ಕಲ್ಪ ಮೀಡಿಯಾ ಹೌಸ್ | ಆಗುಂಬೆ/ಹೊಸನಗರ |
ಆಗುಂಬೆ ಸನಿಹವಿರುವ ಹೊಸನಗರ ತಾಲೂಕು ಕಟ್ಟೆಕೊಪ್ಪ ಗ್ರಾಮದಲ್ಲಿ ಅಂದಾಜು 600 ಎಕರೆ ಅರಣ್ಯ ಭೂಮಿ ಖಾಸಗಿಯವರ ಕಪಿಮುಷ್ಟಿಯಲ್ಲಿ ಸಿಲುಕಿದ್ದು, ಇದನ್ನು ರಕ್ಷಣೆ ಮಾಡಬೇಕು ಎಂದು ಜೀವ ವೈವಿಧ್ಯ ಮಂಡಳಿ ನಿಕಟ ಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಆಗ್ರಹಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಹೊಸನಗರ ತಾಲ್ಲೂಕು ಕಟ್ಟೆಕೊಪ್ಪ ಗ್ರಾಮ ಸರ್ವೆ ನಂ. 98, 72, 115 ರಲ್ಲಿ ಕಂದಾಯ ಅರಣ್ಯ ಪ್ರದೇಶವಿದ್ದು, 2018-19 ರಲ್ಲಿ ಇವುಗಳನ್ನು ಡೀಮ್ಡ್ ಅರಣ್ಯ ಪಟ್ಟಿಗೆ ಸೆರ್ಪಡೆ ಮಾಡಲಾಗಿದೆ. ಈ ಗ್ರಾಮ ಅರಣ್ಯ ಪ್ರದೇಶ ನಿತ್ಯ ಹರಿದ್ವರ್ಣದ ಅರಣ್ಯವಾಗಿ ವರಾಹಿ ಆಣೆಕಟ್ಟು ಮತ್ತು ಮಾಣಿ ಅಣೆಕಟ್ಟು ಹಿನ್ನೀರು ಪ್ರದೇಶಕ್ಕೆ ತಾಗಿಕೊಂಡಿದೆ ಎಂದಿದ್ದಾರೆ.
ಆಗುಂಬೆ ಪ್ರದೇಶದ ಕಟ್ಟೆ ಕೊಪ್ಪ ಅರಣ್ಯಗಳ ರಕ್ಷ ಣೆಗೆ ರಾಜ್ಯ ಅರಣ್ಯ ಇಲಾಖೆ, ಕಂದಾಯ ಇಲಾಖೆ ಧಾವಿಸಬೇಕು.
-ಅನಂತ ಹೆಗಡೆ ಅಶೀಸರ,
ಜೀವ ವೈವಿಧ್ಯ ನಮಂಡಳಿ ನಿಕಟ ಪೂರ್ವ ಅಧ್ಯಕ್ಷ
ಶರಾವತಿ ಅಭಯಾರಣ್ಯ, ಸೋಮೇಶ್ವರ ಅಭಿಯಾರಣ್ಯ, ಅಂಬಾರ ಗುಡ್ಡ ಜೀವ ವೈವಿಧ್ಯ ತಾಣ, ಕೊಡಚಾದ್ರಿ, ಆಗುಂಬೆ ಈ ಎಲ್ಲ ಸೂಕ್ಷ್ಮ ಅರಣ್ಯ ಪ್ರದೇಶಗಳ ಮಧ್ಯೆ ಇರುವ ಪಶ್ಚಿಮ ಘಟ್ಟದ ಹೃದಯಭಾಗದಲ್ಲಿರುವ ಕಟ್ಟೆಕೊಪ್ಪ ಗ್ರಾಮದ 600 ಎಕರೆ ಅರಣ್ಯ ಖಾಸಗಿಯವರ ಕೈಯಲ್ಲಿ ಸಿಲುಕಿದೆ. ಈಗಾಗಲೇ ಅಲ್ಲಿ 60 ಎಕರೆ ಪ್ರದೇಶ ಧ್ವಂಸವಾಗಿದೆ. ಇದೇ ಪ್ರದೇಶದಲ್ಲಿ ಮಿರಿಸ್ವಿಕಾ ಸ್ಟಾಂಪ್’ಗಳಿವೆ. ಮರ ಅರಿಶಿಣದಂಥ ಔಷಧಿ ವೃಕ್ಷಗಳ ಆಗರವೂ ಆಗಿದೆ. ಯಡೂರು ಪ್ರದೇಶ ಭೂ ಕಂಪ, ಭೂ ಕುಸಿತ ಸೂಕ್ಷ್ಮ ವಲಯದಲ್ಲಿ ಬರುತ್ತದೆ ಮಾಹಿತಿ ನೀಡಿದ್ದಾರೆ.
