ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ #Bigg Boss Rupesh Shetty ನಿರ್ದೇಶಿಸಿ, ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ `ಜೈ’ #Jai ಸಿನಿಮಾ ನವೆಂಬರ್ 14 ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಕಾಣುತ್ತಿದೆ. ಕನ್ನಡದ ಜೊತೆಗೆ ಈ ಸಿನಿಮಾ ತುಳು ಭಾಷೆಯಲ್ಲೂ ನಿರ್ಮಾಣವಾಗಿದ್ದು, ಎರಡು ಭಾಷೆಯಲ್ಲೂ ಭರ್ಜರಿಯಾಗಿ ತೆರೆ ಕಾಣುತ್ತಿದೆ.
ಚಿತ್ರದ ಬಿಡುಗಡೆಯ ಪ್ರಚಾರದ ಭಾಗವಾಗಿಯೇ ಇಂದು ನಗರದಲ್ಲಿ ಚಿತ್ರ ತಂಡ ಪ್ರಚಾರದಲ್ಲಿ ಭಾಗಿಯಾಗಿತ್ತು. ಭಾರತ್ ಸಿನಿಮಾಸ್ನಲ್ಲಿ ಚಿತ್ರದ ಪ್ರೀಮಿಯರ್ ಶೋ ಆಯೋಜಿಸಿದ್ದ ತಂಡ ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ರೂಪೇಶ್ ಶೆಟ್ಟಿ ಮಾತನಾಡಿ, ಚಿತ್ರದ ವಿಶೇಷತೆ ಕುರಿತು ಮಾಹಿತಿ ಹಂಚಿಕೊಂಡರು.
ಶಿವಮೊಗ್ಗ ಜನರು ಚಿತ್ರ ನೋಡಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು. ಇಂದೊಂದು ಪೊಲಿಟಿಕಲ್ ಡ್ರಾಮಾ, ಜೊತೆಗೆ ಸೋಷಿಯಲ್ ಕಾಮಿಡಿ ಕಥಾ ಹಂದರ ಚಿತ್ರ. ಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನಿಗೆ ಇರುವ ಮಹತ್ವದ ಕುರಿತು ಈ ಚಿತ್ರ ಸಾಗುತ್ತದೆ. ಅದರ ಸುತ್ತ ಪ್ರೀತಿ, ಪ್ರೇಮ, ಒಂದಷ್ಟು ಭಾವನಾತ್ಮಕ ಸಂಗತಿಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜಕಾರಣದಲ್ಲಿ ನಾವು ಒಳ್ಳೆಯ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ಏನೆಲ್ಲಾ ಸಮಸ್ಯೆಗಳಾಗುತ್ತವೆ ಎನ್ನುವುದನ್ನು ಹೇಳುವ ಪ್ರಯತ್ನ ಜೈ ಸಿನಿಮಾ ಮೂಲಕ ಆಗಿದೆ ಎಂದರು.
ಕನ್ನಡ ಮತ್ತು ತುಳು ಭಾಷೆಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಈಗಾಗಲೇ ದುಬೈ, ಮಸ್ಕತ್, ಬಹೇರನ್ ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರದ ಪ್ರೀಮಿಯರ್ ಪ್ರದರ್ಶನ ಕಂಡು ಜನಮೆಚ್ಚುಗೆ ಪಡೆದಿದೆ. ನ.14ರಂದು ಈ ಸಿನಿಮಾ ರಿಲೀಸ್ ಆಗಲಿದೆ.
ಈಗಾಗಲೇ ಟೀಸರ್ ಗಮನ ಸೆಳೆದಿದೆ. ಬಾಲಿವುಡ್ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿ #Sunil Shetty ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದಾರೆ, ಸುನೀಲ್ ಶೆಟ್ಟಿ ಅವರ ಜೊತೆ ಕೆಲಸ ಮಾಡಿದ್ದು ಜೀವನದ ಒಂದು ಅದ್ಭುತ ಅನುಭವ. ಅವರನ್ನು ನಿರ್ದೇಶಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ವಿಶೇಷವಾಗಿ ಇದೇ ಮೊದಲ ಬಾರಿಗೆ ತುಳು ಭಾಷೆಯ ಒಂದು ಸಿನಿಮಾ ರಾಜ್ಯಾದ್ಯಂತ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ ಎಂದರು.
ನಾಯಕಿ ನಟಿ ಅದ್ವಿತಿ ಶೆಟ್ಟಿ ಮಾತನಾಡಿ, ಶಿವಮೊಗ್ಗಕ್ಕೆ ಅನೇಕ ಸಲ ಬಂದಿದ್ದೇನೆ, ಇಲ್ಲಿ ಕನ್ನಡ ಸಿನಿಮಾಗಳಿಗೆ ವಿಶೇಷ ಪ್ರೋತ್ಸಾಹ ಸಿಗುತ್ತದೆ. ಅಲ್ಲದೆ ಇದೇ ಮೊದಲ ಬಾರಿಗೆ ಜೈ ಸಿನಿಮಾದ ಮೂಲಕ ತುಳು ಸಿನಿಮಾದಲ್ಲಿ ಅಭಿನಯಸಿದ್ದೇನೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ನಾನಿಲ್ಲಿ ಒಬ್ಬ ಟಿವಿ ರಿಪೋರ್ಟರ್ ಆಗಿ ಕಾಣಿಸಿಕೊಂಡಿದ್ದೇನೆ. ಮಾಧ್ಯಮದವರ ಕಷ್ಟ ಏನು ಎನ್ನುವುದು ಪಾತ್ರದಲ್ಲಿನ ಅಭಿನಯದ ಮೂಲಕ ಗೊತ್ತಾಯಿತು ಎಂದರು.
ಚಿತ್ರದಲ್ಲಿ ಅರವಿಂದ್ ಬೋಳಾರ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ. ಪಡೀಲ್, ದೇವದಾಸ್ ಕಾಪಿಕಾಡ್ ಮುಂತಾದವರು ನಟಿಸಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶಶಿಕುಮಾರ್, ರಘು ಗುಂಡ್ಲು, ದಿವಾಕರ್ ಶೆಟ್ಟಿ, ಶುಭಂ ಹೋಟೆಲ್ ಮಾಲೀಕ ಉದಯ್ ಕಡಂಬ, ರಾಜ್ಕುಮಾರ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















