ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈತರ ಹಕ್ಕುಪತ್ರ ವಾಜಾಕ್ಕೆ ನೋಟೀಸ್ ನೀಡಿರುವುದನ್ನು ವಾಪಸ್ಸು ಪಡೆಯದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ. ಶ್ರೀನಿವಾಸ್ ಎಚ್ಚರಿಕೆ ನೀಡಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ 50 ರಿಂದ 60 ವರ್ಷಗಳ ಹಿಂದೆ ಹಾಗೂ ಇತ್ತೀಚಿನ ವರ್ಷಗಳಲ್ಲಿ ರೈತರಿಗೆ ಕೊಟ್ಟಿರುವ ಜಮೀನಿನ ಹಕ್ಕುಪತ್ರಗಳನ್ನು ವಜಾ ಮಾಡಲು ಎಸಿ ಕಚೇರಿಯ ಮೂಲಕ ಕಡೇಕಲ್, ಉಂಬಳೇಬೈಲು ಪಂಚಾಯ್ತಿ, ಲಕ್ಕಿನಕೊಪ್ಪ (ಕೊರಲಹಳ್ಳಿ), ಹಾಲಕ್ಕವಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ 600ಕ್ಕೂ ಹೆಚ್ಚು ನೋಟಿಸ್ಗಳನ್ನು ನೀಡಿ ರೈತರಿಗೆ ಅಲೆದಾಡಿಸುತ್ತಿದ್ದಾರೆ. ಅರಣ್ಯ ಇಲಾಖೆ ಸಿಸಿಎಫ್ ಕಚೇರಿಯಿಂದಲೂ ನೋಟೀಸ್ ಕೊಡಲಾಗಿದೆ ಎಂದರು.
600ಕ್ಕೂ ಹೆಚ್ಚು ರೈತರಿಗೆ ನೋಟೀಸ್ ನೋಡಿದ್ದಾರೆ. ಕಂದಾಯ ಇಲಾಖೆ ಕೊಟ್ಟಿರುವ ಹಕ್ಕುಪತ್ರಗಳನ್ನು ವಜಾ ಮಾಡಿ ಎಂದು ಅರಣ್ಯ ಇಲಾಖೆ ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆದಿದೆ. ರೈತರು ಕಾನೂನು ಬಾಹಿರವಾಗಿ ಭೂ ಮಂಜೂರಾತಿ ಪಡೆದುಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಅಪಾಧಿಸಿದೆ. ಇದು ಖಂಡನೀಯ ಎಂದರು.
Also read: ಸೊರಬ | ಮನಸೂರೆಗೊಂಡ ಆಲೆಮನೆ ಹಬ್ಬ
ಸರ್ಕಾರವಾಗಲಿ, ಮಂತ್ರಿಗಳಾಗಲಿ ಇದನ್ನು ಬಗೆಹರಿಸುವ ಕೆಲಸ ಮಾಡುತ್ತಿಲ್ಲ. ಕೋರ್ಟ್ ಆದೇಶ ಇದು ನಾವೇನು ಮಾಡಲು ಆಗುವುದಿಲ್ಲ ಎಂದು ಕೈ ತೊಳೆದು ಕೂತಿದ್ದಾರೆ. ಅಧಿವೇಶನದಲ್ಲಿ ಜಿಲ್ಲೆಯ ರೈತರಿಗೆ ಸರ್ಕಾರ ಹಕ್ಕುಪತ್ರ ನೀಡಿರುವುದನ್ನು ವಜಾ ಮಾಡದಂತೆ ಆಗ್ರಹಿಸಬೇಕು. ಅರಣ್ಯ ಹಕ್ಕು ಕಾಯ್ದೆ ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ರೈತರಿಗೆ ಭೂ ಮಂಜೂರಾತಿ ಮಾಡಲು ಕ್ರಮ ಕೈಗೊಳ್ಳಬೇಕು. ಯಾವುದೇ ಸರ್ಕಾರ ಇರಲಿ ಯಾವುದೇ ಜನಪ್ರತಿನಿಧಿ ಇರಲಿ ನಮ್ಮ ಪರ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
600ಕ್ಕೂ ಹೆಚ್ಚು ಜನಕ್ಕೆ ನೋಟಿಸ್ ಕೊಟ್ಟಿದ್ದಾರೆ. ಚುನಾವಣೆಗೂ ಮುಂಚೆ ಮಂತ್ರಿಗಳು ಶಿವಮೊಗ್ಗಕ್ಕೆ ಬಂದಾಗ ಇದನ್ನು ತಕ್ಷಣ ಸರಿಪಡಿಸುತ್ತೇವೆ ಎಂದವರು ಇದೂವರೆಗೂ ಸರಿಪಡಿಸಿಲ್ಲ. ರೈತರ ಸಮಸ್ಯೆಗೆ ಬೆಲೆ ಇಲ್ಲದಂತಾಗಿದೆ. ರೈತರಿಗೆ ರಕ್ಷಣೆ ಕೊಡಲು ಸಾಧ್ಯವಾಗಿಲ್ಲವೆಂದರೆ ಇಡೀ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಚಳುವಳಿ ಮಾಡುವುದರ ಮೂಲಕ ಶೀಘ್ರದಲ್ಲಿಯೇ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸರ್ಕಾರ ಶರಾವತಿ, ಭದ್ರ, ತುಂಗಾ, ಚಕ್ರ, ಸಾವೆಹಕ್ಲು, ಅಂಬ್ಲಿಗೊಳ ಮುಳುಗಡೆ ಸಂತ್ರಸ್ಥರಿಗೆ ನೀಡಿರುವ ಜಮೀನಿನ ಮಾಲೀಕರಿಗೂ ನೋಟಿಸ್ ನೀಡಿದೆ. 1972 ರಿಂದ ದೇವರಾಜು ಅರಸುರವರು ಕೊಟ್ಟ ದರಖಾಸ್ತು ಜಮೀನು ಮಂಜೂರಾತಿ. ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಕೊಟ್ಟ ಬಗರ್ಹುಕುಂ ಕಾಯ್ದೆ ಅನ್ವಯ ಕೊಟ್ಟು ಹಕ್ಕು ಪತ್ರಗಳನ್ನು ವಜಾ ಮಾಡಲು ನೋಟಿಸ್ ನೀಡಿದೆ. ರಾಜ್ಯ ಸರ್ಕಾರದ ಕಂದಾಯ ಇಲಾಖೆ ಕೊಟ್ಟಿರುವ ಹಕ್ಕು ಪತ್ರಗಳನ್ನು ವಜಾ ಮಾಡಿ ಎಂದು ಅರಣ್ಯ ಇಲಾಖೆ ಇಸಿ ಕಚೇರಿಗೆ ಪತ್ರ ಬರೆದಿದೆ ರೈತರು ಕಾನೂನು ಬಾಹಿರ ಭೂಮಿ ಮಂಜೂರಾತಿ ಪಡೆದಿದ್ದಾರೆ ಎಂದು ಆಪಾದಿಸಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಜಯಪಾಲ್ ದೇಸಾಯಿ, ಚೆಲುವಾಂಬ, ಮಂಜುಳಮ್ಮ, ನಾಗರಾಜ್, ವಸಂತಮ್ಮ, ಆರೀಫ್ ಸೇರಿದಂತೆ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