ಅರಣ್ಯದಲ್ಲಿ ಕಾಮಗಾರಿ-ಭೂದಾಖಲೆ ತಿದ್ದುಪಡಿ
2 ವರ್ಷ ಹಿಂದೆಯೆ ಮನವಿ ಮಾಡಿದ್ದರೂ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿರುವ ಅವರು, ಈಗ ಇಲ್ಲಿ ಕಟ್ಟಡಗಳ ನಿರ್ಮಾಣವಾಗಿದೆ. ಅರಣ್ಯ ಭೂಮಿಗೆ ಖಾಸಗಿಯವರು ತಂತಿ ಬೇಲಿ, ಗೇಟುಗಳನ್ನು ಅಳವಡಿಸಿದ್ದಾರೆ ಎಂದಿದ್ದಾರೆ.
ಅಕ್ರಮವಾಗಿ ಭೂ ದಾಖಲೆ ತಿದ್ದುಪಡಿಗೆ ಪ್ರಯತ್ನ ನಡೆಯುತ್ತಿವೆ ಎಂದು ಸ್ಥಳೀಯ ರೈತರು ಹೇಳುತ್ತಾರೆ. ಎಕ್ಕದ್ದೆ, ಕೈನಲ್ಲಿ ದಿಂಡ, ದೊಡ್ಡಿನಮನೆ, ಕರುಣಾಪುರ ಗ್ರಾಮಗಳ ರೈತರು 2020-21 ರಲ್ಲಿ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರು. ಜಿಲ್ಲಾಡಳಿತದ ಗಮನ ಸೆಳೆಯಲಾಗಿತ್ತು. ಆ ಹಂತದಲ್ಲೇ ಕ್ರಮ ಕೈಗೊಂಡಿದ್ದರೆ ನೂರಾರು ಎಕರೆ ಅರಣ್ಯ ನಾಶವಾಗುವುದು ನಿಲ್ಲುತ್ತಿತ್ತು ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.
ಇಂತಹ ಅರಣ್ಯ ಪ್ರದೇಶ ಕಬಳಿಕೆಯ 15 ಪ್ರಕರಣಗಳು ಶಿವಮೊಗ್ಗ ಜಿಲ್ಲೆಯಲ್ಲಿದೆ.
-ಪ್ರೊ.ಬಿ.ಎಂ. ಕುಮಾರಸ್ವಾಮಿ, ಪರಿಸರ ತಜ್ಞ
ವಿಪುಲ ಸಸ್ಯಾಗರ
ನೇರಳೆ, ಧೂಪ, ತೇಗ, ಹೊನ್ನೆ, ಹಲಸು, ಬೆಲ್ಲವಾರ, ಗುಳಮಾವು, ಬಚ್ಚಣ್ಯಾಣೆ, ಭೋಗೆ, ಹೈಗ, ಹುಲುಚಪ್ಪ, ಹೆಬ್ಬಲಸು, ಹರಳು, ಗುರಿಗೆ, ತಾರೆ, ಸುರಹೊನ್ನೆ, ನೆಟ್ಟುಗಾರ, ಬೈನೆ, ಸಂಪಿಗೆ, ಗಣಪೆ, ಬೂರಿ, ಘನತ್ಯೆ, ದೇವದಾರು, ಕೆಂದಲ, ನಂದಿ, ರಾಮಪತ್ರೆ, ಮಂಗಪ್ಪ, ಇಪ್ಪ ಇತ್ಯಾದಿ ಕೇಂದ್ರ ರಾಜ್ಯ ಸರ್ಕಾರ ಪ್ರಕಟಿಸಿದ ವಿನಾಶದ ಅಂಚಿನ ವೃಕ್ಷ ಪ್ರಬೇಧಗಳು ಇಲ್ಲಿವೆ.
