ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿ ಕಡತದಲ್ಲಿ ಅಕ್ರಮವಾಗಿ ದಾಖಲಾತಿಗಳನ್ನು ಸೃಷ್ಠಿಸಿರುವ ವ್ಯಕ್ತಿಯ ವಿರುದ್ಧ ತಾಪಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರುದ್ರೇಶ್ ಮತ್ತು ಆತನ ತಾಯಿ ಗಂಗಮ್ಮ ಮುಂತಾದವರು ತಾಪಂ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಧರಣಿ ನಡೆಸಿದರು.
ಮೂಲತಃ ತಾಲೂಕಿನ ಡಿ.ಬಿ. ಹಳ್ಳಿ ವಾಸಿಗಳಾದ ರುದ್ರೇಶ್ ಮತ್ತು ಆತನ ತಾಯಿ ಗಂಗಮ್ಮ ಪ್ರಸ್ತುತ ದಾವಣಗೆರೆಯಲ್ಲಿ ವಾಸವಾಗಿದ್ದಾರೆ. ಡಿ.ಬಿ.ಹಳ್ಳಿಯ ಗ್ರಾಮದಲ್ಲಿ ಇವರ ಒಟ್ಟು ಕುಟುಂಬಕ್ಕೆ ಸೇರಿದ ಹಾಗೂ ಅಜ್ಜಿಯವರಿಂದ ದತ್ತಕ ಪತ್ರದ ಮೂಲಕ ಬಂದಂತಹ ವ್ಯವಸಾಯದ ಸ್ವತ್ತಗಳು, ನಿವೇಶನ ಹಾಗೂ ಮನೆಯ ಸ್ವತ್ತುಗಳಿದ್ದು ಇದೇ ಗ್ರಾಮದ ವಾಸಿ ಸೋದರ ಬಂಧು ಎಂ.ಎಸ್. ಶಿವಕುಮಾರ್ ಎಂಬಾತ ಇವರ ಆಸ್ತಿಯನ್ನು ಈ ಹಿಂದೆಯೇ ಕಬಳಿಸಿದ್ದಕಾರಣ ಇದನ್ನು ರುದ್ರೇಶ್ ಕುಟುಂಬದವರು ಸ್ಥಳೀಯ ನ್ಯಾಯಾಲಯದಲ್ಲಿ ದಾವೆ ಹೂಡಿ ಗೆದ್ದಿದ್ದರು. ಇದನ್ನು ಪ್ರಶ್ನಿಸಿ ಎದುರುದಾರ ಉಚ್ಚನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಈ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ಬಾಕಿಯಿರುವಾಗಲೇ ಶಿವಕುಮಾರ್ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಶೆಟ್ಟಿಹಳ್ಳಿಯ ಗ್ರಾಪಂ ವ್ಯಾಪ್ತಿಯ ಸರ್ವೇ ನಂ 91/3 ರ 0-18 ಗುಂಟೆ ಆಸ್ತಿಯನ್ನು ಕಬಳಿಸಲು ಗ್ರಾಪಂ ಕಚೇರಯ ಅಸಸ್ಮೆಂಟ್ ರಿಜಿಸ್ಟರ್ ಪುಸ್ತಕದಲ್ಲಿ ಎಂ.ಎಸ್. ಶಿವಕುಮಾರ್ ತನ್ನ ಸ್ವಹಸ್ತಾಕ್ಷರದಿಂದ ನಕಲಿ ಖಾತೆ ದಾಖಲು ಮಾಡಿದ್ದಾರೆ. ಇದನ್ನು ತಿಳಿದ ರುದ್ರೇಶ್ ಕುಟುಂಬದವರು ದೂರು ನೀಡಿ ಸರಕಾರಿ ಕಚೇರಿಯ ದಾಖಲೆ ಪುಸ್ತಕದಲ್ಲಿ ಅಕ್ರಮವಾಗಿ ದಾಖಲಾತಿಯನ್ನು ಯಾರು ತಿದ್ದಿದರು, ಶಿವಕುಮಾರ್ ಸ್ವಹಸ್ತಾಕ್ಷ ಹೇಗೆ ಬಂತು? ಇದಕ್ಕೆ ಯಾರ್ಯಾರು ಕಾರಣಕರ್ತರು? ಕೂಡಲೆ ಪತ್ತೆ ಹಚ್ಚಿ ಶಿಸ್ತು ಕ್ರಮಕೈಗೊಳ್ಳಬೇಕು. ಅಕ್ರಮ ಖಾತೆ ರದ್ದು ಪಡಿಸಬೇಕೆಂದು ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಜಿಪಂ ಸಿಇಓ, ತಾಪಂ ಇಓ ಹಾಗೂ ಪಿಡಿಓ ಮುಂತಾದವರಿಗೆ ದೂರು ನೀಡಿ ಎರಡು ತಿಂಗಳಾಗಿದ್ದರೂ ಕ್ರಮಕೈಗೊಂಡಿಲ್ಲದ ಕಾರಣ ನ್ಯಾಯ ಸಿಗುವವರೆಗೆ ನಾವು ಅಹೋರಾತ್ರಿ ಧರಣಿ ನಡೆಸುವುದಾಗಿ ಧರಣಿ ನಿರತ ರುದ್ರೇಶ್ ಮತ್ತು ಆತನ ತಾಯಿ ಗಂಗಮ್ಮ ಹೇಳಿದರು.
ಇವರ ಹೋರಾಟಕ್ಕೆ ರೈತ ಸಂಘದದವರು ಸಹ ಬೆಂಬಲ ವ್ಯಕ್ತಪಡಿಸಿ ಧರಣಿ ಸ್ಥಳದಲ್ಲಿ ಸಂಘದ ತಾಲೂಕು ಅಧ್ಯಕ್ಷ ಹಿರಿಯಣ್ಣಯ್ಯ ಪದಾಧಿಕಾರಿಗಳಾದ ನಾಗರಾಜ್, ಬಸವರಾಜ್, ವೀರೇಶ್ ಮುಂತಾದವರು ಹಾಜರಿದ್ದರು.
ಕ್ರಮ ಕೈಗೊಳ್ಳುವ ಭರವಸೆ ಧರಣಿ ಸ್ಥಗಿತ
ಸಂಜೆಯ ವೇಳೆಗೆ ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ಮಂಜುನಾಥ್ ಅವರು ಸದರಿ ಪ್ರಕರಣದ ಕುರಿತಂತೆ ಮುಂದಿನ ಏಳು ದಿನದ ಒಳಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯ ಹಿಂಬರಹವನ್ನು ಧರಣಿ ನಿರತರಿಗೆ ನೀಡಿದ ಕಾರಣ ಧರಣಿಯನ್ನು ಹಿಂಪಡೆಯಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post