ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿಗೆ ಸಂಬಂಧಿಸಿದಂತೆ 33 ವರ್ಷಗಳ ಸೇವೆ ಅಥವಾ 60 ವರ್ಷ ಯಾವುದು ಮೊದಲೋ ಅದನ್ನು ಪರಿಗಣಿಸಿ ಸೇವಾ ನಿವೃತ್ತಿಗೊಳಿಸುವ ಬಗ್ಗೆ ನೌಕರರಲ್ಲಿ ಎದ್ದಿರುವ ಊಹಾಪೋಹಗಳಿಗೆ ಕಿವಿಗೊಡದಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ನೌಕರರಿಗೆ ಮನವಿ ಮಾಡಿದ್ದಾರೆ.
ಈ ಸಂಬಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇಂತಹ ಸುಳ್ಳು ಸುದ್ದಿಗಳಿಂದ ನೌಕರರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದಿರುವ ಅವರು ಇಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯದ ಎಲ್ಲಾ ಇಲಾಖೆಗಳ ಎಲ್ಲಾ ಶ್ರೇಣಿಯ ಅಧಿಕಾರಿ-ಸಿಬ್ಬಂಧಿಗಳ ಹಿತ-ಸುಖ ಕಾಯುವ ಹಾಗೂ ಅವರ ಹಕ್ಕು-ಬಾದ್ಯತೆಗಳ ರಕ್ಷಣೆಯಲ್ಲಿ ಸಕ್ರಿಯವಾಗಿದೆ ಎಂದು ತಿಳಿಸಿರುವ ಅವರು, ಸರ್ಕಾರದ ಯಾವುದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಯಾವುದೇ ಓರ್ವ ನೌಕರನ ಸೌಲಭ್ಯಗಳಿಗೆ ಧಕ್ಕೆ ಉಂಟಾಗುವುದನ್ನು ಒಪ್ಪಿಕೊಳ್ಳುವುದಿಲ್ಲ. ಅಂತಹ ಸಂದರ್ಭ ಎದುರಾದಲ್ಲಿ ಸಂಘವು ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದವರು ತಿಳಿಸಿದ್ದಾರೆ.
ಗಳಿಕೆ ರಜೆ ನಗದೀಕರಣ ಸೌಲಭ್ಯ ಸರ್ಕಾರದ ಆದೇಶ: ಸಿ.ಎಸ್. ಷಡಾಕ್ಷರಿ ಅಭಿನಂದನೆ
ಕೋವಿಡ್-19ರ ಹಿನ್ನೆಲೆಯಲ್ಲಿ ಸರ್ಕಾರವು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ 2021ನೇ ಸಾಲಿನ ಕ್ಯಾಲೆಂಡರ್ ವರ್ಷದ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಗೊಳಿಸಿ, ಆದೇಶ ಹೊರಡಿಸಿದ್ದ ಸರ್ಕಾರವು 2021ರ ಅವಧಿಯ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಅವಕಾಶವನ್ನು ಪುನರುಜ್ಜೀವನಗೊಳಿಸಿ ಆದೇಶ ಹೊರಡಿಸಿರುವುದಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಮುಖ್ಯಮಂತ್ರಿಗಳನ್ನು ಅಭಿನಂದಿಸಿದ್ದಾರೆ.
ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 118(2)ರ ಸೌಲಭ್ಯ ಪಡೆಯುವ ಸಲುವಾಗಿ ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ (ಆಯಾ ವರ್ಷದ ಜನವರಿ 01ರಿಂದ ಡಿಸೆಂಬರ್ 31ರೊಳಗಾಗಿ) 15ದಿನಗಳಿಗೆ ಮೀರದ ಗಳಿಕೆ ರಜೆಯನ್ನು ಆಧ್ಯರ್ಪಿಸಿ, ರಜಾ ವೇತನಕ್ಕೆ ಸಮನಾದ ನಗದೀಕರಣ ಪಡೆಯಬಹುದಾದ ಸೌಲಭ್ಯವನ್ನು 2013ರ ಜನವರಿಯಿಂದ ಜಾರಿಗೊಳಿಸಿತ್ತು. ಸರ್ಕಾರ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ಹಿಂಪಡೆದುಕೊಂಡಿರುವುದಕ್ಕೆ ನೌಕರರಲ್ಲಿ ಹರ್ಷ ಮೂಡಿದೆ ಎಂದವರು ತಿಳಿಸಿದ್ದಾರೆ.
ಎಲ್ಲಾ ವೃಂದದ ಅರ್ಹ ಅಧಿಕಾರಿ, ನೌಕರರು ಒಂದು ತಿಂಗಳ ಮುಂಚಿತವಾಗಿ ನೋಡಿ ನೀಡಿ ಜನವರಿ 2021ರಿಂದ ಡಿಸೆಂಬರ್ ಅವಧಿಯಲ್ಲಿ ಅವರ ಇಚ್ಚೆಯಂತೆ ಯಾವುದೇ ಮಾಹೆಯಲ್ಲಿ ಗಳಿಕೆ ರಜೆ ನಗದೀಕರಣ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ ಎಂದವರು ತಿಳಿಸಿದ್ದಾರೆ.
ಗೆಜೆಟೆಡ್ ಅಧಿಕಾರಿಗಳ ಸಂಬಂಧದಲ್ಲಿ 2021ನೇ ಸಾಲಿನ ಗಳಿಕೆ ರಜೆ ನಗದೀಕರಣ ಸೌಲಭ್ಯ ಮಂಜೂರಾತಿ ಉದ್ದೇಶಕ್ಕಾಗಿ ಮಾತ್ರ ಎಚ್.ಆರ್.ಎಂ.ಎಸ್ನಲ್ಲಿ ಲಭ್ಯವಿರುವ ಅಧಿಕಾರಿಗಳ ಗಳಿಕೆ ರಜೆ ಲೆಕ್ಕಾಚಾರದ ಆಧಾರದ ಮೇಲೆ ನಗದೀಕರಣವನ್ನು ಮಂಜೂರು ಮಾಡಲು ಸಕ್ಷಮ ರಜೆ ಮಂಜೂರಾತಿ ಪ್ರಾಧಿಕಾರಿಗಳು ಕ್ರಮ ವಹಿಸಬಹುದಾಗಿದೆ ಎಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಪ್ರಕಟಿಸಿದೆ ಎಂದವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post