ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶರಣರು ಸಮ ಸಮಾಜದ ಚಿಂತಕರು. ನಮ್ಮ ನಡೆ ನುಡಿಯ ಜೀವನ ಸಿದ್ಧಾಂತವನ್ನು ರೂಪಿಸಿದ ಮಹನೀಯರು ಎಂದು ಸಹ್ಯಾದ್ರಿ ವಾಣಿಜ್ಯ ಹಾಗೂ ನಿರ್ವಹಣಾ ಕಾಲೇಜಿನ ಪ್ರಾಂಶುಪಾಲರಾದ ಡಾ.ವೀಣಾ ಎಂ.ಕೆ. ಅಭಿಪ್ರಾಯ ವ್ಯಕ್ತಪಡಿಸಿದರು.
ಸಹ್ಯಾದ್ರಿ ವಾಣಿಜ್ಯ ಹಾಗೂ ನಿರ್ವಹಣಾ ಕಾಲೇಜು ಕನ್ನಡ ವಿಭಾಗ ಮತ್ತು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ 27ನೆಯ ವಚನ ಮಂಟಪ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶರಣರು ಸಮ ಸಮಾಜದ ಚಿಂತಕರು. ನಮ್ಮ ನಡೆ ನುಡಿಯ ಜೀವನ ಸಿದ್ಧಾಂತವನ್ನು ರೂಪಿಸಿದ ಮಹನೀಯರು. ಲಿಂಗ ಭೇದವನ್ನು, ಜಾತಿ ಭೇದವನ್ನು ವಿರೋಧಿಸುವ ದನಿಯೊಂದು 12ನೆಯ ಶತಮಾನದಲ್ಲಿ ಮೂಡಿ ಬಂತು. ಅದು ಇಂದಿಗೂ ನಮ್ಮ ಸಾಮಾಜಿಕ ಬದುಕಿನಲ್ಲಿ ಬೆಸೆದುಕೊಂದಿದೆ. ಕುವೆಂಪು ಅವರ ವಿಶ್ವ ಮಾನವ ಸಂದೇಶಕ್ಕೆ ವಚನಕಾರರ ಜೀವನ ಆದರ್ಶವೆ ಸ್ಫೂರ್ತಿ. ಮನುಷ್ಯ ಬದುಕಿನ ಘನತೆಯನ್ನು ದುಡಿಮೆಯ ಮೌಲ್ಯವನ್ನು ಶರಣರು ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ ಎಂದರು.
ಬಸವಣ್ಣನವರು ಕಟ್ಟಿದ ಸಮಾಜ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಪ್ರಕಾಶ್ ಎಂ. ಬಾರಂದೂರು ಮಾತನಾಡಿ, ಇಂದಿನ ಸಮಾಜದಲ್ಲಿ ಸಂಬಂಧಗಳು ಕಮರ್ಷಿಯಲ್ ಆಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಬಸವಾದಿ ಶಿವಶರಣರು ನೀಡಿದ ಸಂದೇಶವನ್ನು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ. ಆಧುನಿಕ ಬಂಡುವಾಳಶಾಹಿ ಜಗತ್ತಿನ ಸ್ವಾರ್ಥ ದುರಾಸೆಗಳಿಂದ ನಮ್ಮ ಬದುಕು ಕಲುಷಿತಗೊಂಡಿದೆ. ದಯೆ ಕ್ಷಮೆ ಇಂದಿನ ಜಗತ್ತಿಗೆ ಅಗತ್ಯವಾಗಿದೆ. ಅದನ್ನೇ ಬಸವಣ್ಣನವರು, ಸಕಲ ಜೀವಿಗಳ ಮೇಲೆ ದಯಾ ಭಾವ ತೋರುವುದೇ ಧರ್ಮ. ಹಿಂಸೆ, ದ್ವೇಷಗಳಿಂದ ಬಿಡುಗಡೆ ಪಡೆದು ಪ್ರೀತಿ ದಯೆ ಮೊದಲಾದ ಮಾನವೀಯ ಗುಣಗಳನ್ನು ಹರಡಿದಾಗಲೇ ಅರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದರು.
ವಿದ್ಯಾರ್ಥಿಗಳಾದ ಸುಚಿತ್ ಶಾಸ್ತ್ರಿ, ಮಹೇಂದ್ರ ಶೆಟ್ಟಿ, ಎನ್. ಜೀವನ್, ಟಿ.ಎಸ್. ವೀರೇಶ್ ಹಾಗೂ ಬಿ.ಎನ್. ಸುಶ್ಮಿತಾ ಅವರುಗಳು ವಚನ ಗಾಯನ ಮಾಡಿದರು. ಕುಮಾರಿ ಬಿ.ಎಸ್. ನಿರೀಕ್ಷಾ, ಎಸ್. ಸೃಷ್ಟಿ, ಎಂ. ಕಸ್ತೂರಿ, ಸ್ನೇಹ, ಎಚ್.ಸಿ. ವರ್ಷಿಣಿ ಅವರಿಂದ ಇವರಿಂದ ವಚನ ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಮಹಾರುದ್ರ ಎಚ್.ಎನ್. ಕಾರ್ಯಕ್ರಮದ ಉದ್ದೇಶ ಮಹತ್ವವನ್ನು ವಿವರಿಸಿದರು. ದತ್ತಿದಾನಿಗಳಾದ ಪ್ರೊ.ಎ.ಎಸ್. ಚಂದ್ರಶೇಖರ್, ಭಾರತಿ ಚಂದ್ರಶೇಖರ್, ಆರ್.ಎಸ್. ಸ್ವಾಮಿ, ರೋಟರಿ ವಿಜಯ ಕುಮಾರ್, ಉಪ ಕುಲಸಚಿವರಾದ ಚಂದ್ರಕಾಂತ್ ಎಂ., ಡಾ. ದೊಡ್ಡ ನಾಯ್ಕ್ ಎಚ್, ಕುಮಾರಸ್ವಾಮಿ, ಅಶ್ವಿನಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶುಭಾ ಮರವಂತೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು. ದಿವ್ಯಾ ಹಾಗೂ ಸಿದ್ದಾರೂಢ ಎಂ.ಐ. ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post