ಮೂಲತಃ ಇದು 1940-50 ರಲ್ಲಿ ಸರ್ಕಾರಿ ಕಾನು ಅರಣ್ಯ ಆಗಿತ್ತು. ಆನಂತರ ಖಾಸಗಿಯವರು ಭೂ ದಾಖಲೆ ತಿದ್ದುಪಡಿ ಮಾಡಿಸಿಕೊಂಡಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ.
ಈಗ ಭೂದಾಖಲೆ ಆರ್’ಆರ್ 56ನಲ್ಲಿ ಇಬ್ಬರು ಖಾಸಗಿಯವರಿಗೆ ತಲಾ 300 ಎಕರೆ ಭೂಮಿ ಹೇಗೆ ಸರ್ಕಾರ ನೀಡಲು ಸಾಧ್ಯ. ಈ ಬಗ್ಗೆ ಯಾವ ಉಲ್ಲೇಖ ಇಲ್ಲ ಎಂದು ಭೂ ದಾಖಲೆ ತಜ್ಞರು ಅಭಿಪ್ರಾಯ ನೀಡುತ್ತಾರೆ.
ಇಂತಹ ಸೂಕ್ಷ್ಮ ಅರಣ್ಯಗಳಿಗೆ ರಕ್ಷ ಣೆ ನೀಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
-ಕೆ. ವೆಂಕಟೇಶ ಸಾಗರ, ಜೀವ ವೈವಿಧ್ಯ ಮಂಡಳಿ ಸದಸ್ಯ
ಆಗ್ರಹವೇನು?
ಕಂದಾಯ ಕಾಯಿದೆ, ಅರಣ್ಯ ಕಾಯಿದೆ, ಜೀವ ವೈವಿಧ್ಯ ಕಾಯಿದೆ ಜಾರಿ ಮಾಡಿ ಸೂಕ್ಷ್ಮ ಅರಣ್ಯಗಳ ರಕ್ಷ ಣೆ ಮಾಡಬೇಕು ಎಂದು ವೃಕ್ಷ ಲಕ್ಷ ಆಂದೋಲನ ಸಂಘಟನೆ ಆಗ್ರಹಿಸಿದೆ.
ಜಿಲ್ಲಾಡಳಿತ, ಜಿಲ್ಲಾ ಅರಣ್ಯ ಇಲಾಖೆ ತುರ್ತಾಗಿ ಸ್ಥಳ ಪರಿಶೀಲನೆ ಮಾಡಿ 600 ಎಕರೆ ಡೀಮ್ಡ್ ಅರಣ್ಯ, 25 ಲಕ್ಷ ಗಿಡಮರಗಳು ವೃಕ್ಷಗಳ ನಾಶವಾಗದಂತೆ ರಕ್ಷ ಣೆ ನೀಡಬೇಕು. ಖಾಸಗಿಯವರು ಕಂದಾಯ ಕಾಗದ ಪತ್ರ ತಿದ್ದುಪಡಿ ಅಕ್ರಮ ಮಾಡದಂತೆ ತಡೆ ಹಾಕಬೇಕು. ಯಾವುದೇ ಮರ ಗಿಡ ಕಟಾವಿಗೆ ಹಾಗೂ ಕಾಮಗಾರಿಗೆ ಅವಕಾಶ ನೀಡಬಾರದು ಎಂದು ಗ್ರಾಮಗಳ ಜನ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಸಾಗರ ಎಸಿ ಅವರಿಗೆ ಮನವಿ ಮಾಡಿದ್ದಾರೆ.
(ವರದಿ: ಮಧುರಾಮ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post