ, ಅವರ ಕೊರಳಿನಲ್ಲಿದ್ದ ಬಂಗಾರದ ಗುಂಡುಗಳಿದ್ದ ತಾಳಿ ಸರವನ್ನು ಕಿತ್ತುಕೊಂಡು ಹೋಗಿದ್ದರು.
ಈ ಕುರಿತಂತೆ ಸೊರಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಸೊರಬದ ಪ್ರಶಾಂತ್(27), ಮೈಸೂರಿನ ಗಣೇಶ(22) ಹಾಗೂ ಹಾವೇರಿಯ ಪ್ರಶಾಂತ್(20) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ ಕೃತ್ಯಕ್ಕೆ ಬಳಸಿದ ಓಮಿನಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ದೂರು ನೀಡಿದ ಮಹಿಳೆ ಮನೆ ಕಟ್ಟುವ ಸಮಯದಲ್ಲಿ ಅವರಿಗೂ ಹಾಗೂ ಆರೋಪಿತರಿಗೂ ಉಂಟಾದ ಹಣಕಾಸಿನ ವೈಮನಸ್ಸಿನ ಕಾರಣಗಳಿಂದ ಈ ಕೃತ್ಯವು ಜರುಗಿರುವುದು ಈವರೆಗಿನ ತನಿಖೆಯಿಂದ ತಿಳಿದು ಬಂದಿದೆ ಎಂದು ವರದಿಯಾಗಿದೆ.
ಶಿಕಾರಿಪುರ ಡಿವೈಎಸ್’ಪಿ ಶ್ರೀನಿವಾಸಲು ಅವರ ಮಾರ್ಗದರ್ಶನದಲ್ಲಿ ಸೊರಬ ವೃತ್ತ ನಿರೀಕ್ಷಕ ಮರುಳಸಿದ್ದಪ್ಪ, ಪಿಎಸ್’ಐ ಪ್ರಶಾಂತ್ ಕುಮಾರ್ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿತ್ತು.
ಪ್ರಕರಣದಲ್ಲಿ ಇನ್ನು ಕೆಲವು ಆರೋಪಿತರನ್ನು ಬಂಧಿಸುವುದು ಬಾಕಿ ಇದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಪ್ರಕರಣದ ತನಿಖೆಯನ್ನು ಸೊರಬ ಸಿಪಿಐರವರು ಮುಂದುವರೆಸಿರುತ್ತಾರೆ ಎಂದು ಎಸ್ಪಿ ಶಾಂತರಾಜು ತಿಳಿಸಿದ್ದಾರೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post